ಕೂಡಲೇ ದೇಶ ತೊರೆಯಿರಿ! ಕೋವಿಡ್-19 ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್‌ಸಿ ವಿರುದ್ಧ ಸಿಟ್ಟಾದ ಮಾಲ್ಡೀವ್ಸ್‌ ಕ್ರೀಡಾ ಸಚಿವ

ಬೆಂಗಳೂರು ಎಫ್‌ಸಿ ತಂಡ ಕೊರೊನಾದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಆದರಿಂದ ನಾವು ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ

ಕೂಡಲೇ ದೇಶ ತೊರೆಯಿರಿ! ಕೋವಿಡ್-19 ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್‌ಸಿ ವಿರುದ್ಧ ಸಿಟ್ಟಾದ ಮಾಲ್ಡೀವ್ಸ್‌ ಕ್ರೀಡಾ ಸಚಿವ
ಬೆಂಗಳೂರು ಎಫ್​​ಸಿ ತಂಡ

Updated on: May 09, 2021 | 3:42 PM

ಭಾರತದ ನಾಯಕ ಸುನಿಲ್ ಛೇಟ್ರಿ ನಾಯಕತ್ವ ವಹಿಸಿರುವ ಬೆಂಗಳೂರು ಎಫ್‌ಸಿ ಫುಟ್ಬಾಲ್​ ತಂಡ ಬಹಳ ಕಷ್ಟದಲ್ಲಿ ಸಿಲುಕಿಕೊಂಡಿದೆ. ಎಎಫ್‌ಸಿ ಕಪ್ ಪ್ಲೇಆಫ್ ಟೈನಲ್ಲಿ ಕ್ಲಬ್ ಈಗಲ್ಸ್ ವಿರುದ್ಧದ ಪಂದ್ಯಕ್ಕಾಗಿ ಐಎಸ್‌ಎಲ್ ಕ್ಲಬ್ ಶುಕ್ರವಾರ ಮಾಲ್ಡೀವ್ಸ್‌ಗೆ ತೆರಳಿತು. ಮೇ 11 ರಂದು ಎರಡು ಕ್ಲಬ್‌ಗಳ ನಡುವೆ ಪ್ಲೇ-ಆಫ್ ಪಂದ್ಯ ನಡೆಯಬೇಕಿತ್ತು. ಆದರೆ, ಈಗ ಬೆಂಗಳೂರು ತಂಡದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಆತಿಥೇಯ ದೇಶದ ಕ್ರೀಡಾ ಸಚಿವರು ಬೆಂಗಳೂರು ಎಫ್‌ಸಿ ತಂಡವನ್ನು ದೇಶ ತೊರೆಯುವಂತೆ ಕೇಳಿಕೊಂಡಿದ್ದಾರೆ. ಬಿಎಫ್‌ಸಿ ಮೇಲೆ ಕೇಳಿಬಂದಿರುವ ಈ ಆರೋಪಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ ಆದರೆ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ಇದನ್ನು ಸ್ವೀಕಾರಾರ್ಹವಲ್ಲದ ವರ್ತನೆ ಎಂದು ಹೇಳಿದ್ದಾರೆ.

ಎಎಫ್‌ಸಿ ಕಪ್‌ನ ಆರಂಭಿಕ ಸುತ್ತಿನ -2 ಪಂದ್ಯದಲ್ಲಿ ಸುನೀಲ್ ಛೇಟ್ರಿ ನೇತೃತ್ವದ ತಂಡ ನೇಪಾಳದ ಕ್ಲಬ್ ತ್ರಿಭುವನ್ ಆರ್ಮಿ ಎಫ್‌ಸಿಯನ್ನು 5-0 ಗೋಲುಗಳಿಂದ ಸೋಲಿಸಿತು. ನಂತರ ಈಗಲ್ಸ್ ಮತ್ತು ಅಬಹಾನಿ ಲಿಮಿಟೆಡ್ ಢಾಕಾ ತಂಡಗಳಲ್ಲಿ ಗೆದ್ದ ತಂಡದೊಂದಿಗೆ ಪಂದ್ಯ ಆಡಬೇಕಿತ್ತು. ಆದರೆ ದೇಶದಲ್ಲಿ ಕೊರೊನಾ ದಾಳಿಯಿಂದಾಗಿ ಬಾಂಗ್ಲಾದೇಶದ ಕ್ಲಬ್, ಎಎಫ್‌ಸಿ ಕಪ್ ಅರ್ಹತಾ ಪಂದ್ಯಗಳಿಂದ ಹಿಂದೆ ಸರಿಯಿತು, ನಂತರ ಈಗಲ್ಸ್ ಪ್ಲೇಆಫ್ ಪಂದ್ಯವನ್ನು ತಲುಪಿತು.

