
ಗಾಲೆ ಟೆಸ್ಟ್ನಲ್ಲಿ ಶ್ರೀಲಂಕಾದ ಮೊದಲ ಇನ್ನಿಂಗ್ಸ್ 284 ರನ್ಗಳಿಗೆ ಅಂತ್ಯವಾಗಿದೆ. ಇದರೊಂದಿಗೆ ಟೀಂ ಇಂಡಿಯಾಕ್ಕೆ (India vs Sri Lanka) ಮೊದಲ ಇನ್ನಿಂಗ್ಸ್ನಲ್ಲಿ 178 ರನ್ಗಳ ಮುನ್ನಡೆ ಸಿಕ್ಕಿದೆ. ಆದಾಗ್ಯೂ ಶ್ರೀಲಂಕಾದ ಕಳಪೆ ಆರಂಭವನ್ನು ನೋಡಿದಾಗ ಇಷ್ಟು ಮೊತ್ತ ಕಲೆಹಾಕುವುದು ಕಷ್ಟಕರವಾಗಿತ್ತು. ಆದರೆ ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಲಂಕಾ ತಂಡಕ್ಕೆ ಲಾಭ ಮಾಡಿಕೊಟ್ಟಿತು. ಅದರಲ್ಲೂ ಕೆಎಲ್ ರಾಹುಲ್ (KL Rahul) ಕೈಚೆಲ್ಲಿದ ಕ್ಯಾಚ್ ತಂಡಕ್ಕೆ ಬರೋಬ್ಬರಿ 60 ರನ್ಗಳ ದಂಡ ಕಟ್ಟುವಂತೆ ಮಾಡಿತು.
ವಾಸ್ತವವಾಗಿ ನಿರೋಷನ್ ಡಿಕ್ವೆಲ್ಲಾ ಅವರ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಬಿಟ್ಟರು. ಕೆಎಲ್ ರಾಹುಲ್ ಮಾಡಿದ ಈ ತಪ್ಪು ಟೀಂ ಇಂಡಿಯಾಕ್ಕೆ ತುಂಬಾ ದುಬಾರಿಯಾಯಿತು. ಡಿಕ್ವೆಲ್ಲಾಗೆ ರಾಹುಲ್ ಜೀವದಾನ ನೀಡಿದಾಗ ಅವರು ಕೇವಲ 20 ರನ್ ಬಾರಿಸಿದ್ದರು. ರಾಹುಲ್ ಕ್ಯಾಚ್ ಬಿಟ್ಟ ಬಳಿಕ ಈ ಜೀವದಾನದ ಲಾಭ ಪಡೆದ ಡಿಕ್ವೆಲ್ಲಾ ಬರೋಬ್ಬರಿ 80 ರನ್ಗಳ ಇನ್ನಿಂಗ್ಸ್ ಅಡಿದರು. ಮಾತ್ರವಲ್ಲದೆ ಸೋನಲ್ ದಿನುಷಾ ಅವರೊಂದಿಗೆ 6ನೇ ವಿಕೆಟ್ಗೆ 146 ರನ್ಗಳ ಜೊತೆಯಾಟ ಕೂಡ ಕಟ್ಟಿದರು. ಇದು ಶ್ರೀಲಂಕಾವನ್ನು ಫಾಲೋ ಆನ್ನಿಂದ ಪಾರು ಮಾಡಿತು.
