
ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಶುಭ್ಮನ್ ಗಿಲ್ಗೆ ಸ್ಥಾನ ಲಭಿಸಿಲ್ಲ. ಅಚ್ಚರಿ ಎಂದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಗಿಲ್ ಭಾರತ ಟಿ20 ತಂಡದ ಉಪನಾಯಕರಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಟಿ20 ವಿಶ್ವಕಪ್ನಲ್ಲೂ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಹಾಗೂ ಟಿ20 ವಿಶ್ವಕಪ್ಗೆ ಪ್ರಕಟಿಸಲಾದ ತಂಡದಲ್ಲಿ ಗಿಲ್ಗೆ ಸ್ಥಾನ ನೀಡಲಾಗಿಲ್ಲ.
ಇತ್ತ ಶುಭ್ಮನ್ ಗಿಲ್ಗೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್. ಅಷ್ಟೇ ಅಲ್ಲದೆ ಗವಾಸ್ಕರ್ ಹೆಸರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ಗಿಲ್ ಅವರನ್ನು ಆರಂಭಿಕರಾಗಿ ಕೂಡ ಆಯ್ಕೆ ಮಾಡಿದ್ದರು. ಆದರೆ ಭಾರತ ತಂಡ ಪ್ರಕಟವಾದಾಗ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಇದು ಆಶ್ಚರ್ಯಕರ ಸಂಗತಿ. ಅವರು (ಗಿಲ್) ಒಬ್ಬ ಶ್ರೇಷ್ಠ, ಗುಣಮಟ್ಟದ ಬ್ಯಾಟ್ಸ್ಮನ್. 2024 ರ ಟಿ 20 ವಿಶ್ವಕಪ್ ನಂತರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ ಅವರು ಸೌತ್ ಆಫ್ರಿಕಾ ವಿರುದ್ಧದ ಕೆಲವು ಪಂದ್ಯಗಳಲ್ಲಿ ರನ್ಗಳಿಸಲು ಹೆಣಗಾಡಿದ್ದಾರೆ ನಿಜ. ಆದರೆ ಕ್ಲಾಸ್ ಶಾಶ್ವತ, ಫಾರ್ಮ್ ತಾತ್ಕಾಲಿಕ,” ಎಂದು ನೆನಪಿಟ್ಟುಕೊಳ್ಳಬೇಕು.
ಇತ್ತೀಚೆಗೆ ನಾನು ಅಹಮದಾಬಾದ್ನಿಂದ ಹಿಂತಿರುಗುವಾಗ ಗಿಲ್ ಕೂಡ ವಿಮಾನದಲ್ಲಿದ್ದರು. ಈ ವೇಳೆಯೇ ನಾನು ಗಿಲ್ಗೆ ತಮ್ಮ ಮನೆಯಲ್ಲಿ ಹಿರಿಯ ವ್ಯಕ್ತಿಯಿಂದ ಕಣ್ಣು ದೃಷ್ಟಿ ತೆಗೆಯುವಂತೆ ಸೂಚಿಸಿದ್ದೆ. ನಾನು ಈ ಕೆಟ್ಟ ದೃಷ್ಟಿಯನ್ನೆಲ್ಲಾ ನಂಬುತ್ತೇನೆ. ಹೀಗಾಗಿ ಈಗಲೂ ಶುಭ್ಮನ್ ಗಿಲ್ ಮನೆಗೆ ಹೋಗಿ ಅಜ್ಜಿ ಅಥವಾ ಹಿರಿಯ ವ್ಯಕ್ತಿಯಿಂದ ಕೆಟ್ಟ ದೃಷ್ಟಿ ತೆಗೆಯಬೇಕೆಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಟೀಮ್ ಇಂಡಿಯಾ
ಇನ್ನು ಶುಭ್ಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಕಳಪೆ ಪ್ರದರ್ಶನ. ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದ ಗಿಲ್ ಕಲೆಹಾಕಿದ್ದು ಕೇವಲ 32 ರನ್ಗಳು ಮಾತ್ರ. ಹೀಗಾಗಿಯೇ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.