ಕ್ರೀಡಾ ಸಚಿವರು ಟ್ವೀಟ್
ಭಾರತದ ನಾಯಕ ಸುನಿಲ್ ಛೇಟ್ರಿ ನೇತೃತ್ವದ ಬೆಂಗಳೂರು ತಂಡ ಶುಕ್ರವಾರ ಮಾಲ್ಡೀವ್ಸ್ ತಲುಪಿದೆ. ಆದರೆ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಬೆಂಗಳೂರು ಎಫ್‌ಸಿ ತಂಡ ಕೊರೊನಾದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಆದರಿಂದ ನಾವು ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಮಾಲ್ಡೀವ್ಸ್ ಫುಟ್ಬಾಲ್ ಸಂಘಕ್ಕೆ ತಿಳಿಸಿದ್ದೇವೆ ಮತ್ತು ಬೆಂಗಳೂರು ಎಫ್‌ಸಿ ನಿರ್ಗಮನಕ್ಕೆ ತಯಾರಿ ನಡೆಸುವಂತೆ ಕೇಳಿಕೊಂಡಿದ್ದೇವೆ. ಗುಂಪು ಹಂತವನ್ನು ಮುಂದೂಡಲು ನಾವು ಮಾಲ್ಡೀವ್ಸ್ ಫುಟ್ಬಾಲ್ ಅಸೋಸಿಯೇಷನ್ ​​ಮೂಲಕ ಎಎಫ್‌ಸಿಯೊಂದಿಗೆ ಮಾತನಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಎಲ್ಲಾ ಪಂದ್ಯಗಳು ಮಾಲ್ಡೀವ್ಸ್‌ನಲ್ಲಿ ನಡೆಯಬೇಕಿತ್ತು
ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮಾಲ್ಡೀವ್ಸ್ ಎಲ್ಲಾ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ನಡೆಸಲು ಬಯಸಿದ್ದರಿಂದ ಪ್ಲೇ-ಆಫ್‌ಗಳನ್ನು ಹೊರತುಪಡಿಸಿ ಎಲ್ಲಾ ಗ್ರೂಪ್ ಡಿ ಪಂದ್ಯಗಳನ್ನು ಒಂದೇ ಕಡೆ ಆಯೋಜಿಸಲಾಗಿತ್ತು. ಮಹ್ಲೂಫ್ ಅವರ ಟ್ವೀಟ್ ನಂತರ, ಗ್ರೂಪ್ ಡಿ ಯಲ್ಲಿನ ಎಲ್ಲಾ ಪಂದ್ಯಗಳು ನಡೆಯುವುದು ಅನುಮಾನದಿಂದ ಕೂಡಿದೆ. ಎಟಿಕೆ ಮೋಹನ್ ಬಗಾನ್ ತಂಡವೂ ಮೇ 14 ರಂದು ತಮ್ಮ ಮೊದಲ ಪಂದ್ಯದಲ್ಲಿ ಬಿಎಫ್‌ಸಿ ಮತ್ತು ಈಗಲ್ಸ್ ನಡುವಿನ ಪ್ಲೇ-ಆಫ್ ವಿಜೇತರನ್ನು ಎದುರಿಸಲಿದ್ದಾರೆ.

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us