
ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್ (Ranji Trophy Semi-final) ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ( Karnataka vs Uttarakhand) ತಂಡ ಬೃಹತ್ ಮೊತ್ತ ಕಲೆಹಾಕಿದೆ. ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 689 ರನ್ ಕಲೆಹಾಕಿದೆ. ತಂಡದ ಪರ ಎರಡನೇ ದಿನದಾಟದಲ್ಲಿ ನಾಯಕ ದೇವದತ್ ಪಡಿಕ್ಕಲ್ (Devdutt Padikkal) ದ್ವಿಶತಕ ಸಿಡಿಸಿದರೆ, ಸ್ಮರಣ್ ರವಿಚಂದ್ರನ್ (Smaran Ravichandran) ಅಜೇಯ ಶತಕ ಸಿಡಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸ್ಮರಣ್ಗೆ ಸಾಥ್ ನೀಡಿರುವ ವಿದ್ಯಾದರ್ ಪಾಟೀಲ್ ಕೂಡ ಅಜೇಯ 35 ರನ್ ಬಾರಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 355 ರನ್ ಕಲೆಹಾಕಿತ್ತು. ಮೊದಲ ದಿನದಾಟದಲ್ಲಿ ಆರಂಭಿಕ ಕೆಎಲ್ ರಾಹುಲ್ 141 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ದೇವದತ್ ಪಡಿಕ್ಕಲ್ 148 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನದಾಟದಲ್ಲಿ ಅನುಭವಿ ಕರುಣ್ ನಾಯರ್ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ ತಮ್ಮ ವೃತ್ತಿಜೀವನದ ಮೊದಲ ದ್ವಿಶತಕ ಬಾರಿಸಿದರು.
ತಮ್ಮ ಇನ್ನಿಂಗ್ಸ್ನಲ್ಲಿ 330 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 29 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 232 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದು ಪಡಿಕ್ಕಲ್ ಅವರ ಪ್ರಥಮ ದರ್ಜೆ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಮಾತ್ರವಲ್ಲದೆ, ಅವರ ಮೊದಲ ದ್ವಿಶತಕವೂ ಆಗಿದೆ. ಇದಕ್ಕೂ ಮೊದಲು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದೇವದತ್ ಪಡಿಕ್ಕಲ್ ಅವರ ಅತ್ಯಧಿಕ ಸ್ಕೋರ್ 193 ರನ್ಗಳಾಗಿತ್ತು.
Ranji Trophy Semifinal: ಸ್ಮರಣ್ ಶತಕ; ಬೃಹತ್ ಮೊತ್ತದತ್ತ ಕರ್ನಾಟಕ
ಆ ಬಳಿಕ ತಂಡದ ಇನ್ನಿಂಗ್ಸ್ ಮುಂದುವರೆಸಿದ ಸ್ಮರಣ್ ರವಿಚಂದ್ರನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಬದುಕಿನ 5ನೇ ಶತಕ ಸಿಡಿಸಿ ತಂಡವನ್ನು 600 ರನ್ಗಳ ಗಡಿ ದಾಟಿಸಿದರು. ಇದು ಈ ಆವೃತ್ತಿಯಲ್ಲಿ ಸ್ಮರಣ್ ಅವರ ಮೂರನೇ ಶತಕವಾಗಿದ್ದು, ಎರಡು ದ್ವಿಶತಕಗಳನ್ನು ಬಾರಿಸಿದ್ದಾರೆ. ಸ್ಮರಣ್ಗೆ ಸಾಥ್ ನೀಡಿದ ಕೆ. ಕೃಷ್ಣ ಕೂಡ ತಂಡಕ್ಕೆ 60 ರನ್ಗಳ ಕಾಣಿಕೆ ನೀಡಿದರು. ಕೃಷ್ಣ ಔಟಾದ ಬಳಿಕ ಬಂದ ವಿದ್ಯಾದರ್ ಪಾಟೀಲ್ ಕೂಡ ಸ್ಮರಣ್ ಜೊತೆ ಉತ್ತಮ ಜೊತೆಯಾಟ ಕಟ್ಟಿದರು. ಈ ಜೋಡಿ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದು ತಂಡವನ್ನು 689 ರನ್ಗಳಿಗೆ ಕೊಂಡೊಯ್ದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