Maharaja Trophy 2025: ಕರುಣ್ ನಾಯರ್ ನಾಯಕತ್ವದಲ್ಲಿ 20 ಸದಸ್ಯರ ತಂಡ ಪ್ರಕಟಿಸಿದ ಮೈಸೂರು ವಾರಿಯರ್ಸ್‌

Mysore Warriors Announce Squad for Maharaja Trophy 2025: ಮೈಸೂರು ವಾರಿಯರ್ಸ್ ತಂಡವು 2025ರ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಗೆ ತನ್ನ 20 ಆಟಗಾರರ ತಂಡವನ್ನು ಘೋಷಿಸಿದೆ. ಖ್ಯಾತ ಕ್ರಿಕೆಟಿಗ ಕರುಣ್ ನಾಯರ್ ಅವರು ತಂಡದ ನಾಯಕರಾಗಿದ್ದಾರೆ. ಆದರೆ ಗಾಯದ ಕಾರಣ, ಆರಂಭಿಕ ಪಂದ್ಯಗಳಲ್ಲಿ ಮನೀಷ್ ಪಾಂಡೆ ಹಂಗಾಮಿ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಎನ್‌ಆರ್ ಗ್ರೂಪ್, ವಿಕಲಚೇತನ ಕ್ರೀಡಾಪಟುಗಳಿಗೆ ಬೆಂಬಲವಾಗಿ, ಪ್ರತಿ ವಿಕೆಟ್, ಸಿಕ್ಸರ್ ಮತ್ತು ಫೋರ್‌ಗೆ ದೇಣಿಗೆ ನೀಡುವುದಾಗಿ ಘೋಷಿಸಿದೆ.

Maharaja Trophy 2025: ಕರುಣ್ ನಾಯರ್ ನಾಯಕತ್ವದಲ್ಲಿ 20 ಸದಸ್ಯರ ತಂಡ ಪ್ರಕಟಿಸಿದ ಮೈಸೂರು ವಾರಿಯರ್ಸ್‌
Mysore Warriors Announce

Updated on: Aug 09, 2025 | 6:36 PM

ಮೈಸೂರು ವಾರಿಯರ್ಸ್‌ (Mysore Warriors) ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ (Maharaja Trophy 2025) ಟಿ20 ಪಂದ್ಯಾವಳಿಗೆ 20 ಆಟಗಾರರ ತನ್ನ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಕರುಣ್ ನಾಯರ್‌ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಕರುಣ್ ನಾಯರ್ (Karun Nair) ಗಾಯಾಳುವಾಗಿರುವದರಿಂದ, ಪ್ರಾರಂಭದ ಕೆಲವು ಮ್ಯಾಚ್ ಗಳಲ್ಲಿ ಹಂಗಾಮಿ ನಾಯಕನಾಗಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.

ಮೈಸೂರು ತಂಡಕ್ಕೆ ಕರುಣ್ ನಾಯಕ

ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರಾಗಿರುವ ಕರುಣ್ ನಾಯರ್ ಅವರು ಮೈಸೂರು ವಾರಿಯರ್ಸ್‌ ತಂಡವನ್ನು ಈ ಬಾರಿಯೂ ಗೆಲುವಿನೆಡೆಗೆ ಕರೆದೊಯ್ಯುವ ನಿರೀಕ್ಷೆ ಹೊಂದಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವ ಮತ್ತು ಟಿ20 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕರುಣ್‌ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ.

ಮೈಸೂರು ವಾರಿಯರ್ಸ್ ತಂಡದ ನಾಯಕತ್ವವಹಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಕರುಣ್ ನಾಯರ್, ‘ಮೈಸೂರು ವಾರಿಯರ್ಸ್‌ ತಂಡವನ್ನು ಮುನ್ನಡೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಆಭಾರಿಯಾಗಿದ್ದೇನೆ. ನಮ್ಮ ತಂಡವು ಹೊಸ ಪ್ರತಿಭೆಗಳು ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿದೆ. ನಮ್ಮ ತಂಡವು ಅಭಿಮಾನಿಗಳಿಗಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ವಿಶ್ವಾಸ ನನಗಿದೆ’ ಎಂದರು.

ಆಗಸ್ಟ್ 11 ರಿಂದ ಪಂದ್ಯಾವಳಿ ಆರಂಭ

ವಿಶೇಷವೆಂದರೆ ಮಹಾರಾಜ ಟ್ರೋಫಿ 2025 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಖ್ಯಾತ ಕ್ರಿಕೆಟಿಗರಾದ ಪ್ರಸಿದ್ಧ್ ಎಂ ಕೃಷ್ಣ, ಮನೀಷ್ ಪಾಂಡೆ ಮತ್ತು ಗೌತಮ್ ಕೆ ಅವರು ಆಡಲಿದ್ದಾರೆ. ಮಹಾರಾಜ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 11 ರಿಂದ 27ರವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದ್ದು, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಸೆಣೆಸಲಿವೆ.

ಕಾಲ್ತುಳಿತ ದುರಂತ: ಮಹಾರಾಜ ಟಿ20 ಲೀಗ್ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್

ವೀಲ್‌ಚೇರ್ ಕ್ರಿಕೆಟ್ ಲೀಗ್​ಗೆ ಬೆಂಬಲ

ಇದು ಮಾತ್ರವಲ್ಲದೆ ಮೈಸೂರು ವಾರಿಯರ್ಸ್ ತಂಡವು ಇದೀಗ ದಕ್ಷಿಣ ಏಷ್ಯಾದ ಮೊದಲ ವೀಲ್‌ಚೇರ್ ಕ್ರಿಕೆಟ್ ಲೀಗ್ ಆಗಿರುವ ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ಎಎಸ್ಎಲ್) ಟಿ20 ಜೊತೆಗೆ ಕಾಸ್ ಪಾರ್ಟನರ್‌ಶಿಪ್ ಮಾಡಿಕೊಂಡಿರುವುದಾಗಿ ಘೋಷಿಸಿದೆ. ಈ ಮೂಲಕ ವಿಕಲಚೇತನ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುವ ಎಎಸ್ಎಲ್ ಗೆ ಬೆಂಬಲ ಒದಗಿಸಲಿದೆ.

ಆ ಪ್ರಯುಕ್ತ ಕಳೆದ ವರ್ಷದಂತೆಯೇ ಈ ವರ್ಷವೂ ಎನ್‌ಆರ್ ಗ್ರೂಪ್ ಸಂಸ್ಥೆಯು ಈ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ತೆಗೆಯುವ ಪ್ರತೀ ವಿಕೆಟ್‌ಗೆ ₹2,000, ಹೊಡೆಯುವ ಪ್ರತೀ ಸಿಕ್ಸರ್‌ಗೆ ₹1,000 ಮತ್ತು ಪ್ರತಿ ಫೋರ್‌ಗೆ ₹500 ದೇಣಿಗೆ ನೀಡಲಿದೆ. ವಿಕಲಚೇತನ ಕ್ರೀಡಾಪಟುಗಳ ಸಬಲೀಕರಣಕ್ಕೆ ಈ ದೇಣಿಗೆ ಬಳಕೆಯಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