ಕೆಎಲ್ ರಾಹುಲ್ ಭರ್ಜರಿ ಶತಕ: ಗೆಲುವಿನತ್ತ ಕರ್ನಾಟಕ
Ranji 2026: ರಣಜಿ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳಿಂದ ಶುರುವಾದ ಈ ಟೂರ್ನಿಯಲ್ಲಿ ಇದೀಗ ಉಳಿದಿರುವುದು 8 ತಂಡಗಳು ಮಾತ್ರ. ಈ ತಂಡಗಳ ನಡುವೆ ಇದೀಗ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದೆ. ಈ ಮ್ಯಾಚ್ಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್ಗೇರಲಿದೆ.

ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವನ್ನು ಪ್ರಥಮ ಇನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾಗಿದ್ದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಕರ್ನಾಟಕ ಪರ ಮಯಾಂಕ್ ಅಗರ್ವಾಲ್ 92 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 173 ರನ್ಗಳಿಸಿ ಆಲೌಟ್ ಆಯಿತು.
ಮುಂಬೈ ಭರ್ಜರಿ ಬ್ಯಾಟಿಂಗ್:
53 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ಪರ ಆಕಾಶ್ ಆನಂದ್ 70 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 36 ರನ್ಗಳಿಸಿದರು. ಇನ್ನು ತನುಷ್ ಕೋಟ್ಯಾನ್ ಅಜೇಯ 48 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ ಬರೋಬ್ಬರಿ 377 ರನ್ಗಳಿಸಿ ಆಲೌಟ್ ಆಯಿತು.
ಕೆಎಲ್ ರಾಹುಲ್ ಶತಕ:
ಮೊದಲ ಇನಿಂಗ್ಸ್ನಲ್ಲಿನ 53 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 325 ರನ್ಗಳ ಗುರಿ ಪಡೆದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಮಯಾಂಕ್ ಅಗರ್ವಾಲ್ ಕೇವಲ 3 ರನ್ಗಳಿಸಿ ಔಟಾಗಿದ್ದಾರೆ. ಆದರೆ ಬಳಿಕ ಬಂದ ದೇವತ್ ಪಡಿಕ್ಕಲ್ 39 ರನ್ಗಳ ಕೊಡುಗೆ ನೀಡಿದರು.
ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಕೆಎಲ್ ರಾಹುಲ್ 147 ಎಸೆತಗಳಲ್ಲಿ 13 ಫೋರ್ಗಳೊಂದಿಗೆ ಶತಕ ಪೂರೈಸಿದ್ದಾರೆ. ಈ ಮೂಲಕ ಕರ್ನಾಟಕ ತಂಡವನ್ನು ಗೆಲುವಿತ್ತ ಕೊಂಡೊಯ್ಯುತ್ತಿದ್ದಾರೆ.
ಇದೀಗ 47 ಓವರ್ಗಳ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು 3 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಸ್ಮರಣ್ ರವಿಚಂದ್ರನ್ ಬ್ಯಾಟಿಂಗ್ ಮುಂದುವರೆಸಿದ್ದು, ಇನ್ನು 116 ರನ್ಗಳಿಸಿದರೆ ಪಂದ್ಯ ಗೆದ್ದು ಸೆಮಿಫೈನಲ್ಗೇರಬಹುದು.
ಮುಂಬೈ ಪ್ಲೇಯಿಂಗ್ 11: ಅಖಿಲ್ ಹೆರ್ವಾಡ್ಕರ್ , ಯಶಸ್ವಿ ಜೈಸ್ವಾಲ್ , ಮುಶೀರ್ ಖಾನ್ , ತುಷಾರ್ ದೇಶಪಾಂಡೆ , ಆಕಾಶ್ ಆನಂದ್ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ (ನಾಯಕ) , ಸೂರ್ಯಾಂಶ್ ಶೆಡ್ಗೆ , ಸಿದ್ಧೇಶ್ ಲಾಡ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ಥಿ.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಮೂವರಿಲ್ಲ… ಆಸ್ಟ್ರೇಲಿಯಾಗೆ ಆಘಾತದ ಮೇಲೆ ಆಘಾತ
ಕರ್ನಾಟಕ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಮಾಯಾಂಕ್ ಅಗರ್ವಾಲ್ , ಕರುಣ್ ನಾಯರ್ , ದೇವದತ್ತ್ ಪಡಿಕ್ಕಲ್ (ನಾಯಕ) , ಶ್ರೇಯಸ್ ಗೋಪಾಲ್ , ಸ್ಮರಣ್ ರವಿಚಂದ್ರನ್ , ಕೃತಿಕ್ ಕೃಷ್ಣ (ವಿಕೆಟ್ ಕೀಪರ್) ವಿದ್ಯಾಧರ ಪಾಟೀಲ್ , ಪ್ರಸಿದ್ಧ್ ಕೃಷ್ಣ , ಶಿಖರ್ ಶೆಟ್ಟಿ ,ವಿಧ್ವತ್ ಕಾವೇರಪ್ಪ.
