TNPL 2025: ಆರ್. ಅಶ್ವಿನ್ ತಂಡದ ವಿರುದ್ಧ ಚೆಂಡನ್ನು ವಿರೂಪಗೊಳಿಸಿದ ಆರೋಪ; ಆಯೋಜಕರಿಗೆ ದೂರು

TNPL 2025: ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಆರ್. ಅಶ್ವಿನ್ ನೇತೃತ್ವದ ದಿಂಡಿಗಲ್ ಡ್ರಾಗನ್ಸ್ ತಂಡದ ವಿರುದ್ಧ ಚೆಂಡನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿದೆ. ಮಧುರೈ ಪ್ಯಾಂಥರ್ಸ್ ತಂಡ ಈ ಆರೋಪವನ್ನು ಹೊರಿಸಿದ್ದು, TNPL ಆಯೋಜಕರಿಗೆ ದೂರು ಸಲ್ಲಿಸಿದೆ. TNPL ಸಿಇಒ ಈ ಆರೋಪವನ್ನು ತಳ್ಳಿಹಾಕಿದ್ದು, ಪುರಾವೆಗಳನ್ನು ಒದಗಿಸುವಂತೆ ಮಧುರೈ ಪ್ಯಾಂಥರ್ಸ್‌ಗೆ ಸೂಚಿಸಿದ್ದಾರೆ. ಅಶ್ವಿನ್ ಮೊದಲೇ ಅಂಪೈರ್ ಜೊತೆ ವಾಗ್ವಾದಕ್ಕಾಗಿ ದಂಡನೆಗೆ ಒಳಗಾಗಿದ್ದರು.

TNPL  2025: ಆರ್. ಅಶ್ವಿನ್ ತಂಡದ ವಿರುದ್ಧ ಚೆಂಡನ್ನು ವಿರೂಪಗೊಳಿಸಿದ ಆರೋಪ; ಆಯೋಜಕರಿಗೆ ದೂರು
R Ashwin

Updated on: Jun 16, 2025 | 9:15 PM

ಪ್ರಸ್ತುತ ತಮಿಳುನಾಡಿನಲ್ಲಿ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್​ನ (TNPL) 9ನೇ ಆವೃತ್ತಿಯಲ್ಲಿ ಚೆಂಡನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿದೆ. ಈ ಲೀಗ್‌ನಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್​. ಅಶ್ವಿನ್ (R Ashwin) ಒಂದಿಲೊಂದು ವಿವಾದಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಈ ಮೊದಲು ಅಂಪೈರ್ ಜೊತೆ ವಾಗ್ವಾದ ನಡೆಸಿ ದಂಡನೆಗೊಳಗಾಗಿದ್ದ ಆರ್​. ಅಶ್ವಿನ್ ಇದೀಗ ಹೊಸ ವಿವಾದದೊಂದಿಗೆ ಮುನ್ನಲೆಗೆ ಬಂದಿದ್ದಾರೆ. ವಾಸ್ತವವಾಗಿ ಆರ್​. ಅಶ್ವಿನ್ ನಾಯಕತ್ವದ ದಿಂಡಿಗಲ್ ಡ್ರಾಗನ್ಸ್ ತಂಡ ಚೆಂಡನ್ನು ವಿರೂಪಗೊಳಿಸಿದೆ ಎಂಬ ಗಂಭೀರ ಆರೋಪವನ್ನು ಮಧುರೈ ಪ್ಯಾಂಥರ್ಸ್ ತಂಡ ಹೊರಿಸಿದೆ. ಅಲ್ಲದೆ ಈ ಬಗ್ಗೆ ತಮಿಳುನಾಡು ಪ್ರೀಮಿಯರ್ ಲೀಗ್ ಆಯೋಜಕರಿಗೂ ದೂರು ನೀಡಿದೆ ಎಂದು ವರದಿಯಾಗಿದೆ.

