
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಗುವಾಹಟಿಯ ಬರ್ಸಪರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 150 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 11 ಓವರ್ಗಳಲ್ಲಿ 123 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮುಂಬೈ ಪಡೆ 27 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪವರ್ಪ್ಲೇನಲ್ಲಿ ನಾವು ಅಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಬೌಲರ್ಗಳು ಈ ಸೋಲಿನ ಜವಾಬ್ದಾರಿಯನ್ನು ಹೊರಬೇಕಾಗಿದೆ. ಒಂದು ಬೌಲಿಂಗ್ ಘಟಕವಾಗಿ ನಾವು ನಿರೀಕ್ಷಿತ ಮಟ್ಟಕ್ಕೆ ತಲುಪಲಿಲ್ಲ. ನಮ್ಮ ಬೌಲರ್ಗಳ ವಿರುದ್ಧ ಎದುರಾಳಿ ತಂಡದವರು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಹೀಗಾಗಿ ನಮ್ಮ ಸೋಲಿಗೆ ನಮ್ಮ ಬೌಲರ್ಗಳೇ ನೇರ ಕಾರಣ ಎಂದರು.
ಅಷ್ಟೇ ಅಲ್ಲದೆ “ನಾನು ಈ ಸೋಲನ್ನು ಬ್ಯಾಟರ್ಗಳ ಮೇಲೆ ಹಾಕುವುದಿಲ್ಲ. ಖಂಡಿತವಾಗಿಯೂ ಇದು ಬೌಲಿಂಗ್ ಘಟಕದ ವೈಫಲ್ಯ. ಟಿ20 ಕ್ರಿಕೆಟ್ನಲ್ಲಿ ಒಂದೆರಡು ಸರಿಯಾದ ಎಸೆತಗಳನ್ನು ಹಾಕುವುದು ಮುಖ್ಯವಾಗುತ್ತದೆ. ನಾವು ಕೇವಲ 27 ರನ್ಗಳಿಂದ ಸೋತಿದ್ದೇವೆ ಎಂದರೆ, ಅದರರ್ಥ ನಾವು ಐದು ಎಸೆತಗಳನ್ನು ಸರಿಯಾಗಿ ಹಾಕಿದ್ದರೆ ಅಥವಾ ಐದು ಸಿಕ್ಸರ್ಗಳನ್ನು ತಡೆದಿದ್ದರೆ ಪಂದ್ಯ ನಮ್ಮದಾಗುತ್ತಿತ್ತು. ಆದರೆ ನಮ್ಮ ಬೌಲರ್ಗಳು ಅಂತಹ ಎಸೆತಗಳನ್ನು ಸಹ ಎಸೆಯಲು ಕೂಡ ವಿಫಲರಾಗಿದ್ದಾರೆ ” ಎಂದು ಹಾರ್ದಿಕ್ ಪಾಂಡ್ಯ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಕಿರಿಯ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಆರ್ಭಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಹಾರ್ದಿಕ್ ಪಾಂಡ್ಯ. “15-16 ವರ್ಷದ ಹುಡುಗ ಅಷ್ಟು ಧೈರ್ಯದಿಂದ ಆಡುವುದನ್ನು ನೋಡುವುದು ಆಶ್ಚರ್ಯಕರವಾಗಿದೆ. ಪಂದ್ಯಕ್ಕೂ ಮುನ್ನವೇ ನಾವು ಅವರ ಬಗ್ಗೆ ಸಾಕಷ್ಟು ಚರ್ಚಿಸಿದ್ದೆವು. ಅವರಲ್ಲಿರುವ ಭಯವಿಲ್ಲದ ಆಟ ಮತ್ತು ಶಾಟ್ಗಳು ಅದ್ಭುತವಾಗಿವೆ. ಅವರಿಗೆ ಮುಂದಿನ ದಿನಗಳಲ್ಲಿ ಶುಭವಾಗಲಿ,” ಎಂದರು.
ಮುಂದಿನ ಪಂದ್ಯದಲ್ಲಿ ಮುಂಬೈ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಈ ಬಗ್ಗೆ ಮಾತನಾಡಿದ ಪಾಂಡ್ಯ, “ನಡೆದ ತಪ್ಪುಗಳಿಂದ ಪಾಠ ಕಲಿಯುವುದು ಮುಖ್ಯ. ನಾಳೆ ಹೊಸ ಸೂರ್ಯೋದಯವಾಗಲಿದೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತೇವೆ,” ಎಂದು ಭರವಸೆ ನೀಡಿದರು.
ಇದನ್ನೂ ಓದಿ: ವೈಭವ್, ಯಶಸ್ವಿ ಸಿಡಿಲಬ್ಬರದ ನಡುವೆ RCB ದಾಖಲೆ ಸೇಫ್
ಏಪ್ರಿಲ್ 12 ರಂದು ನಡೆಯಲಿರುವ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಅದಕ್ಕೂ ಮುನ್ನ ಆರ್ಸಿಬಿ ತಂಡವು ಏಪ್ರಿಲ್ 10 ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.