ಡಾಕ್ಟರ್ ಸರ್ಟಿಫಿಕೇಟ್ ಇದ್ದರೆ ಸಾಕಾ? ಸುಂದರ್ ಆಯ್ಕೆ ವಿರುದ್ಧ ಶ್ರೀಕಾಂತ್ ಕಿಡಿ

ಅಫ್ಘಾನಿಸ್ತಾನ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸುತ್ತಿದ್ದಂತೆ, ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ. ಇತ್ತೀಚಿನ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಆಯ್ಕೆ ಸಮಿತಿಯು ಪೂರ್ಣ ಪ್ರಮಾಣದ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆದರೆ, ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯನ್ನು ಮಾಜಿ ಮುಖ್ಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಡಾಕ್ಟರ್ ಸರ್ಟಿಫಿಕೇಟ್ ಇದ್ದರೆ ಸಾಕಾ? ಸುಂದರ್ ಆಯ್ಕೆ ವಿರುದ್ಧ ಶ್ರೀಕಾಂತ್ ಕಿಡಿ
ವಾಷಿಂಗ್ಟನ್ ಸುಂದರ್
Image Credit source: GettyImages

Updated on: Sep 05, 2026 | 8:29 AM

ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯನ್ನು ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ತೀವ್ರವಾಗಿ ಟೀಕಿಸಿದ್ದು, ಕೇವಲ ವೈದ್ಯರ ಪ್ರಮಾಣಪತ್ರದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯ್ಕೆಗಾರರ ಈ ನಿರ್ಧಾರವು ಹತಾಶೆ ಹಾಗೂ ಭಯದಿಂದ ಕೂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ವಾಷಿಂಗ್ಟನ್ ಸುಂದರ್ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದರು. ಅಂದಿನಿಂದ ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ.

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡಿದ ಶ್ರೀಕಾಂತ್, “ಕೇವಲ ವೈದ್ಯಕೀಯ ಪ್ರಮಾಣಪತ್ರ ಇಟ್ಟುಕೊಂಡು ಯಾರನ್ನೂ ತಂಡಕ್ಕೆ ಆಯ್ಕೆ ಮಾಡಬಾರದು. ಭಾರತ ತಂಡಕ್ಕೆ ಮರಳುವ ಮುನ್ನ ಅವರು ಯಾವುದಾದರೂ ಒಂದು ಮಟ್ಟದ ದೇಶೀಯ ಅಥವಾ ಸ್ಪರ್ಧಾತ್ಮಕ ಕ್ರಿಕೆಟ್ ಆಡಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಬೇಕಿತ್ತು” ಎಂದು ವಾದಿಸಿದ್ದಾರೆ.

ಮರುಕಳಿಸುತ್ತಿರುವ ಗಾಯದ ಸಮಸ್ಯೆ:

ವಾಷಿಂಗ್ಟನ್ ಸುಂದರ್ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಕಾಂತ್, “ವಾಷಿಂಗ್ಟನ್ ಸುಂದರ್ ಪ್ರತಿ ಎರಡು ಅಥವಾ ಮೂರು ಸರಣಿಗಳ ನಂತರ ಗಾಯದ ಸಮಸ್ಯೆಗೆ ತುತ್ತಾಗುತ್ತಿರುತ್ತಾರೆ. ಅಲ್ಲದೆ ಸುಂದರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಲಯ ಕಳೆದುಕೊಂಡಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಟಿ20 ಸರಣಿಗಳಲ್ಲಿ ಎದುರಾಳಿ ಬ್ಯಾಟರ್‌ಗಳು ಇವರ ಬೌಲಿಂಗ್ ಅನ್ನು ಚಚ್ಚಿ ಪುಡಿಪುಡಿ ಮಾಡಿದ್ದರು ಎಂದು ನೆನಪಿಸಿದ್ದಾರೆ.

ಭಯ ಮತ್ತು ಹತಾಶೆಯಿಂದ ಕೂಡಿದ ಆಯ್ಕೆ!

ಇತ್ತೀಚೆಗೆ ಐರ್ಲೆಂಡ್ (0-2) ಮತ್ತು ಇಂಗ್ಲೆಂಡ್ (0-4) ವಿರುದ್ಧ ಎದುರಾದ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಬಿಸಿಸಿಐ  ಆಯ್ಕೆಗಾರರು, ಅಫ್ಘಾನಿಸ್ತಾನದಂತಹ ತಂಡದ ವಿರುದ್ಧವೂ ಯುವ ಆಟಗಾರರಿಗೆ ಅವಕಾಶ ನೀಡದೆ ಪೂರ್ಣ ಪ್ರಮಾಣದ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ. ಇದು ಆಯ್ಕೆಗಾರರ “ಭಯ ಮತ್ತು ಹತಾಶೆಯ” ನಿರ್ಧಾರ ಎಂದು ಶ್ರೀಕಾಂತ್ ಕರೆದಿದ್ದಾರೆ.

ಈ ಸರಣಿಗೆ ಆಯ್ಕೆಯಾಗಿರುವ ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ಅವರ ಆಯ್ಕೆಯು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಿಂದ ಪಡೆಯುವ ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಬೆಂಗಳೂರಿನ CoE ನಲ್ಲಿ ಫಿಟ್‌ನೆಸ್ ಟೆಸ್ಟ್ ಪಾಸ್ ಆದ ತಕ್ಷಣವೇ ಆಟಗಾರರು ಮ್ಯಾಚ್ ಫಿಟ್‌ ಆಗಿರುತ್ತಾರೆ ಎಂದು ನಂಬಲು ಸಾಧ್ಯವಿಲ್ಲ ಎಂಬುದೇ ಶ್ರೀಕಾಂತ್ ಅವರ ಪ್ರಮುಖ ವಾದವಾಗಿದೆ.

ಇದನ್ನೂ ಓದಿ: ‘ಕ್ರಿಕೆಟ್’ ಎಂದು ಕರೆಯುವುದನ್ನು ನಿಲ್ಲಿಸಿ: ರಿಕಿ ಪಾಂಟಿಂಗ್ ಹೊಸ ಐಡಿಯಾ!

ಒಟ್ಟಾರೆಯಾಗಿ ಹೇಳುವುದಾದರೆ, ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯ ಕುರಿತು ಕ್ರಿಸ್ ಶ್ರೀಕಾಂತ್ ವ್ಯಕ್ತಪಡಿಸಿರುವ ಕಟು ಮಾತುಗಳು ಭಾರತೀಯ ಕ್ರಿಕೆಟ್‌ನ ಪ್ರಸ್ತುತ ಆಯ್ಕೆ ಪ್ರಕ್ರಿಯೆಯ ಮೇಲಿರುವ ಒತ್ತಡವನ್ನು ಬಿಂಬಿಸುತ್ತದೆ ಎಂಬುದು ಸುಳ್ಳಲ್ಲ.

Published On - 8:27 am, Sat, 5 September 26

Loading...
Unable to load recommendations.
Follow Us