ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್: ಉತ್ತರ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ, ಟಿಕೆಟ್ ದರ ಎಷ್ಟು?

ಹುಬ್ಬಳ್ಳಿಯಲ್ಲಿ ನಡೆಯಲಿರುವ 2025-26ರ ರಣಜಿ ಟ್ರೋಫಿ ಫೈನಲ್ ಪಂದ್ಯವು ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳಿಗೆ ಬಹಳ ಮುಖ್ಯ ಪಂದ್ಯವಾಗಿದೆ. ಕರ್ನಾಟಕ 11 ವರ್ಷಗಳ ನಂತರ ಫೈನಲ್ ತಲುಪಿದರೆ, ಜಮ್ಮು ಕಾಶ್ಮೀರ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಪಂದ್ಯ ವೀಕ್ಷಣೆಗೆ ಟಿಕೆಟ್ ದರ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್: ಉತ್ತರ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ, ಟಿಕೆಟ್ ದರ ಎಷ್ಟು?
ರಣಜಿ ಟ್ರೋಫಿ ಫೈನಲ್ ಪಂದ್ಯ
Image Credit source: tv9 kannada
Edited By:

Updated on: Feb 23, 2026 | 7:56 PM

ಹುಬ್ಬಳ್ಳಿ, ಫೆಬ್ರವರಿ 23: ಒಂದಡೆ ಕರ್ನಾಟಕ ಕಳೆದ ಒಂದು ದಶಕದಿಂದ ರಣಜಿ ಕಪ್ (Ranji Trophy) ಗೆದ್ದಿಲ್ಲ. ಮತ್ತೊಂದಡೆ ಇಲ್ಲಿವರಗೆ ಒಮ್ಮೆಯೂ ಜಮ್ಮು-ಕಾಶ್ಮೀರ ತಂಡ ರಣಜಿ ಕಪ್ ಗೆದ್ದಿಲ್ಲ. ಇದೀಗ ಎರಡು ತಂಡಗಳಿಗೆ ಕಪ್ ಬರ ನೀಗಿಸಿಕೊಳ್ಳೋ ಸುವರ್ಣಾವಕಾಶ ದೊರತಿದೆ. ಇನ್ನೊಂದಡೆ ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರೇಮಿಗಳಿಗೆ ಕೂಡಾ ಹತ್ತಿರದಿಂದ ರಣಜಿ ಪಂದ್ಯ ನೋಡುವ ಸದಾವಕಾಶ ದೊರತಿದೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದ್ದು, ಕರ್ನಾಟಕ (Karnataka) ಮತ್ತು ಜಮ್ಮು ಕಾಶ್ಮೀರ ನಡುವಿನ ಅಂತಿಮ ಪಂದ್ಯದ ಐತಿಹಾಸಿಕ ಕ್ಷಣಕ್ಕೆ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಈ ದೃಶ್ಯವನ್ನು ಕಣ್ಣ್ತುಂಬಿಕೊಳ್ಳಲು ಕೇವಲ ಹುಬ್ಬಳ್ಳಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

ಹುಬ್ಬಳ್ಳಿಯ ರಾಜ ನಗರದಲ್ಲಿರುವ ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಾಳೆಯಿಂದ ಆರಂಭವಾಗಲಿರೋ 2025-26 ನೇ ಸಾಲಿನ ರಣಜಿ ಪೈನಲ್ ಪಂದ್ಯ ಹಿನ್ನೆಲೆ ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಮೆಂಟ್ ಫೈನಲ್ ಹಂತ‌ ತಲುಪಿದ್ದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರ ಫೈನಲ್ ಎಂಟ್ರಿಯಾಗಿದೆ. ಇತ್ತ ಹನ್ನೊಂದು ವರ್ಷದ ಬಳಿಕ ಕರ್ನಾಟಕ ಫೈನಲ್ ತಲುಪಿದೆ ಈ ಎರಡು ತಂಡಗಳ ಜಿದ್ದಾಜಿದ್ದಿ ನೋಡಲು ರಾಜ್ಯ ಮಾತ್ರವಲ್ಲದೆ ದೇಶವೇ ಕಾತುರದಿಂದ ಕಾಯುತ್ತಿದೆ.

