IPL 2026 Final: ಫೈನಲ್ ಪಂದ್ಯ ರದ್ದಾದರೆ ಯಾರಿಗೆ ಸಿಗಲಿದೆ ಟ್ರೋಫಿ?

IPL 2026 Final: ಐಪಿಎಲ್ 2026 ಫೈನಲ್‌ನಲ್ಲಿ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಸೆಣಸಲಿವೆ. ಮಳೆಯಿಂದ ಪಂದ್ಯ ರದ್ದಾದರೆ ಯಾರಿಗೆ ಚಾಂಪಿಯನ್ ಪಟ್ಟ ಎಂಬ ಪ್ರಶ್ನೆ ಮೂಡಿದೆ. ಫೈನಲ್‌ಗೆ ಮೇ 31 ರಂದು ನಿಗದಿಯಾಗಿದ್ದು, ಜೂನ್ 1 ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಅಂದು ಸಹ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಈ ನಿಯಮದಂತೆ ಆರ್​ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

IPL 2026 Final: ಫೈನಲ್ ಪಂದ್ಯ ರದ್ದಾದರೆ ಯಾರಿಗೆ ಸಿಗಲಿದೆ ಟ್ರೋಫಿ?
Rcb Vs Gt

Updated on: May 30, 2026 | 10:55 PM

ಐಪಿಎಲ್ 2026 (IPL 2026) ರ ಚಾಂಪಿಯನ್‌ ಪಟ್ಟಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಸೆಣಸಲಿವೆ. ಮೇ 31 ರ ಭಾನುವಾರದಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಎರಡೂ ತಂಡಗಳು ಸೀಸನ್ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಚಾಂಪಿಯನ್ ಆಗುವತ್ತ ಅಂತಿಮ ಹೆಜ್ಜೆ ಇಟ್ಟಿವೆ. ಆದರೆ ಫೈನಲ್ ಪಂದ್ಯದ ದಿನದಂದು ಮಳೆ ಬಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಇತರೆ ಕಾರಣದಿಂದಾಗಿ ಪಂದ್ಯ ನಡೆಯದಿದ್ದರೆ ಯಾವ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗಲಿದೆ? ಹಾಗೆಯೇ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಫೈನಲ್ ಪಂದ್ಯಕ್ಕಿದೆ ಮೀಸಲು ದಿನ

ಐಪಿಎಲ್‌ನಲ್ಲಿ ಲೀಗ್ ಹಂತ ಹಾಗೂ ಪ್ಲೇಆಫ್‌ ಸುತ್ತಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಲೀಗ್ ಹಂತದಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತಿತ್ತು. ಆದರೆ ಪ್ಲೇಆಫ್‌ ಸುತ್ತಿಗೆ ಆ ನಿಯಮ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಪ್ಲೇಆಫ್‌ ಸುತ್ತಿನಲ್ಲಿ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಯಾವ ತಂಡ ಮೇಲಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಏಕೆಂದರೆ ಪ್ಲೇಆಫ್‌ಗೂ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಆದರೆ ಫೈನಲ್ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ. ಏಕೆಂದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ಮೀಸಲು ದಿನದಂದು ಪಂದ್ಯ ನಡೆಯದಿದ್ದರೆ?

ಫೈನಲ್ ಪಂದ್ಯವನ್ನು ಮೇ 31 ರಂದೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಆದಾಗ್ಯೂ ನಿರಂತರವಾಗಿ ಮಳೆ ಬಂದರೆ, ಓವರ್‌ಗಳನ್ನು ಕಡಿಮೆ ಮಾಡಲಾಗುತ್ತದೆ. ಮಳೆ ಮುಂದುವರಿದರೆ, ಹೆಚ್ಚುವರಿಯಾಗಿ 120 ನಿಮಿಷಗಳನ್ನು ಸಹ ನೀಡಲಾಗುತ್ತದೆ. ಹಾಗೆಯೇ ವಿಜೇತರನ್ನು ನಿರ್ಧರಿಸಲು ಪ್ರತಿ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಐದು ಓವರ್‌ಗಳನ್ನು ಆಡಲಾಗುತ್ತದೆ. ಅದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ, ಜೂನ್ 1 ರಂದು ಪಂದ್ಯವನ್ನು ನಡೆಸಲಾಗುವುದು. ಏಕೆಂದರೆ ಜೂನ್ 1 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ.

IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ

ಜೂನ್ 1 ರಂದು ಸಹ ಮಳೆಯಿಂದಾಗಿ ಪಂದ್ಯ ಆರಂಭವಾಗದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಅಗ್ರಸ್ಥಾನ ಪಡೆದಿರುತ್ತದೋ ಆ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ. ಇದರರ್ಥ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್​ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಎರಡನೇ ಸ್ಥಾನ ಪಡೆದುಕೊಂಡಿದ್ದ ಗುಜರಾತ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us