
2026 ರ ಐಪಿಎಲ್ (IPL 2026) ಮಾರ್ಚ್ 28 ರಿಂದ ಪ್ರಾರಂಭವಾಗಿದೆ. ಆದರೆ ಅದಕ್ಕೂ ಮೊದಲು, ಪ್ರತಿ ಬಾರಿಯ ಐಪಿಎಲ್ನಂತೆ ಈ ಬಾರಿಯೂ ಬಿಸಿಸಿಐ (BCCI), ಲೀಗ್ ಆರಂಭಕ್ಕೂ ಮುನ್ನ ಎಲ್ಲಾ 10 ತಂಡಗಳ ನಾಯಕರೊಂದಿಗೆ ಸಭೆ ನಡೆಸಿತು. ಈ ಸಭೆಯಲ್ಲಿ, ಐಪಿಎಲ್ನ ಕೆಲವು ನಿಯಮಗಳ ಕುರಿತು ಚರ್ಚೆ ನಡೆಸಲಾಗಿದ್ದು, ಕೆಲವು ನಾಯಕರು ಐಪಿಎಲ್ನ ಒಂದು ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಪಿಎಲ್ನ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮಕ್ಕೆ ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು, ಈ ನಿಯಮವನ್ನು ತೆಗೆಯಬೇಕು ಎಂಬ ಮನವಿಯನ್ನು ಮಾಡಿದ್ದಾರೆ. ಆದರೆ ನಾಯಕರ ಮನವಿಯ ಹೊರತಾಗಿಯೂ ಬಿಸಿಸಿಐ ಈ ನಿಯಮವನ್ನು 2027 ರವರೆಗೆ ಮುಂದುವರೆಸುವುದಾಗಿ ತಿಳಿಸಿದೆ.
2023 ರಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಐಪಿಎಲ್ನಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. ಈ ನಿಯಮದ ಪ್ರಕಾರ, ತಂಡಗಳು ಪಂದ್ಯದ ಸಮಯದಲ್ಲಿ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಒಬ್ಬ ಆಟಗಾರನನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಹೀಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡವನ್ನು ಕೂಡಿಕೊಳ್ಳುವ ಆಟಗಾರ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಬಹುದಾಗಿದೆ. ಈ ನಿಯಮ ಜಾರಿಗೆ ಬಂದ ಬಳಿಕ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ.
ಮುಂಬೈನಲ್ಲಿ ನಡೆದ 10 ಐಪಿಎಲ್ ತಂಡಗಳ ನಾಯಕರ ಸಭೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಆದಾಗ್ಯೂ ಈ ನಿಯಮವನ್ನು 2027 ರ ನಂತರ ಮಾತ್ರ ಪರಿಶೀಲಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ. ಅಂದರೆ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದಿನ ಸೀಸನ್ನಲ್ಲೂ ಮುಂದುವರೆಯುವುದು ಖಚಿತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಈ ನಿಯಮವನ್ನು ಬಹಿರಂಗವಾಗಿ ವಿರೋಧಿಸಿದ್ದರು. ಈ ನಿಯಮದಿಂದ ಆಲ್ರೌಂಡರ್ಗಳ ಪಾತ್ರ ಕಡಿಮೆಯಾಗಲಿದೆ ಎಂಬುದು ಅಕ್ಷರ್ ಪಟೇಲ್ ವಾದವಾಗಿದೆ. ಇತ್ತ ರೋಹಿತ್ ಶರ್ಮಾ ಕೂಡ ಈ ನಿಯಮದ ವಿರುದ್ಧ ಧ್ವನಿ ಎತ್ತಿದ್ದರು. ಭಾರತೀಯ ಕ್ರಿಕೆಟ್ನಲ್ಲಿ ಆಲ್ರೌಂಡರ್ಗಳ ಕೊರತೆ ಇರಬಹುದು ಎಂಬ ಕಾರಣಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತಾನು ಒಪ್ಪುವುದಿಲ್ಲ ಎಂದು ರೋಹಿತ್ ಶರ್ಮಾ 2024 ರಲ್ಲಿ ಹೇಳಿದ್ದರು. ಹಾರ್ದಿಕ್ ಪಾಂಡ್ಯ ಕೂಡ ಈ ನಿಯಮದ ವಿರುದ್ಧ ಹೇಳಿಕೆ ನೀಡಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದಾಗಿ ತಂಡದಲ್ಲಿ ಆಲ್ರೌಂಡರ್ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿದೆ ಎಂದಿದ್ದರು. ಅನೇಕ ವಿದೇಶಿ ಆಟಗಾರರು ಸಹ ಈ ನಿಯಮದ ವಿರುದ್ಧ ಮಾತನಾಡಿದ್ದಾರೆ.
ಐಪಿಎಲ್ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್ಸಿಬಿಗೆ ಅಧ್ಯಕ್ಷ
ಐಪಿಎಲ್ ನಾಯಕರ ಸಭೆಯಲ್ಲಿ, ನಾಯಕರೊಬ್ಬರು ಮೊದಲ ಇನ್ನಿಂಗ್ಸ್ನಲ್ಲಿ 10 ಓವರ್ಗಳ ನಂತರವೂ ಚೆಂಡನ್ನು ಬದಲಾಯಿಸುವ ಬೇಡಿಕೆಯನ್ನಿಟ್ಟರು. ಆದರೆ ಅದಕ್ಕೆ ಉಳಿದ ನಾಯಕರಿಂದ ಬೆಂಬಲ ಸಿಗಲಿಲ್ಲ. ಸಾಮಾನ್ಯವಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಇಬ್ಬನಿಯ ಪ್ರಭಾವ ಹೆಚ್ಚಾಗುವ ಕಾರಣದಿಂದಾಗಿ ಈ ನಿಯಮವನ್ನು ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಸಹಾಯಕವಾಗುವಂತೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ತಂಡಗಳ ಅಭ್ಯಾಸಕ್ಕೆ ಸಂಬಂಧಿಸಿದಂತೆ ಐಪಿಎಲ್ ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಹೊಸ ಬಿಸಿಸಿಐ ನಿಯಮಗಳ ಪ್ರಕಾರ, ಪಂದ್ಯದ ದಿನದಂದು ಯಾವ ತಂಡವೂ ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ. ಹಾಗೆಯೇ ಒಂದು ತಂಡ ಅಭ್ಯಾಸ ಮಾಡಿದ ವಿಕೆಟ್ನಲ್ಲಿ ಇನ್ನೊಂದು ತಂಡ ಅಭ್ಯಾಸ ಮಾಡುವಂತಿಲ್ಲ ಎಂಬುದನ್ನು ಸೂಚಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