‘ಒಟ್ಟಿಗೆ ಪ್ರಯಾಣಿಸಲು ಸಾಧ್ಯವಿಲ್ಲ’; ಮುರಿದು ಬಿತ್ತು ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ..!

ಭಾರತದ ಪ್ರತಿಭಾವಂತ ಕ್ರಿಕೆಟಿಗ ಪೃಥ್ವಿ ಶಾ ಅಶಿಸ್ತಿನಿಂದಾಗಿ ವೃತ್ತಿಜೀವನದಲ್ಲಿ ಕುಸಿತ ಕಂಡಿದ್ದಾರೆ. ಇತ್ತೀಚೆಗೆ ಆಕೃತಿ ಅಗರ್ವಾಲ್ ಜೊತೆಗಿನ ಅವರ ನಿಶ್ಚಿತಾರ್ಥ ಮುರಿದುಬಿದ್ದಿದೆ. ಭವಿಷ್ಯದ ಗುರಿಗಳು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿ, ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟಿದ್ದಾರೆ. ಆಕೃತಿ ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದು, ಪೃಥ್ವಿ ಶಾ ಈ ಬಗ್ಗೆ ಮೌನ ವಹಿಸಿದ್ದಾರೆ.

‘ಒಟ್ಟಿಗೆ ಪ್ರಯಾಣಿಸಲು ಸಾಧ್ಯವಿಲ್ಲ’; ಮುರಿದು ಬಿತ್ತು ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ..!
ಪೃಥ್ವಿ ಶಾ, ಆಕೃತಿ ಅಗರ್ವಾಲ್
Image Credit source: PTI

Updated on: Sep 17, 2026 | 6:57 PM

ಭಾರತದ ಪ್ರತಿಭಾವಂತ ಕ್ರಿಕೆಟಿಗ ಪೃಥ್ವಿ ಶಾ, ತನ್ನ ಅಶಿಸ್ತಿನ ಜೀವನ ಶೈಲಿಯಿಂದ ಟೀಂ ಇಂಡಿಯಾದಿಂದ ದೂರವಾಗಿ ವರ್ಷಗಳೇ ಕಳೆದಿವೆ. ವೃತ್ತಿಜೀವನದ ಆರಂಭದಲ್ಲೇ ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟ ಪೃಥ್ವಿ ಅದಾದ ಬಳಿಕ ಭಾರತ ತಂಡಕ್ಕೆ ಎಂಟ್ರಿಕೊಟ್ಟಿದ್ದರು. ಸಿಕ್ಕಿ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದ ಪೃಥ್ವಿ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಸುಳಿವನ್ನು ನೀಡಿದ್ದರು. ಆದರೆ ಅದಾದ ಬಳಿಕ ತನ್ನ ಅಶಿಸ್ತಿನ ಜೀವನ ಶೈಲಿಯಿಂದಾಗಿ ಪೃಥ್ವಿ ವೃತ್ತಿಜೀವನವನ್ನು ಹಾಳು ಮಾಡಿಕೊಂಡಿದ್ದರು. ಇದೀಗ ಪೃಥ್ವಿ ಶಾ ಅವರ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆ. ಈ ವರ್ಷದ ಮಾರ್ಚ್ 8 ರಂದು ಅಕೃತಿ ಅಗರ್ವಾಲ್ ಮತ್ತು ಪೃಥ್ವಿ ಶಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೀಗ ಇವರಿಬ್ಬರ ನಡುವೆ ಬಿರುಕು ಮೂಡಿದ್ದು ಒಮ್ಮತದಿಂದಲೇ ಬೇರ್ಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.

