
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಬ್ರಿಸ್ಟಲ್ನ ಕೌಂಟಿ ಮೈದಾನದಲ್ಲಿ ನಡೆಯಿತು. ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 159 ರನ್ ಕಲೆಹಾಕಿತು. ಅಯ್ಯರ್ ಹೊರತುಪಡಿಸಿ ತಂಡದ ಉಳಿದ ಆಟಗಾರರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಎಂದಿನಂತೆ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ತಂಡದ ಇನ್ನಿಂಗ್ಸ್ ಆರಂಭಿಸಿದರು. ಆದರೆ ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೈಭವ್ ಈ ಪಂದ್ಯದಲ್ಲೂ ರನ್ ಗಳಿಸಲು ವಿಫಲರಾಗಿ 10 ಎಸೆತಗಳನ್ನು ಎದುರಿಸಿ 15 ರನ್ ಬಾರಿಸಿ ಔಟಾದರು. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಎರಡು ಪಂದ್ಯಗಳಲ್ಲೂ ವೈಭವ್ ಅವರ ವಿಕೆಟ್ ಪಡೆದಿದ್ದು, ಜೋಪ್ರಾ ಆರ್ಚರ್. ವೈಭವ್ ವಿಕೆಟ್ ಬಳಿಕ ಬಂದ ಇಶಾನ್ ಕಿಶನ್ ಕೂಡ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ ಕೂಡ 16 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ಟೀಂ ಇಂಡಿಯಾ ಕೇವಲ 48 ರನ್ಗಳಿಗೆ ತನ್ನ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು.
ಹೀಗಾಗಿ ತಂಡಕ್ಕೆ 100 ರನ್ಗಳನ್ನು ಪೂರೈಸಲು 14 ಓವರ್ಗಳು ಬೇಕಾದವು. ನಾಲ್ಕನೇ ವಿಕೆಟ್ಗೆ ಜೊತೆಯಾದ ದುಬೆ ಹಾಗೂ ನಾಯಕ ಶ್ರೇಯಸ್ ಅಯ್ಯರ್ 50 ರನ್ಗಳ ಜೊತೆಯಾಟದೊಂದಿಗೆ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಆದರೆ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಉಪನಾಯಕ ತಿಲಕ್ ವರ್ಮಾ ಮತ್ತದೆ ನಿದ್ರೆ ಬರಿಸುವ ಬ್ಯಾಟಿಂಗ್ ಮಾಡಿ 8 ಎಸೆತಗಳಲ್ಲಿ 11 ರನ್ ಬಾರಿಸಿ ಔಟಾದರು. ಉಪನಾಯಕತ್ವವಹಿಸಿಕೊಂಡ ಬಳಿಕ ಒತ್ತಡಕ್ಕೆ ಒಳಗಾದವರಂತೆ ಕಾಣುತ್ತಿರುವ ತಿಲಕ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಅವರ ಸ್ಟ್ರೈಕ್ ರೇಟ್ ಕೂಡ ಕುಸಿತ ಕಂಡಿದೆ.
IND vs ENG: 3ನೇ ಪಂದ್ಯದಲ್ಲೂ ಮುಗ್ಗರಿಸಿದ ವೈಭವ್ ಸೂರ್ಯವಂಶಿ
ತಂಡದ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ವಿಫಲವಾದಾಗ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ನಾಯಕ ಶ್ರೇಯಸ್ ಅಯ್ಯರ್ ಕೊನೆಯವರೆಗೂ ಅಜೇಯರಾಗಿ ಉಳಿದು 80 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 150 ರನ್ಗಳ ಗಡಿ ದಾಟಿಸಿದರು. ಒಂದು ವೇಳೆ ಅಯ್ಯರ್ ನೆಲಕಚ್ಚಿ ನಿಂತು ಆಡದಿದ್ದರೆ, ಈ ಪಂದ್ಯದಲ್ಲೂ ಭಾರತ ತಂಡ 100 ರನ್ಗಳ ಗಡಿ ದಾಟುವುದು ಕಷ್ಟಕರವಾಗಿರುತ್ತಿತ್ತು.
Published On - 11:39 pm, Thu, 9 July 26