ಚೆಂಡನ್ನು ವಿರೂಪಗೊಳಿದ ಆರೋಪ

ಜೂನ್ 14 ರ ಶನಿವಾರ ನಡೆದ ಪಂದ್ಯದ ಸಮಯದಲ್ಲಿ ಅಶ್ವಿನ್ ಮತ್ತು ಅವರ ತಂಡ ದಿಂಡಿಗಲ್ ಡ್ರಾಗನ್ಸ್ ಚೆಂಡನ್ನು ವಿರೂಪಗೊಳಿಸಿದೆ ಎಂದು ಮಧುರೈ ಪ್ಯಾಂಥರ್ಸ್ ತಂಡ ಆರೋಪ ಹೊರಿಸಿದ್ದು, ಆಯೋಜಕರಿಗೆ ಲಿಖಿತ ದೂರು ನೀಡಿದೆ. ದಿಂಡಿಗಲ್ ಡ್ರಾಗನ್ಸ್ ತಂಡವು ಚೆಂಡನ್ನು ವಿರೂಪಗೊಳಿಸಲು ರಾಸಾಯನಿಕಗಳಿಂದ ಸಂಸ್ಕರಿಸಿದ ಟವೆಲ್‌ಗಳನ್ನು ಬಳಸಿದೆ ಎಂದು ಆರೋಪಿಸಿ ಮಧುರೈ ಪ್ಯಾಂಥರ್ಸ್ TNPL ಗೆ ಲಿಖಿತ ದೂರು ನೀಡಿದೆ. ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಅವರು ಅದನ್ನು ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ಆದಾಗ್ಯೂ, TNPL ಸಿಇಒ ಪ್ರಸನ್ನ ಕಣ್ಣನ್ ಈ ಆರೋಪವನ್ನು ತಳ್ಳಿ ಹಾಕಿದ್ದು, ಅಶ್ವಿನ್ ಮತ್ತು ದಿಂಡಿಗಲ್ ವಿರುದ್ಧ ಮಾಡಲಾದ ಆರೋಪಗಳಿಗೆ ಪುರಾವೆಗಳನ್ನು ಒದಗಿಸುವಂತೆ ಅವರು ಮಧುರೈ ಪ್ಯಾಂಥರ್ಸ್ ತಂಡವನ್ನು ಕೇಳಿದ್ದಾರೆ.

TNPL ಸಿಇಒ ನೀಡಿದ ಸ್ಪಷ್ಟನೆ ಏನು?

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಸನ್ನ ಕಣ್ಣನ್, ‘ ಮಧುರೈ ಪ್ಯಾಂಥರ್ಸ್ ತಂಡ ನೀಡಿರುವ ದೂರನ್ನು ನಾವು ಸ್ವೀಕರಿಸಿದ್ದೇವೆ, ಆದರೂ ದೂರು 24 ಗಂಟೆಗಳ ಒಳಗೆ ದಾಖಲಾಗಿಲ್ಲ. ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿದ್ದರೆ, ನಾವು ಸ್ವತಂತ್ರ ಸಮಿತಿಯನ್ನು ರಚಿಸುತ್ತೇವೆ. ಸಾಕಷ್ಟು ಪುರಾವೆಗಳಿಲ್ಲದೆ ಆಟಗಾರ ಅಥವಾ ಫ್ರಾಂಚೈಸಿಯ ವಿರುದ್ಧ ಅಂತಹ ಆರೋಪಗಳನ್ನು ಮಾಡುವುದು ಅನ್ಯಾಯ. ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸದಿದ್ದರೆ, ಮಧುರೈ ಪ್ಯಾಂಥರ್ಸ್ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಅಂಪೈರ್‌ಗಳ ಮುಂದೆ ಚೆಂಡನ್ನು ಒಣಗಿಸಲು ಲೀಗ್ ಒದಗಿಸಿದ ಟವೆಲ್‌ಗಳನ್ನು ಬಳಸಲು TNPL ಅನುಮತಿಸಿದೆ. ತಮಿಳುನಾಡಿನಲ್ಲಿ ಮಳೆಗಾಲಕ್ಕೆ ಹೊಂದಿಕೆಯಾಗುವ ಲೀಗ್‌ನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ENG vs IND: ಗಿಲ್, ಬುಮ್ರಾಗೆ ಬೇಡ; ಟೆಸ್ಟ್ ನಾಯಕತ್ವವನ್ನು ಈ ಅನುಭವಿಗೆ ನೀಡಿ ಎಂದ ಅಶ್ವಿನ್

ಅಶ್ವಿನ್​ಗೆ ದಂಡ

ಇದಕ್ಕೂ ಮೊದಲು ಜೂನ್ 6 ರಂದು ನಡೆದ ಪಂದ್ಯದ ವೇಳೆ ಅಂಪೈರ್ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಅಶ್ವಿನ್ ಪಂದ್ಯ ಶುಲ್ಕದ 30% ಕಳೆದುಕೊಂಡಿದ್ದರು. ದಿಂಡಿಗಲ್ ಈಗ ಮೂರು ಪಂದ್ಯಗಳಲ್ಲಿ ಎರಡು ಜಯಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು,ಜೂನ್ 16 ರಂದು ಚೆಪಾಕ್ ಸೂಪರ್ ಗಿಲ್ಲೀಸ್ ವಿರುದ್ಧದ ಮುಂದಿನ ಪಂದ್ಯವನ್ನು ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