
ದೇಶಿ ಕ್ರಿಕೆಟ್ನ ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ದುಲೀಪ್ ಟ್ರೋಫಿಗೆ ಇಂದು ಚಾಲನೆ ದೊರೆತಿದೆ. ಆದರೆ, ಈ ಟೂರ್ನಿಯ ಮೂಲಕ ಚೊಚ್ಚಲ ಪದಾರ್ಪಣೆ ಮಾಡಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ನಾರ್ತ್ ಈಸ್ಟ್ ಝೋನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಪರ ಕಣಕ್ಕಿಳಿದಿದ್ದ ವೈಭವ್, ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್ ಸೇರಿದ್ದಾರೆ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಈಸ್ಟ್ ಝೋನ್ ಪರ ಅಭಿಮನ್ಯು ಈಶ್ವರನ್ ಜೊತೆ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಿದರು. ಕ್ರೀಸ್ಗೆ ಬಂದ ಮೊದಲ ಎರಡು ಎಸೆತಗಳಲ್ಲೇ ಅದ್ಭುತ ಕವರ್ ಡ್ರೈವ್ ಮೂಲಕ ಬ್ಯಾಕ್-ಟು-ಬ್ಯಾಕ್ ಬೌಂಡರಿ ಬಾರಿಸಿದ ವೈಭವ್, ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಅಲ್ಲದೆ ಕೇವಲ 6 ಎಸೆತ ಎದುರಿಸಿದ ಅವರು 133.33 ರ ಸ್ಟ್ರೈಕ್ ರೇಟ್ನಲ್ಲಿ 8 ರನ್ ಕಲೆಹಾಕಿದರು.
ಬಲಗೈ ಮಧ್ಯಮ ವೇಗಿ ಬಿಶ್ವರ್ಜಿತ್ ಕೊಂಥೌಜಮ್ ಎಸೆದ ಓವರ್ನ ಕೊನೆಯ ಎಸೆತದಲ್ಲೂ ಬೌಂಡರಿ ಬಾರಿಸಲು ಯತ್ನಿಸಿದ ವೈಭವ್ ಸೂರ್ಯವಂಶಿ ಬ್ಯಾಟ್ಗೆ ಚೆಂಡು ಎಡ್ಜ್ ಆಯಿತು. ಗಲ್ಲಿಯಲ್ಲಿದ್ದ ಫೀಲ್ಡರ್ ಜೋಸೆಫ್ ಲಾಲ್ತಂಖುಮಾ ಅತ್ಯುತ್ತಮ ಕ್ಯಾಚ್ ಹಿಡಿಯುವ ಮೂಲಕ ವೈಭವ್ ಇನ್ನಿಂಗ್ಸ್ಗೆ ಬ್ರೇಕ್ ಹಾಕಿದರು. ಇದರೊಂದಿಗೆ ದೊಡ್ಡ ಸ್ಕೋರ್ ಮಾಡುವ ಯುವ ಆಟಗಾರನ ಕನಸು ಆರಂಭದಲ್ಲೇ ಭಗ್ನಗೊಂಡಿತು.
Exciting early battle 🔥
4️⃣,4️⃣,🇼
Bishworjit Konthoujam wins the contest against Vaibhav Sooryavanshi 👌#DuleepTrophy
Scorecard ▶️ https://t.co/XJFhfvvTIU pic.twitter.com/4xGnLaAhpx
— BCCI Domestic (@BCCIdomestic) August 23, 2026
ಇತ್ತೀಚೆಗಷ್ಟೇ ಝಿಂಬಾಬ್ವೆ ಪ್ರವಾಸದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ ಅವರನ್ನು ಈಸ್ಟ್ ಝೋನ್ ತಂಡಕ್ಕೆ ಅಚ್ಚರಿಯ ರೀತಿಯಲ್ಲಿ ವೈಸ್ ಕ್ಯಾಪ್ಟನ್ ಆಗಿ ನೇಮಿಸಲಾಗಿತ್ತು. ಇಶಾನ್ ಕಿಶನ್ ನೇತೃತ್ವದ ತಂಡದಲ್ಲಿ 15 ವರ್ಷದ ಆಟಗಾರನಿಗೆ ಈ ಜವಾಬ್ದಾರಿ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಹರ್ಷ ಭೋಗ್ಲೆ ಅವರಂತಹ ಹಿರಿಯ ಕ್ರಿಕೆಟ್ ವಿಶ್ಲೇಷಕರು ಕೂಡ, ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಕೇವಲ 17 ರ ಸರಾಸರಿ ಹೊಂದಿರುವ ಆಟಗಾರನಿಗೆ ಇಷ್ಟು ಬೇಗ ನಾಯಕತ್ವದ ಜವಾಬ್ದಾರಿ ನೀಡಿರುವುದನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ: IND vs SL: ನೂಕಾಟ, ಗುದ್ದಾಟ… ಮೈದಾನದಲ್ಲೇ ಆಟಗಾರರ ಕಿತ್ತಾಟ!
ತಮ್ಮ ಮೇಲಿನ ಎಲ್ಲಾ ಪ್ರಶ್ನೆ ಮತ್ತು ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಲು ವೈಭವ್ ಅವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿತ್ತು. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ವಿಫಲರಾಗಿರುವ ವೈಭವ್ ಸೂರ್ಯವಂಶಿ, ದ್ವಿತೀಯ ಇನ್ನಿಂಗ್ಸ್ನಲ್ಲಿ ಅಬ್ಬರಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.