ನಾವು ಈ ಬಾರಿ ಕಪ್ ಎತ್ತುತ್ತೇವೆ: ದೇವದತ್ತ ಪಡಿಕಲ್

ಇತ್ತ ಇದೇ ಮೊದಲ ಬಾರಿ ವಾಣಿಜ್ಯ ನಗರಿ ಹುಬ್ಬಳ್ಳಿ ಕೆಎಸ್​ಸಿಎ ಮೈದಾನದಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡಿದ್ದು, ಈ ಐತಿಹಾಸಿಕ ಕ್ರಿಕೆಟ್ ಪಂದಕ್ಕೆ ಹುಬ್ಬಳ್ಳಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ದೇವದತ್ತ್ ಪಡಿಕ್ಕಲ್ ನಾಯಕತ್ವ ಕರ್ನಾಟಕ ತಂಡದಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿರುವ ಹಿರಿಯ ಆಟಗಾರ ಕೆಎಲ್ ರಾಹುಲ್, ಮಯಾಂಕ್ ಅಗರವಾಲ್, ಕರುಣ್ ನಾಯರ್, ಪ್ರಸಿದ್ದ ಕೃಷ್ಣ ಸೇರಿದಂತೆ ಅನೇಕ ಸ್ಟಾರ್ ಆಟಾರರು ಕಣಕ್ಕಿಳಿಯಲಿದ್ದಾರೆ. ನಾವು ಈ ಬಾರಿ ಕಪ್ ಎತ್ತುತ್ತೇವೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಆಡಿರುವ ಅನುಭವಿದೆ. ಪಿಚ್ ಬಗ್ಗೆ ಸಾಕಷ್ಟು ವರ್ಕ್ ಮಾಡಿದ್ದೇವೆ. ಹುಬ್ಬಳ್ಳಿಯಂತ ನಗರದಲ್ಲಿ ರಣಜಿ ಫೈನಲ್ ಆಡುತ್ತಿರುವುದು ಖುಷಿಯಿದೆ ಅಂತ ಕರ್ನಾಟಕ ತಂಡ ನಾಯಕ ದೇವದತ್ತ ಪಡಿಕಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

ಕೆಎಸ್​ಸಿಎ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಹೊಂದಿದೆ. ಅದೇ ರೀತಿ ರಾಜ್ಯದಲ್ಲಿ ಕೆಎಸ್​ಸಿಎ ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಹೊಂದಿದ್ದು, 2012 ರಲ್ಲಿಯೇ ಹುಬ್ಬಳ್ಳಿಯಲ್ಲಿರೋ ಸ್ಟೇಡಿಯಂ ಉದ್ಘಾಟನೆಯಾಗಿದೆ. ಹುಬ್ಬಳ್ಳಿ ರಾಜ್ ನಗರದ ಮೈದಾನದಲ್ಲಿ ಇಲ್ಲಿವರಗೆ ಒಂಬತ್ತು ರಣಜಿ ಪಂದ್ಯಗಳು ನಡೆದಿದ್ದು, ಭಾರತ- ವೆಸ್ಟ್ ಇಂಡೀಸ್, ಭಾರತ- ಶ್ರೀಲಂಕಾ, ಭಾರತ ನ್ಯೂಜಲೆಂಡ್ ನ ಏ ಲಿಸ್ಟ್ ತಂಡಗಳ ನಡುವೆ ಮೂರು ಪಂದ್ಯಗಳು ಇದೇ ಮೈದಾನದಲ್ಲಿ ನಡೆದಿವೆ. ಭಾರತ ತಂಡಕ್ಕೆ ಆಡಿರೋ ಜಹೀರ್ ಖಾನ್, ಚೇತೇಶ್ವರ ಪೂಜಾರ್ ಸೇರಿದಂತೆ ಅನೇಕ ಆಟಗಾರರು ಹುಬ್ಬಳ್ಳಿ ರಾಜ್ ನಗರದಲ್ಲಿನ ಸ್ಟೇಡಿಯಂ ನಲ್ಲಿ ಆಟವಾಡಿದ್ದಾರೆ. 16.5 ಎಕರೆ ವಿಸ್ತೀರ್ಣದಲ್ಲಿರೋ ಸ್ಟೇಡಿಯಂನಲ್ಲಿ ಎಂಟು ಮುಖ್ಯ ಪಿಚ್, ಹತ್ತು ಅಭ್ಯಾಸ ಪಿಚ್, ಎರಡು ಕಾಂಕ್ರಿಟ್ ಪಿಚ್‌ಗಳಿವೆ. ಇನ್ನು ಪೈನಲ್ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿರೋದರಿಂದ ಬೆಂಗಳೂರು ಮತ್ತು ಮುಂಬೈನಿಂದ ಬಂದಿರುವ ಸಿಬ್ಬಂದಿ ಪಿಚ್ ತಯಾರು ಮಾಡಿದ್ದಾರೆ.

