ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಕುರಿತು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಬಾಂಬೆ ಹೈಕೋರ್ಟ್ ಮಾರ್ಚ್ 20 ರಂದು ವಿಚ್ಛೇದನದ ಬಗ್ಗೆ ಅಂತಿಮ ತೀರ್ಪು ನೀಡುವಂತೆ ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ. ಇದರ ಜೊತೆಗೆ ಹೈಕೋರ್ಟ್, 6 ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಸಹ ಮನ್ನಾ ಮಾಡಿದೆ. ಹೀಗಾಗಿ ಚಾಹಲ್ ಹಾಗೂ ಧನಶ್ರೀ ವರ್ಮಾ ಅವರ ವಿಚ್ಛೇದನ ತೀರ್ಪು ನಾಳೆಯೇ ಹೊರಬೀಳಲಿದ್ದು, ಇದರ ಜೊತೆಗೆ ಧನಶ್ರೀಗೆ ಚಾಹಲ್ ಜೀವನಾಂಶವಾಗಿ ಎಷ್ಟು ಹಣವನ್ನು ನೀಡುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಸಿಕ್ಕಿದೆ.
ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಚಾಹಲ್ ಕೂಡ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಚಾಹಲ್, ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದು, ಈ ತಂಡ ಮಾರ್ಚ್ 25 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ಬಳಿಕ ಮುಂದಿನ ಎರಡು ತಿಂಗಳು ಚಾಹಲ್ ಐಪಿಎಲ್ನಲ್ಲಿ ನಿರತರಾಗಲಿದ್ದಾರೆ. ಹೀಗಾಗಿ ಚಾಹಲ್ ಅವರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 20 ರೊಳಗೆ ವಿಚ್ಛೇದನ ಅರ್ಜಿಯ ಕುರಿತು ಅಂತಿಮ ನಿರ್ಧಾರವನ್ನು ನೀಡುವಂತೆ ಹೈಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಚಾಹಲ್ ಮತ್ತು ಧನಶ್ರೀ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಬಹಿರಂಗಪಡಿಸಿದೆ. ಇದರರ್ಥ 2022 ರ ಜೂನ್ನಿಂದಲೇ ದಂಪತಿಗಳಿಬ್ಬರು ಬೇರ್ಪಟ್ಟಿದ್ದು, ಬೇರೆ ಬೇರೆ ವಾಸುತ್ತಿದ್ದಾರೆ ಎಂಬುದು ಖಚಿತವಾಗಿದೆ. ಫೆಬ್ರವರಿ 5 ರಂದು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಜಂಟಿ ಅರ್ಜಿಯನ್ನು ಸಲ್ಲಿಸಿದ್ದು, ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು ಕೋರಿದ್ದಾರೆ. ಇದರಿಂದ ಚಾಹಲ್ ಮತ್ತು ಧನಶ್ರೀ ಇನ್ನು ಮುಂದೆ ಒಟ್ಟಿಗೆ ಬಾಳುವ ಸಾಧ್ಯೆಗಳಿಲ್ಲ ಎಂಬುದನ್ನು ಸಹ ಹೈಕೋರ್ಟ್ ಆದೇಶ ದೃಢಪಡಿಸಿದೆ.
ವರದಿಯ ಪ್ರಕಾರ, ಜೀವನಾಂಶಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಪರಸ್ಪರ ಒಪ್ಪಂದಕ್ಕೆ ಬರಲಾಗಿದೆ. ಇದರ ಅಡಿಯಲ್ಲಿ ಯುಜ್ವೇಂದ್ರ ಚಾಹಲ್ ಧನಶ್ರೀ ವರ್ಮಾ ಅವರಿಗೆ 4.75 ಕೋಟಿ ರೂ.ಗಳನ್ನು ಜೀವನಾಂಶವಾಗಿ ನೀಡಲಿದ್ದಾರೆ. ಕುಟುಂಬ ನ್ಯಾಯಾಲಯದ ಪ್ರಕಾರ, ಚಾಹಲ್ ಈಗಾಗಲೇ ಇದರಲ್ಲಿ 2.37 ಕೋಟಿ ರೂ.ಗಳನ್ನು ಧನಶ್ರೀ ಅವರಿಗೆ ನೀಡಿದ್ದಾರೆ. ಇಬ್ಬರ ನಡುವಿನ ಒಪ್ಪಂದದ ಪ್ರಕಾರ, ವಿಚ್ಛೇದನ ಆದೇಶದ ನಂತರವೇ ಎರಡನೇ ಕಂತಿನ ಜೀವನಾಂಶವನ್ನು ಚಾಹಲ್ ಪಾವತಿಸಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Wed, 19 March 25