ಒಪ್ಪಿಗೆಯ ಮೂಲಕ ಬೇರ್ಪಡಲು ನಿರ್ಧರಿಸಿದ್ದೇವೆ

ಮೇಲೆ ಹೇಳಿದಂತೆ ಈ ವರ್ಷದ ಮಾರ್ಚ್‌ನಲ್ಲಿ ಪೃಥ್ವಿ ಶಾ, ಆಕೃತಿ ಅಗರ್ವಾಲ್ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೀಗ ಇವರಿಬ್ಬರ ಸಂಬಂಧವು ಅಲ್ಪಾವಧಿಯಲ್ಲಿಯೇ ಕೊನೆಗೊಂಡಿದೆ. ಭವಿಷ್ಯದ ಗುರಿಗಳು ಮತ್ತು ಪ್ರಸ್ತುತ ಸಂದರ್ಭಗಳ ಹಿನ್ನೆಲೆಯಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ ಬೇರ್ಪಡಲು ನಿರ್ಧರಿಸಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮಿಬ್ಬರ ದಾರಿಗಳು ಬೇರೆ ಬೇರೆಯಾಗಿದ್ದು, ಇದನ್ನು ಅರಿತುಕೊಂಡ ನಂತರ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಆಕೃತಿ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಒಟ್ಟಿಗೆ ಪ್ರಯಾಣಿಸಲು ಸಾಧ್ಯವಿಲ್ಲ

ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಅನ್ನು ಹಂಚಿಕೊಂಡಿರುವ ಆಕೃತಿ ಅಗರ್ವಾಲ್, ‘ಇದನ್ನು ತುಂಬಾ ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇನೆ. ಪರಸ್ಪರ ಗೌರವ ಮತ್ತು ಪ್ರೀತಿಯ ಹೊರತಾಗಿಯೂ, ಭವಿಷ್ಯವನ್ನು ಪರಿಗಣಿಸಿ ಒಟ್ಟಿಗೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ತಮ್ಮ ಜವಾಬ್ದಾರಿಗಳನ್ನು ಮತ್ತು ಪ್ರಸ್ತುತ ಸಂಕೀರ್ಣ ಸಂದರ್ಭಗಳನ್ನು ತುಲನೆ ಮಾಡಿದ ನಂತರ ನಾವು ಜಂಟಿಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.

‘ಪೃಥ್ವಿ ಶಾ ರೀತಿ ಹಾಳಾಗಬೇಡಿ’; ವೈಭವ್ ಸೂರ್ಯವಂಶಿಗೆ ಎಚ್ಚರಿಕೆ

ಏನನ್ನು ಹೇಳದ ಪೃಥ್ವಿ ಶಾ

ಇಂತಹ ಸೂಕ್ಷ್ಮ ಸಮಯದಲ್ಲಿ ಜನರು ತಮ್ಮ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ತಮ್ಮ ಸಂಬಂಧದ ಅಂತ್ಯಕ್ಕೆ ಕಾರಣಗಳ ಬಗ್ಗೆ ಯಾವುದೇ ಊಹಾಪೋಹಗಳನ್ನು ಹರಡಬೇಡಿ. ಭವಿಷ್ಯದಲ್ಲಿ ಇಬ್ಬರೂ ಶಾಂತಿಯುತ ಮತ್ತು ಸಂತೋಷದ ಜೀವನವನ್ನು ನಡೆಸಬೇಕೆಂದು ಬಯಸಿರುವುದಾಗಿ ಅಗರ್ವಾಲ್ ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥ ಮುರಿದು ಬಿದ್ದಿರುವ ಬಗ್ಗೆ ಆಕೃತಿ ಅಗರ್ವಾಲ್ ಸುದೀರ್ಘವಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೂ, ಪೃಥ್ವಿ ಶಾ ಮಾತ್ರ ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ. ಆದಾಗ್ಯೂ ಪೃಥ್ವಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಎಲ್ಲಾ ಫೋಟೋಗಳನ್ನು ತೆಗೆದುಹಾಕಿದ್ದಾರೆ. ಪ್ರಸ್ತುತ, ಅವರ ಖಾತೆಯಲ್ಲಿ ಕೇವಲ ಒಂದು ಫೋಟೋ ಮಾತ್ರ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Thu, 17 September 26

Loading...
Unable to load recommendations.
Follow Us