ಮೊದಲ ಬಾರಿ ನಾವು ಫೈನಲ್​ಗೆ ಬಂದಿರುವುದು ಖುಷಿಯಿದೆ: ಪರಾಸ್ ದೋಗ್ರಾ

ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿರುವ ಜಮ್ಮು-ಕಾಶ್ಮೀರ ತಂಡ ಸಹ ಮೊದಲ ಬಾರಿಗೆ ಕಪ್​ಗೆ ಮುತ್ತಿಡುವ ಆಸೆಯಲ್ಲಿದೆ. ಪಾರಸ್ ಡೋಗ್ರಾ ನಾಯಕತ್ವದಲ್ಲಿ ಶುಭಂ, ಉಮರ್, ರೋಹಿತ ಶರ್ಮಾ,ಮುಸ್ತಫಾ ಅಜಿ, ಅಬ್ದುಲ್, ಯದುವೀರ್ ಸಿಂಗ್, ಉಮರ್ ಮಲಿಕ್, ಸುನೀಲ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಇದ್ದಾರೆ. ಮೊದಲ ಬಾರಿ ನಾವು ಫೈನಲ್​ಗೆ ಬಂದಿರುವುದು ಖುಷಿಯಿದೆ. ನಮ್ಮಲ್ಲಿ ಪ್ರತಿಭೆ ಇದೆ, ನಮಗೆ ಸಪೋರ್ಟ್ ಮಾಡಿ ಅಂತ ನಾಯಕ ಪರಾಸ್ ದೋಗ್ರಾ ಹೇಳಿದ್ದಾರೆ.

ಟಿಕೆಟ್ ದರ ಎಷ್ಟು?

ಇನ್ನು ಪಂದ್ಯ ವೀಕ್ಷಣೆಗೆ ಬರುವವರಿಗೆ ಕ್ರೀಡಾಂಗಣದ 3 ಮತ್ತು 4ನೇ ದ್ವಾರಗಳಿಂದ ಪ್ರವೇಶವಿರಲಿದೆ. ಮೂರನೇ ಗೇಟ್‌ನಿಂದ ಪ್ರವೇಶಕ್ಕೆ 200 ರೂ ಮತ್ತು ನಾಲ್ಕನೇ ಗೇಟ್ ಮೂಲಕ ಪ್ರವೇಶಕ್ಕೆ 100 ರೂ ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಕೆಎಸ್​ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್‌ ಕಿತ್ತೂರು ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಟಿಕೆಟ್ ನೀಡಲು ಆರಂಭಿಸಲಾಗುವುದು. ಪ್ರತಿ ದಿನ 4,500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಸಾರ್ವಜನಿಕರು ನಗದು ಮತ್ತು ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕ್ಯಾಚ್ ಹಿಡಿದು, ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ಶಮರ್ ಜೋಸೆಫ್

ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ರಣಜಿ ತಂಡದ ಫೈನಲ್ ಮ್ಯಾಚ್ ನಡೆಯುತ್ತಿರುವುದು ಈ ಭಾಗದ ಕ್ರಿಕೆಟ್ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ. ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಹುಬ್ಬಳ್ಳಿ ಜನ ಕಾತುರದಿಂದ ಎದುರು ನೋಡ್ತಿದ್ದಾರೆ. ದೂರದ ಬೆಟ್ಟವಾಗಿದ್ದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟಗಳು ಈಗ ಸ್ಥಳೀಯ ಮಟ್ಟದ ಜನರಿಗೆ ಹತ್ತಿರವಾಗುತ್ತಿರುವುದು ಸಂತಸದ ವಿಷಯ. ಜೊತೆಗೆ ಈ ಬಾರಿ ರಣಜಿ ಕಪ್​ಗೆ ಯಾರು ಮುತ್ತಿಡಲಿದ್ದಾರೆ ಅನ್ನೋದು ನಾಳೆಯಿಂದ ನಡೆಯುವ ಫೈನಲ್ ಪಂದ್ಯದಲ್ಲಿ ಗೊತ್ತಾಗಲಿದೆ.

ಮತ್ತಷ್ಟು ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.