Suryakumar Yadav: ನಾವು ಇನ್ನೆಷ್ಟು ರನ್​ಗಳಿಸಬೇಕು ಅಂತ ಕೇಳಿದೆ..!

India vs England: ಭಾರತ ತಂಡವು 7 ರನ್​ಗಳ ಗೆಲುವು ದಾಖಲಿಸಿ ಟಿ20 ವಿಶ್ವಕಪ್​ನ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ಗಳಿಸಿದರೆ, ಇಂಗ್ಲೆಂಡ್ 246 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್​ಗಳ ಜಯದೊಂದಿಗೆ ಫೈನಲ್​ ಫೈಟ್​ಗೆ ಅರ್ಹತೆ ಪಡೆದುಕೊಂಡಿದೆ.

Suryakumar Yadav: ನಾವು ಇನ್ನೆಷ್ಟು ರನ್​ಗಳಿಸಬೇಕು ಅಂತ ಕೇಳಿದೆ..!
Suryakumar Yadav

Updated on: Mar 06, 2026 | 9:17 AM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್​ಗಳಲ್ಲಿ 246 ರನ್​ಗಳಿಸುವ ಮೂಲಕ 7 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡರು.

ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ. ಅತ್ತ ಏಳು ರನ್​ಗಳ ಜಯ ಸಾಧಿಸಿದ ಟೀಮ್ ಇಂಡಿಯಾ ಫೈನಲ್​ಗೇರಿದೆ. ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದೊಂದು ನಂಬಲಾಗದ ಅನುಭವ. ಭಾರತದಲ್ಲಿ ಆಡುವುದು, ಅದ್ಭುತ ತಂಡವನ್ನು ಮುನ್ನಡೆಸುವುದು, ಆ ತಂಡವನ್ನು ಫೈನಲ್​ಗೆ ಕೊಂಡೊಯ್ಯುವುದು ನಿಜಕ್ಕೂ ವಿಶೇಷ ಅನುಭವ. ನಮ್ಮ ತಂಡಕ್ಕೆ ಈ ಪಂದ್ಯ ಎಷ್ಟು ಮುಖ್ಯ ಎಂಬುದು ಚೆನ್ನಾಗಿ ಗೊತ್ತಿತ್ತು. ಅದರಲ್ಲೂ ಸಂಜು ಸ್ಯಾಮ್ಸನ್​ಗೆ ಬ್ಯಾಟಿಂಗ್​ಗೆ ತೆರಳಿದಾಗ ಏನು ಮಾಡಬೇಕೆಂದು ತಿಳಿದಿದ್ದರು.

ವಿಕೆಟ್ ಬಿದ್ದಾಗಲೂ, ಪಿಚ್​ ಬ್ಯಾಟಿಂಗ್​ ಉತ್ತಮವಾಗಿದೆ ಎಂದು ಅವರಿಗೆ ತಿಳಿದಿತ್ತು. ಹೀಗಾಗಿಯೇ ಅವರು ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ಸಂಜು ಸ್ಯಾಮ್ಸನ್ ಪಾಲಿಗೆ ಇಂದು ವಿಶೇಷ ಇನಿಂಗ್ಸ್ ಆಗಿತ್ತು. ಈ ಇನಿಂಗ್ಸ್ ನೆರವಿನೊಂದಿಗೆ ನಾವು ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇಷ್ಟೊಂದು ದೊಡ್ಡ ಸ್ಕೋರ್​ಗಳಿಸದರೂ ಇಂಗ್ಲೆಂಡ್ ತಂಡದ ಚೇಸಿಂಗ್ ಪ್ರಯತ್ನ ಮೆಚ್ಚಲೇಬೇಕು. ನಾನು ಇದನ್ನೇ ಹ್ಯಾರಿ ಬ್ರೂಕ್​ಗೆ ಕೇಳಿದೆ, ನಿಮ್ಮ ವಿರುದ್ಧ ಗೆಲ್ಲಲು ನಾವು ಇನ್ನೂ ಎಷ್ಟು ಸ್ಕೋರ್ ಮಾಡಬೇಕು?” ಅಂತ. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತ. ಅಂತಹದೊಂದು ಚೇಸಿಂಗ್ ಕ್ರೆಡಿಟ್ ಅವರಿಗೆ ಸಲ್ಲಬೇಕು.

ಏಕೆಂದರೆ ಪಂದ್ಯದುದ್ದಕ್ಕೂ ಇಂಗ್ಲೆಂಡ್ ತಂಡ ಮ್ಯಾಚ್​ನಲ್ಲಿದ್ದರು. ಆದರೆ ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಇತರ ಬೌಲರ್‌ಗಳು ಪಂದ್ಯದ ದಿಕ್ಕನ್ನು ಬದಲಿಸಿದ ರೀತಿ ನಂಬಲಾಗದದು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಅವರ ಸಾಮರ್ಥ್ಯ ಮತ್ತು ಅವರು ಕೆಲ ವರ್ಷಗಳಿಂದ ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ಸಹ ಇಡೀ ಪಂದ್ಯದ ಚಿತ್ರಣ ಬದಲಿಸುವಲ್ಲಿ ಜಸ್​ಪ್ರೀತ್ ಬುಮ್ರಾ ಪ್ರಮುಖ ಪಾತ್ರವಹಿಸಿದರು.

ಇನ್ನು ನಮ್ಮ ಫೀಲ್ಡಿಂಗ್ ಕೋಚ್ ದಿಲೀಪ್ ಟಿ ಅವರಿಗೂ ನಾವು ಸ್ವಲ್ಪ ಕ್ರೆಡಿಟ್ ನೀಡಬೇಕು. ಅವರು ಅಭ್ಯಾಸ ಅವಧಿಗಳಲ್ಲಿ ಹುಡುಗರೊಂದಿಗೆ ಕೆಲಸ ಮಾಡುತ್ತಿರುವ ರೀತಿ ಆಟಗಾರರನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿಸುತ್ತದೆ. ಅದರ ಫಲವಾಗಿ ಟೀಮ್ ಇಂಡಿಯಾ ಫೀಲ್ಡರ್​ಗಳು ಅತ್ಯುತ್ತಮ ಕ್ಯಾಚ್​ಗಳನ್ನು ಹಿಡಿದಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

ಇದನ್ನೂ ಓದಿ: ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್

ಫೈನಲ್​ಗೂ ಮುನ್ನ  ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಇದೀಗ ಇದೇ ಉತ್ಸಾಹದಲ್ಲೇ ಫೈನಲ್​ಗೆ ಹೋಗುತ್ತಿದ್ದೇವೆ. ಭಾರತದಲ್ಲಿ ಆಡುವುದು ಮತ್ತು ಪ್ರಶಸ್ತಿಗಾಗಿ ಸೆಣಸುವುದು ಅದ್ಭುತ ಅನುಭವ. ಹೀಗಾಗಿ ನಾವೆಲ್ಲರೂ ಆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

 

Follow Us