ಮಾನವ್ ಸುತಾರ್ ಬೌಲ್ ಮಾಡಿದ 36 ನೇ ಓವರ್ನ ನಾಲ್ಕನೇ ಎಸೆತವನ್ನು ಡಿಕ್ವೆಲ್ಲಾ ಚೆಂಡನ್ನು ಕಟ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್ನ ಅಂಚಿಗೆ ತಾಗಿ ಮೊದಲ ಸ್ಲಿಪ್ನಲ್ಲಿ ನಿಂತಿದ್ದ ರಾಹುಲ್ ಕಡೆಗೆ ಹೋಯಿತು. ಆದರೆ ರಾಹುಲ್ ಆ ಕ್ಯಾಚ್ ಅನ್ನು ಕೈಬಿಟ್ಟರು. ಒಂದು ವೇಳೆ ರಾಹುಲ್ ಆ ಕ್ಯಾಚ್ ಹಿಡಿದಿದ್ದರೆ, ಶ್ರೀಲಂಕಾ ತಂಡವನ್ನು 200 ರನ್ಗಳ ಒಳಗೆ ಆಲೌಟ್ ಮಾಡಬಹುದಿತ್ತು. ಇದರಿಂದ ಲಂಕಾ ತಂಡದ ಮೇಲೆ ಫಾಲೋ ಆನ್ ಹೇರಬಹುದಿತ್ತು. ಆದರೆ ರಾಹುಲ್ ಬಿಟ್ಟ ಕ್ಯಾಚ್ನಿಂದ ಟೀಂ ಇಂಡಿಯಾ ಮೇಲುಗೈ ಸಾಧಿಸುವಲ್ಲಿ ವಿಫಲವಾಯಿತು.
ಕ್ಯಾಚ್ಗಳನ್ನು ಕೈಬಿಡುವುದು ಪಂದ್ಯ ಸೋಲುವುದಕ್ಕೆ ಸಮ ಎಂಬುದು ಕೆಎಲ್ ರಾಹುಲ್ಗೂ ತಿಳಿದಿದೆ. ಅದಕ್ಕಾಗಿಯೇ ಅವರು ಪಂದ್ಯಗಳಿಗೆ ಮೊದಲು ಕ್ಯಾಚಿಂಗ್ ಅಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಮೂರು ದಿನಗಳ ಹಿಂದೆ ಗಾಲೆಯಲ್ಲಿ, ಅವರು ಸ್ಲಿಪ್ನಲ್ಲಿ ವ್ಯಾಪಕವಾಗಿ ಕ್ಯಾಚಿಂಗ್ ಅಭ್ಯಾಸ ಮಾಡಿದರು, ಆದರೆ ಪಂದ್ಯದಲ್ಲಿ ಮತ್ತದೇ ತಪ್ಪನ್ನು ರಾಹುಲ್ ಮಾಡಿದರು. ಕೆಎಲ್ ರಾಹುಲ್ ಕ್ಯಾಚ್ ಕೈಬಿಟ್ಟಿದ್ದರಿಂದ ಅಭಿಮಾನಿಗಳು ಕೂಡ ತುಂಬಾ ಕೋಪಗೊಂಡಿದ್ದರು. ಅವರು ರಾಹುಲ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಿದರು.
IND vs SL: 19 ವರ್ಷಗಳ ಇತಿಹಾಸ ಪುನರಾವರ್ತಿಸಲು ಟೀಂ ಇಂಡಿಯಾ ವಿಫಲ
ಕ್ಯಾಚ್ಗಳನ್ನು ಬಿಡುವುದು ಕೇವಲ ಕೆಎಲ್ ರಾಹುಲ್ಗೆ ಮಾತ್ರ ಸಮಸ್ಯೆಯಲ್ಲ, ಟೀಂ ಇಂಡಿಯಾಕ್ಕೂ ಇದು ಪ್ರಮುಖ ಸಮಸ್ಯೆಯಾಗಿದೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ, ತಂಡವು ಮೂರು ತಿಂಗಳಲ್ಲಿ 28 ಕ್ಯಾಚ್ಗಳನ್ನು ಕೈಚೆಲ್ಲಿದೆ. ಟೀಂ ಇಂಡಿಯಾದ ಈ ನ್ಯೂನತೆ ಹೀಗೆ ಮುಂದುವರೆದರೆ ಪಂದ್ಯದ ಫಲಿತಾಂಶ ಏನು ಬೇಕಾದರೂ ಆಗಬಹುದು ಇದರಿಂದ ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ರೇಸ್ನಿಂದ ಹೊರಬೀಳಬಹುದು.