
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಆರ್ಸಿಬಿ ತಂಡ ಫೈನಲ್ಗೇರಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಕಲೆಹಾಕಿದ್ದು ಬರೋಬ್ಬರಿ 254 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್ಗಳಲ್ಲಿ 162 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್ಸಿಬಿ 92 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಇದು ನಮಗೆ ಸೂಪರ್ ಪಂದ್ಯವಾಗಿತ್ತು. ವಿಶೇಷವಾಗಿ ಈ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಪ್ರಾಬಲ್ಯ ಸಾಧಿಸಿದ ರೀತಿ, ಎಲ್ಲರೂ ಉದ್ದೇಶಪೂರ್ವಕವಾಗಿ ಆಡಿದ ರೀತಿ, ನಮಗೆ ಪ್ಲಸ್ ಪಾಯಿಂಟ್ ಆಯಿತು.
ನಾವು ಗುಜರಾತ್ ಟೈಟಾನ್ಸ್ ಬೌಲರ್ಗಳ ವಿರುದ್ಧ ಆರ್ಭಟಿಸಲೇಬೇಕು ಎಂಬ ಯಾವುದೇ ಯೋಜನೆ ಇರಲಿಲ್ಲ. ಆದರೆ ನಾವು ಅವರ ವಿರುದ್ಧ ಅಬ್ಬರಿಸುತ್ತೇವೆ ಎಂಬ ಬಾಂಡಿ ಲಾಂಗ್ವೇಜ್ ತೋರಿಸಬೇಕು ಎಂಬುದನ್ನು ಮೀಟಿಂಗ್ನಲ್ಲಿ ಚರ್ಚಿಸಿದ್ದವು. ಈ ಮೂಲಕ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದೆವು. ಅದರಂತೆ ಇದೀಗ ಆಕ್ರಮಣಕಾರಿ ಆಟ ಆಡಿದ್ದೇವೆ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಆರ್ಭಟದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ಆರಂಭದಲ್ಲಿ, ಪಿಚ್ ಹೇಗೆ ವರ್ತಿಸುತ್ತಿದೆ ಮತ್ತು ಚೆಂಡು ಹೇಗೆ ಬರುತ್ತಿದೆ ಎಂಬುದನ್ನು ನೋಡಲು ನಾನು ಕೆಲವು ಎಸೆತಗಳು, ಅಂದರೆ 8-10 ಎಸೆತಗಳನ್ನು ಆಡುತ್ತೇನೆ. ಅದರ ನಂತರ, ನಾ ಹೇಗೆ ಆಡಬೇಕು ಎಂಬುದರ ಬಗ್ಗೆ ಯೋಜಿಸುತ್ತೇನೆ. ಅಂದರೆ ನಾನು ಯಾವ ಮೈದಾನ ಎಂಬುದರ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ನಾನು ಆಡುವಾಗ ಪಿಚ್ ಹೇಗಿದೆ ಎಂಬುದನ್ನು ಆಧರಿಸಿ ಬ್ಯಾಟ್ ಬೀಸುತ್ತೇನೆ. ಈ ಮೂಲಕ ಬೌಲರ್ಗಳನ್ನು ಒತ್ತಡಕ್ಕೆ ಒಳಪಡಿಸುವುದನ್ನು ಇಷ್ಟಪಡುಸತ್ತೇನೆ ಎಂದು ಪಾಟಿದಾರ್ ತಿಳಿಸಿದ್ದಾರೆ.
ನಿಜ ಹೇಳಬೇಕೆಂದರೆ, ಧರ್ಮಶಾಲಾದ ಪಿಚ್ನಲ್ಲಿ ಸಿಕ್ಸ್ ಬಾರಿಸುವುದು ಅಂದುಕೊಂಡಂತೆ ಸುಲಭವಾಗಿಲ್ಲ. ಬೌನ್ಸಿ ಪಿಚ್ ಆಗಿದ್ದರಿಂದ ಎಚ್ಚರಿಕೆ ವಹಿಸಬೇಕಿತ್ತು. ಉತ್ತಮ ಬೌನ್ಸ್ ಇತ್ತು ಮತ್ತು ಬೌಲರ್ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ, ಸ್ಟಂಪ್ಗಳ ಮೇಲೆ ಹೆಚ್ಚಿನ ಚೆಂಡುಗಳನ್ನು ಎಸೆದ ರೀತಿಯಿಂದಾಗಿ ಸಿಕ್ಸ್ ಬಾರಿಸುವುದು ಕಷ್ಟವಾಗಿತ್ತು ಎಂದಿದ್ದಾರೆ.
ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಿದ್ದರೆ ಟಾಪ್-3 ಬ್ಯಾಟರ್ಗಳನ್ನು ಬೇಗನೆ ಔಟ್ ಮಾಡುವುದು, ಅಂದರೆ ಪವರ್ಪ್ಲೇನಲ್ಲೇ ಶುಭ್ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಅವರ ವಿಕೆಟ್ ಪಡೆಯುವುದು ನಮ್ಮ ಯೋಜನೆಯಾಗಿತ್ತು. ಅದು ವರ್ಕ್ ಆಯಿತು. ಈ ಮೂವರ ವಿಕೆಟ್ ಸಿಗುತ್ತಿದ್ದಂತೆ ನಮ್ಮ ಗೆಲುವು ಖಚಿತವಾಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇದೇ ವೇಳೆ ರೊಮಾರಿಯೊ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ನಾವು ಫೈನಲ್ಗೆ ಹೋದರೆ, ರೊಮಾರಿಯೊ ಶೆಫರ್ಡ್ ಮಧ್ಯದ ಓವರ್ಗಳಲ್ಲಿ ಹೇಗೆ ಬೌಲ್ ಮಾಡುತ್ತಾರೆ ಎಂಬುದನ್ನು ಪರೀಕ್ಷಿಸಬೇಕಿತ್ತು. ಹೀಗಾಗಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿ ಓವರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: CSK ದಾಖಲೆಯನ್ನೇ ಧೂಳೀಪಟ ಮಾಡಿದ RCB
ಒಟ್ಟಾರೆಯಾಗಿ ಹೇಳುವುದಾದರೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ರೂಪಿಸಿದ ಎಲ್ಲಾ ಪ್ಲ್ಯಾನ್ಗಳು ವರ್ಕ್ ಆಗಿದೆ. ಈ ಯಶಸ್ವಿ ಯೋಜನೆಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಆರ್ಸಿಬಿ ತಂಡಕ್ಕೆ ಎದುರಾಳಿಯಾಗಲಿರುವವರು ಯಾರು ಎಂಬುದೇ ಈಗ ಕುತೂಹಲ.