RCB ವಿರುದ್ಧ ‘ರಾಜಧಾನಿ ಎಕ್ಸ್​ಪ್ರೆಸ್​’ ಆಗಮನ..!

Mayank Yadav: ಮಯಾಂಕ್ ಯಾದವ್ ಐಪಿಎಲ್​ನಲ್ಲಿ ಆರ್​ಸಿಬಿ ವಿರುದ್ಧ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಈ ವೇಳೆ 150 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದರು. ಅಷ್ಟೇ ಅಲ್ಲದೆ 4 ಓವರ್​ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿಗೆ ಕಾರಣರಾಗಿದ್ದರು. ಇದೀಗ ವರ್ಷಗಳ ಬಳಿಕ ಮಯಾಂಕ್ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿ ಕೂಡ ಆರ್​ಸಿಬಿ ವಿರುದ್ಧ ಎಂಬುದು ವಿಶೇಷ.

RCB ವಿರುದ್ಧ ರಾಜಧಾನಿ ಎಕ್ಸ್​ಪ್ರೆಸ್​ ಆಗಮನ..!
LSG

Updated on: Apr 15, 2026 | 12:41 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯದ ಮೂಲಕ ‘ರಾಜಧಾನಿ ಎಕ್ಸ್‌ಪ್ರೆಸ್’ ಮತ್ತೆ ಮರಳಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟುಕೊಂಡಿರುವುದು ಮಯಾಂಕ್ ಯಾದವ್​ ಅವರ ಫಿಟ್​ನೆಸ್ ಅಪ್​ಡೇಟ್​ನಿಂದ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವಾಡದ ‘ರಾಜಧಾನಿ ಎಕ್ಸ್‌ಪ್ರೆಸ್’ ಖ್ಯಾತಿಯ ಮಯಾಂಕ್ ಯಾದವ್ ಇದೀಗ ಸಂಪೂರ್ಣ ಫಿಟ್​ ಆಗಿದ್ದಾರೆ. ಅಲ್ಲದೆ ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.

ವಿಶೇಷ ಎಂದರೆ ಇದೇ ಮಯಾಂಕ್ ಯಾದವ್ 2024ರಲ್ಲಿ ಬೆಂಗಳೂರಿನ ಪಿಚ್​ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.  ಇದೀಗ ಮತ್ತೆ ರಾಯಲ್ ಪಡೆಯ ವಿರುದ್ಧವೇ ಕಣಕ್ಕಿಳಿಯುವ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಮಯಾಂಕ್ ಯಾದವ್

ಎಲ್‌ಎಸ್‌ಜಿ ತಂಡದ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ಅವರು, ಆರ್​ಸಿಬಿ ವಿರುದ್ಧ ಆಡಲು ಮಯಾಂಕ್ ಸಿದ್ಧರಿದ್ದಾರೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಕಠಿಣ ತರಬೇತಿ ಮತ್ತು ಬೌಲಿಂಗ್ ವರ್ಕ್‌ಲೋಡ್ ನಿರ್ವಹಣೆಯ ನಂತರ ಅವರು ಈಗ 150+ ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಲು ಫಿಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಮಯಾಂಕ್ ಯಾದವ್ ಆರ್​ಸಿಬಿ ವಿರುದ್ಧದ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

ಇತ್ತ ಮಯಾಂಕ್ ಯಾದವ್ ಮರಳುತ್ತಿರುವುದರಿಂದ ಲಕ್ನೋ ತಂಡದ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಈಗಾಗಲೇ ಮೊಹಮ್ಮದ್ ಶಮಿ ಮತ್ತು ಪ್ರಿನ್ಸ್ ಯಾದವ್ ಉತ್ತಮ ಲಯದಲ್ಲಿದ್ದಾರೆ. ಇದೀಗ ಮಯಾಂಕ್ ಯಾದವ್ ಕೂಡ ಕಣಕ್ಕಿಳಿದರೆ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಲಿದೆ.

ಇಲ್ಲಿ ಮಯಾಂಕ್ ಯಾದವ್ ಅವರ ಆಗಮನವು ಆರ್​ಸಿಬಿ ಪಾಲಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ 2024 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಯಾಂಕ್ ತನ್ನ ವೇಗಾಸ್ತ್ರದೊಂದಿಗೆ ಆರ್​ಸಿಬಿ ದಾಂಡಿಗರನ್ನು ಕಟ್ಟಿ ಹಾಕಿದ್ದರು.  ಅಲ್ಲದೆ ಈ ವೇಳೆ 4 ಓವರ್​ಗಳಲ್ಲಿ ನೀಡಿದ್ದು ಕೇವಲ 14 ರನ್​ಗಳು ಮಾತ್ರ. ಇದರ ನಡುವೆ 3 ವಿಕೆಟ್ ಎಗರಿಸಿದ್ದರು.

ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಮಯಾಂಕ್ ಯಾದವ್ ಮತ್ತೊಮ್ಮೆತನ್ನ ಘಾತಕ ವೇಗದೊಂದಿಗೆ ಆರ್​ಸಿಬಿ ಪಾಲಿಗೆ ಮುಳುವಾಗಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2026: ಸೋಲಿನಿಂದ ಕಂಗೆಟ್ಟ ಕೆಕೆಆರ್ ತಂಡದ ನಾಯಕನಿಗೆ ದಂಡದ ಬರೆ..!

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ವನಿಂದು ಹಸರಂಗ, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Follow Us