MI vs KKR: ನಾಟೌಟ್ ಆಗಿದ್ರೂ ಔಟ್ ಎಂದ ಅಂಪೈರ್: ಮೈದಾನದಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ

Rohit Sharma Dismissal vs KKR: ಕೆಕೆಆರ್ ನೀಡಿದ್ದ 166 ರನ್​​ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಅದು ಅಂಪೈರ್ ಅವರ ಕೆಟ್ಟ ನಿರ್ಧಾರದಿಂದ ಎನ್ನಬಹುದು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ.

MI vs KKR: ನಾಟೌಟ್ ಆಗಿದ್ರೂ ಔಟ್ ಎಂದ ಅಂಪೈರ್: ಮೈದಾನದಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Rohit Sharma Dismissal MI vs KKR
Updated By: Vinay Bhat

Updated on: May 10, 2022 | 8:10 AM

2022ರ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಮುಂಬೈ ಇಂಡಿಯನ್ಸ್ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಸೋಮವಾರ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (MI vs KKR) ವಿರುದ್ಧದ ಪಂದ್ಯದಲ್ಲೂ ಸೋಲುವ ಮೂಲಕ ರೋಹಿತ್ ಪಡೆ ಟೂರ್ನಿಯಲ್ಲಿ ಒಂಬತ್ತನೇ ಸೋಲು ಕಂಡಿತು. ಇತ್ತ ಕೆಕೆಆರ್ 52 ರನ್​ಗಳ ಬೃಹತ್ ಗೆಲುವಿನ ಮೂಲಕ ಇನ್ನೂ ಪ್ಲೇ ಆಫ್ ರೇಸ್​ನಲ್ಲಿದೆ ಎಂಬುದನ್ನು ತೋರಿಸಿದೆ. ಈ ಪಂದ್ಯ ಕೆಲವು ವಿವಾದಕ್ಕೂ ಕಾರಣವಾಯಿತು. ಅದರಲ್ಲಿ ಪ್ರಮುಖವಾಗಿ ಮುಂಬೈ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಔಟ್ ಆಗಿದ್ದು. ಕೆಕೆಆರ್ ನೀಡಿದ್ದ 166 ರನ್​​ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಮುಂಬೈ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಅದು ಅಂಪೈರ್ (Third Umpire) ಅವರ ಕೆಟ್ಟ ನಿರ್ಧಾರದಿಂದ ಎನ್ನಬಹುದು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ.

ಮುಂಬೈ ಪರ ಗುರಿ ಬೆನ್ನಟ್ಟಲು ರೋಹಿತ್ ಹಾಗೂ ಇಶಾನ್ ಕಿಶನ್ ಬಂದರು. ಮೊದಲ ಓವರ್​ನ ಟಿಮ್ ಸೌಥೀ ಬೌಲಿಂಗ್​ನ ಕೊನೆಯ ಎಸೆತದಲ್ಲಿ ರೋಹಿತ್ ಬ್ಯಾಟ್ ಹತ್ತಿರದಿಂದ ಚೆಂಡು ಪಾಸ್ ಆಗಿ ವಿಕೆಟ್ ಕೀಪರ್ ಕೈ ಸೇರಿತು. ಕೆಕೆಆರ್ ಆಟಗಾರರು ಔಟೆಂದು ಮನವಿ ಮಾಡಿದರು. ಆದರೆ, ಫೀಲ್ಡ್ ಅಂಪೈರ್ ನಾಟೌಟ್ ಎಂದರು. ಅತ್ತ ಕೀಪರ್ ಶೆಲ್ಡನ್ ಜಾಕ್ಸನ್ ಬ್ಯಾಟ್​ಗೆ ಚೆಂಡು ತಾಗಿದೆ ಎಂದು ಶ್ರೇಯಸ್ ಅಯ್ಯರ್ ಬಳಿ ಹೋಗಿ ರಿವ್ಯೂ ತೆಗೆದುಕೊಳ್ಳಲು ಸೂಚಿಸಿದರು. ಅದರಂತೆ ಶ್ರೇಯಸ್ ಥರ್ಡ್ ಅಂಪೈರ್ ಮೊರೆ ಹೋದರು.

ಇದನ್ನೂ ಓದಿ
Yuvraj Singh: ಏನೆಲ್ಲಾ ಮಾಡಬೇಕಪ್ಪಾ…ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡ ಯುವಿ
Virender Sehwag: ಇಶಾನ್ ಕಿಶನ್ ಬೇಡ, ದಿನೇಶ್ ಕಾರ್ತಿಕ್ ಸಹ ಬೇಡ, ಈತನಿಗೆ ಚಾನ್ಸ್ ನೀಡಿ ಎಂದ ಸೆಹ್ವಾಗ್..!
Dinesh Karthik: 21 ಸಿಕ್ಸ್, 21 ಫೋರ್: 20ನೇ ಓವರ್​ನಲ್ಲಿ DK ಬಾಸ್..!
IPL 2022: ಮುಂಬೈ ಇಂಡಿಯನ್ಸ್​ಗೆ ಆಘಾತ: ತಂಡದ ಪ್ರಮುಖ ಆಟಗಾರ ಐಪಿಎಲ್​ನಿಂದ ಔಟ್

