ಬಾಬರ್, ರಿಜ್ವಾನ್, ಅಫ್ರಿದಿ ಸೇರಿದಂತೆ ಪಾಕ್ ಕ್ರಿಕೆಟಿಗರ ಇನ್ಸ್ಟಾಗ್ರಾಮ್ ಖಾತೆ ಭಾರತದಲ್ಲಿ ಬ್ಯಾನ್
Pahalgam terror attack: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಿದೆ. ಮೊಹಮ್ಮದ್ ರಿಜ್ವಾನ್, ಬಾಬರ್ ಆಝಂ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಹಲವಾರು ಆಟಗಾರರ ಇನ್ಸ್ಟಾಗ್ರಾಮ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam terror attack) ನಂತರ ಭಾರತ ಸರ್ಕಾರವು, ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾದದ್ದು, ಪಾಕಿಸ್ತಾನದ ಪ್ರಮುಖ ವ್ಯಕ್ತಿಗಳ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಸೋಶಿಯಲ್ ಮೀಡಿಯಾ ಖಾತೆಯನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಮೊದಲು ಪಾಕ್ ತಂಡದ ಸ್ಟಾರ್ ಆಟಗಾರರ ಯೂಟ್ಯೂಬ್ ಚಾನೆಲ್ಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಈಗ ತಂಡದ ಅನೇಕ ಪ್ರಸಿದ್ಧ ಆಟಗಾರರ ಇನ್ಸ್ಟಾಗ್ರಾಮ್ (Instagram) ಖಾತೆಗಳನ್ನು ಸಹ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಈ ಬ್ಯಾನ್ ಶಿಕ್ಷೆಗೆ ಒಳಗಾದ ಆಟಗಾರರೆಂದರೆ, ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್, ಬಾಬರ್ ಆಝಂ (babar azam) ಮತ್ತು ಶಾಹೀನ್ ಅಫ್ರಿದಿ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಲಾಗಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಲಷ್ಕರ್-ಎ-ತೊಯ್ಬಾದ ಸಹಾಯದಿಂದ ನಡೆಸಲಾಗಿದೆ ಎಂಬುದು ತನಿಖೆಯಿಂದ ಹೊರಬಂದಿದೆ. ಅಚ್ಚರಿಯ ವಿಷಯವೆಂದರೆ ಈ ಭಯೋತ್ಪಾದಕ ದಾಳಿಯ ನಂತರ, ಶಾಹೀನ್ ಅಫ್ರಿದಿ, ಜುನೈದ್ ಖಾನ್ ಅವರಂತಹ ಆಟಗಾರರು ಭಾರತವನ್ನು ಗೇಲಿ ಮಾಡಿದ್ದರು.
ಇದಾದ ನಂತರ, ಭಾರತ ಸರ್ಕಾರ ಪಾಕಿಸ್ತಾನಿ ಕ್ರಿಕೆಟಿಗರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಲು ಪ್ರಾರಂಭಿಸಿತ್ತು. ಆ ಪ್ರಕಾರ, ಪಾಕ್ ತಂಡದ ಮಾಜಿ ಸ್ಟಾರ್ ಆಟಗಾರರಾದ ಶೋಯೆಬ್ ಅಖ್ತರ್, ಬಸಿತ್ ಅಲಿ ಅವರ ಯೂಟ್ಯೂಬ್ ಖಾತೆಗಳು, ಪಾಕಿಸ್ತಾನಿ ಸುದ್ದಿ ವಾಹಿನಿಗಳು ಮತ್ತು ಪಾಕಿಸ್ತಾನಿ ಕ್ರೀಡಾ ಯೂಟ್ಯೂಬ್ ಚಾನೆಲ್ಗಳನ್ನು ಸಹ ನಿಷೇಧಿಸಲಾಗಿತ್ತು. ಭಾರತ ಸರ್ಕಾರದ ಈ ಕ್ರಮದ ನಂತರ ಪಾಕಿಸ್ತಾನಿ ನಟರು ಮತ್ತು ಕ್ರಿಕೆಟಿಗರಿಗೆ ಸೋಶಿಯಲ್ ಮೀಡಿಯಾದಿಂದ ಬರುತ್ತಿದ್ದ ಆದಾಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಏಕೆಂದರೆ ಇವರಿಗೆ ಭಾರತದಿಂದ ಸಾಕಷ್ಟು ವೀಕ್ಷಣೆಗಳು ಸಿಗುತ್ತಿದ್ದವು.
ಶಾಹಿದ್ ಅಫ್ರಿದಿಯ ಸೋದರ ಸಂಬಂಧಿಯನ್ನು ಗುಂಡಿಕ್ಕಿ ಕೊಂದಿದ್ದ ಬಿಎಸ್ಎಫ್
ರಿಜ್ವಾನ್ ವಿಚಿತ್ರ ಹೇಳಿಕೆ
ಭಾರತ ತೆಗೆದುಕೊಂಡ ಈ ಕ್ರಮದ ಬಗ್ಗೆ ಪಾಕ್ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಬಹಳ ವಿಚಿತ್ರವಾದ ಹೇಳಿಕೆಯನ್ನು ನೀಡಿದ್ದು, ‘ಭಾರತ ಏನು ಮಾಡುತ್ತಿದೆ ಮತ್ತು ಏಕೆ ಮಾಡುತ್ತಿದೆ ಎಂದು ನನಗೆ ತಿಳಿದಿಲ್ಲ. ಏಕೆಂದರೆ ನಾನು ನನ್ನ ಮೊಬೈಲ್ ಫೋನ್ ನೋಡಿಲ್ಲ. ಕ್ರಿಕೆಟ್ ಅನ್ನು ಯಾವಾಗಲೂ ರಾಜಕೀಯದಿಂದ ದೂರವಿಡಬೇಕು. ವಿರಾಟ್ ಕೊಹ್ಲಿಯಂತಹ ಆಟಗಾರರು ತಮ್ಮನ್ನು ಭೇಟಿಯಾದಾಗ ಪ್ರೀತಿ ಮತ್ತು ವಾತ್ಸಲ್ಯದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಭಯೋತ್ಪಾದಕ ದಾಳಿಯ ಬಗ್ಗೆ ಏನು ಗೊತ್ತಿಲ್ಲ ಎಂಬುದನ್ನು ಹೇಳುವುದಕ್ಕೆ ಮುಂದಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Fri, 2 May 25
