ಐಪಿಎಲ್ ಮುಗಿದ ಬೆನ್ನಲ್ಲೇ ಹೊಸ ಟಿ20 ತಂಡ ಸೇರಿಕೊಂಡ ದೇವದತ್ ಪಡಿಕ್ಕಲ್
Devdutt Padikkal Joins Mysore Warriors: ಐದನೇ ಆವೃತ್ತಿಯ ಮಹಾರಾಜ ಟಿ20 ಟ್ರೋಫಿ ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿದೆ. ಇಂದಿನ ಹರಾಜಿನಲ್ಲಿ 150ಕ್ಕೂ ಹೆಚ್ಚು ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದು, 6 ತಂಡಗಳು 60 ಲಕ್ಷ ರೂ. ಬಜೆಟ್ನೊಂದಿಗೆ ಆಟಗಾರರನ್ನು ಖರೀದಿಸಿದವು. ಐಪಿಎಲ್ ಖ್ಯಾತಿಯ ದೇವದತ್ ಪಡಿಕ್ಕಲ್ ಮೈಸೂರು ವಾರಿಯರ್ಸ್ ತಂಡಕ್ಕೆ ₹2.6 ಲಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಐದನೇ ಆವೃತ್ತಿಯ ಮಹಾರಾಜ ಟಿ20 ಟ್ರೋಫಿ ಇದೇ ಜೂನ್ 20 ರಿಂದ ಆರಂಭವಾಗಲಿದ್ದು, ಜುಲೈ 12 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಇಂದು ಹರಾಜು ಕೂಡ ನಡೆದಿದೆ. ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರು ದೊಡ್ಡ ಮೊತ್ತಕ್ಕೆ ಹೊಸ ತಂಡಗಳನ್ನು ಸೇರಿಕೊಂಡಿದ್ದಾರೆ. ಹರಾಜಿನಲ್ಲಿ 150ಕ್ಕೂ ಹೆಚ್ಚು ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಎಲ್ಲಾ 6 ತಂಡಗಳು ತಲಾ 60 ಲಕ್ಷ ರೂ. ಹಣದೊಂದಿಗೆ ಆಟಗಾರರ ಖರೀದಿಗಿಳಿದಿವೆ. ಅದರಂತೆ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದೇವದತ್ ಪಡಿಕ್ಕಲ್ ಇದೀಗ ಹೊಸ ತಂಡವನ್ನು ಸೇರಿಕೊಂಡಿದ್ದಾರೆ. ಹರಾಜಿನಲ್ಲಿ ಮೈಸೂರ್ ವಾರಿಯರ್ಸ್ ಫ್ರಾಂಚೈಸಿ ಪಡಿಕ್ಕಲ್ಗೆ 2 ಲಕ್ಷ 60 ಸಾವಿರ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಮೈಸೂರ್ ವಾರಿಯರ್ಸ್ ಫ್ರಾಂಚೈಸಿ ಪಡಿಕ್ಕಲ್ಗೂ ಮೊದಲು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ವೇಗಿ ವೈಶಾಕ್ ವಿಜಯ್ಕುಮಾರ್ ಅವರನ್ನು 8.25 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಈ ಮೂಲಕ ವೈಶಾಕ್ ಅತ್ಯಧಿಕ ಮೊತ್ತಕ್ಕೆ ಮೈಸೂರು ತಂಡದ ಪಾಲಾದರು. ಹಾಗೆಯೇ ಮತ್ತೊಬ್ಬ ಟೀಂ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ ಕೂಡ 2.60 ಲಕ್ಷಕ್ಕೆ ತಂಡವನ್ನು ಸೇರಿಕೊಂಡಿದ್ದಾರೆ. ಆರ್ಸಿಬಿಯ ಮಾಜಿ ಆಟಗಾರ ಮನೋಬ್ ಬಾಂಡಗೆ ಅವರನ್ನು 10 ಲಕ್ಷಕ್ಕೆ ಖರೀದಿ ಮಾಡಿದೆ. ಸ್ಫೋಟಕ ಬ್ಯಾಟರ್ ಚೇತನ್ ಎಲ್ ಆರ್ ಕೂಡ 11.50 ಲಕ್ಷಕ್ಕೆ ಮೈಸೂರು ತಂಡವನ್ನು ಸೇರಿಕೊಂಡಿದ್ದಾರೆ.
ಉಳಿದಂತೆ ಸ್ಟಾರ್ ಆಟಗಾರರ ಪೈಕಿ ಕರುಣ್ ನಾಯರ್ ಬರೋಬ್ಬರಿ 18 ಲಕ್ಷಕ್ಕೆ ಮಂಗಳೂರು ತಂಡವನ್ನು ಸೇರಿಕೊಂಡರೆ, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಕೂಡ 10.25 ಲಕ್ಷಕ್ಕೆ ಇದೇ ತಂಡವನ್ನು ಸೇರಿಕೊಂಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ಸ್ಮರಣ್ ರವಿಚಂದ್ರನ್ ಅವರನ್ನು 15.75 ಲಕ್ಷಕ್ಕೆ ಶಿವಮೊಗ್ಗ ಫ್ರಾಂಚೈಸಿ ಖರೀದಿ ಮಾಡಿದೆ. ಸ್ಫೋಟಕ ದಾಂಡಿಗ ಅಭಿನವ್ ಮನೋಹರ್ ಅವರನ್ನು ಹುಬ್ಬಳ್ಳಿ ಟೈಗರ್ಸ್ 13.50 ಲಕ್ಷಕ್ಕೆ ಖರೀದಿ ಮಾಡಿದೆ. ಇದೇ ತಂಡಕ್ಕೆ ಅನುಭವಿ ಮಯಾಂಕ್ ಅಗರ್ವಾಲ್ ಕೂಡ 11.50 ಲಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹಾರ್ದಿಕ್ ರಾಜ್ ಅವರನ್ನು ಸಹ 7.50 ಲಕ್ಷಕ್ಕೆ ಖರೀದಿ ಮಾಡಲಾಗಿದೆ.
Published On - 4:22 pm, Fri, 5 June 26