ಥರ್ಡ್​​ ಅಂಪೈರ್ ಆಲ್ಟ್ರಾ ಎಡ್ಜ್ ಮೂಲಕ ಪರೀಕ್ಷಿಸುತ್ತಿದ್ದರು. ಅಲ್ಲಿ ಚೆಂಡು ಬ್ಯಾಟ್ ಹತ್ತಿರ ಇತ್ತಷ್ಟೆ ವಿನಃ ಬ್ಯಾಟ್​ಗೆ ತಾಗಿರಲಿಲ್ಲ. ಆದರೆ, ಆಲ್ಟ್ರಾ ಎಡ್ಜ್​ನಲ್ಲಿ ಚೆಂಡು ಬ್ಯಾಟ್​​ಗೆ ತಾಗಿದೆ ಎಂದು ಗೆರೆಗಳು ಕಾಣಿಸಿಕೊಂಡವು. ಅತ್ತ ಸ್ಪಷ್ಟವಾಗಿ ಚೆಂಡು ಬ್ಯಾಟ್​ಗೆ ಟಚ್ ಆಗದಿರುವುದು ಕಾಣಿಸುತ್ತಿದ್ದರೂ ಆಲ್ಟ್ರಾ ಎಡ್ಜ್​ನಲ್ಲಿ ಗೆರೆ ಕಾಣಿಸಿಕೊಂಡಿದ್ದರಿಂದ ಥರ್ಡ್​ ಅಂಪೈರ್ ಔಟೆಂದು ತೀರ್ಮಾನ ನೀಡಿದ್ದಾರೆ. ಇದರಿಂದ ಕೋಪಗೊಂಡ ರೋಹಿತ್ ಏನೂ ಮಾಡಲಾಗದೆ ಅಸಾಮಾಧಾನ ಹೊರಹಾಕಿ ಮೈದಾನ ತೊರೆಯಬೇಕಾಯಿತು. ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು ಟೆಕ್ನಾಲಜಿ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ (43) ಹಾಗೂ ಅಜಿಂಕ್ಯ ರಹಾನೆ (25) ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 60 ರನ್ ಪೇರಿಸಿದರು. ಬಳಿಕ ಕ್ರೀಸಿಗಿಳಿಸಿದ ನಿತೀಶ್ ರಾಣಾ (43) ಅಬ್ಬರಿಸಿದರು. ನಾಯಕ ಶ್ರೇಯಸ್ ಅಯ್ಯರ್ (6) ಹಾಗೂ ಆಯಂಡ್ರೆ ರಸೆಲ್ (9) ವೈಫಲ್ಯ ಅನುಭವಿಸಿರುವುದು ಕೆಕೆಆರ್‌ಗೆ ಹಿನ್ನಡೆಗೆ ಕಾರಣವಾಯಿತು. 15ನೇ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಡಬಲ್ ಆಘಾತ ನೀಡಿದರು. ರಸೆಲ್ ಜೊತೆಗೆ ನಿತೀಶ್ ರಾಣಾ ಅವರನ್ನು ಹೊರದಬ್ಬಿದರು. 18ನೇ ಓವರ್‌ನಲ್ಲಿ ಮತ್ತೆ ಮೂರು ವಿಕೆಟ್ ಗಳಿಸಿದ ಬೂಮ್ರಾ ಬಲವಾದ ಪೆಟ್ಟು ನೀಡಿದರು. ಶೆಲ್ಡನ್ ಜ್ಯಾಕ್ಸನ್ (5), ಪ್ಯಾಟ್ ಕಮಿನ್ಸ್ (0) ಹಾಗೂ ಸುನಿಲ್ ನಾರಾಯಣ್ (0) ನಿರಾಸೆ ಮೂಡಿಸಿದರು. ಈ ಮೂಲಕ ಬೂಮ್ರಾ 10 ರನ್ ನೀಡಿ ಐಪಿಎಲ್‌ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. ಕೆಕೆಆರ್ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ಇಶಾನ್ ಕಿಶನ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲೇ ಇಲ್ಲ. ಇಶಾನ್ ಕಿಶನ್ 43 ಎಸೆತಗಳಲ್ಲಿ 51 ರನ್ ಬಾರಿಸಿದರೆ, ರೋಹಿತ್ ಶರ್ಮಾ 2, ತಿಲಕ್ ವರ್ಮಾ 6, ರಮಣ್ ದೀಪ್ ಸಿಂಗ್ 12, ಟಿಮ್ ಡೇವಿಡ್ 13, ಕೀರನ್ ಪೊಲಾರ್ಡ್ 15, ಡೇನಿಯಲ್ ಸ್ಯಾಮ್ಸ್ 1, ಮುರುಗನ್ ಅಶ್ವಿನ್ 0, ಕುಮಾರ್ ಕಾರ್ತಿಕೇಯ 3, ಜಸ್ ಪ್ರೀತ್ ಬೂಮ್ರಾ 0 ಮತ್ತು ರಿಲೇ ಮೆರೆಡಿತ್ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದರು. ಕೋಲ್ಕತ್ತಾ ಪರ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದು ಮಿಂಚಿದರೆ, ರಸೆಲ್ 2 ವಿಕೆಟ್ ಕಿತ್ತರು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:10 am, Tue, 10 May 22