Viral:’ಕ್ರಿಕೆಟ್ ಧರ್ಮ ಜಾತಿ ಭಾಷೆಗಿಂತ ಈ ರೀತಿಯ ಕೆರಳುವಿಕೆಯೇ ನಮ್ಮನ್ನು ಒಗ್ಗೂಡಿಸುವುದು ಮೋಜಿನ ಸಂಗತಿಯಲ್ಲವೆ?’

|

Updated on: Oct 28, 2023 | 3:03 PM

Ashneer Grover: ಇನ್ಫೋಸಿಸ್​​ನ ನಾರಾಯಣಮೂರ್ತಿಯವರ ಹೇಳಿಕೆಗೆ ಭಾರತ್​ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ X ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಾವಿರಾರು ಪ್ರತಿಕ್ರಿಯೆಗಳು ಈ ಪೋಸ್ಟ್​ನಡಿ ಹರಿದು ಬಂದಿವೆ. 'ನಮ್ಮ ಪ್ರಧಾನಿ ಮೋದಿಯವರನ್ನು ನೋಡಿ ಯುವಜನತೆ ಕಲಿತರೆ ಭಾರತವು ಶೀಘ್ರವೇ 70 ಟ್ರಿಲಿಯನ್ ಜಿಡಿಪಿಯ ವಿಶ್ವದ ಪ್ರಬಲ ದೇಶವಾಗುವುದು' ಎಂದು ರಾಷ್ಟ್ರಭಕ್ತರೊಬ್ಬರು ಫರ್ಮಾನು ಹೊರಡಿಸಿದ್ದಾರೆ.

Viral:ಕ್ರಿಕೆಟ್ ಧರ್ಮ ಜಾತಿ ಭಾಷೆಗಿಂತ ಈ ರೀತಿಯ ಕೆರಳುವಿಕೆಯೇ ನಮ್ಮನ್ನು ಒಗ್ಗೂಡಿಸುವುದು ಮೋಜಿನ ಸಂಗತಿಯಲ್ಲವೆ?
ಅಶ್ನೀರ್ ಗ್ರೋವರ್​ ಮತ್ತು ನಾರಾಯಣ ಮೂರ್ತಿ
Follow us on

Narayana Murthy: ಇನ್ಫೊಸಿಸ್‌ನ (Infosys) ಸಹಸಂಸ್ಥಾಪಕ ನಾರಾಯಣಮೂರ್ತಿಯವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಯುವ ಐಟಿ (IT) ಉದ್ಯಮಿಗಳು ವಾರಕ್ಕೆ 70 ಗಂಟೆ, ಎಂದರೆ ದಿನಕ್ಕೆ 14-15 ಗಂಟೆಗಳಷ್ಟು, ಕೆಲಸ ಮಾಡಬೇಕು ಎಂದು ಹೇಳಿದ್ದು ದೊಡ್ಡ ಸುದ್ದಿಯಾಗಿ ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೀಗ ಭಾರತ್‌ಪೇ (BharatPe) ಸಂಸ್ಥೆಯ ಸಹಸಂಸ್ಥಾಪಕ, ವಿವಾದಾತ್ಮಕ ಹೇಳಿಕೆ ಮತ್ತು ವಿಲಕ್ಷಣ ನಡೆವಳಿಕೆಯಿಂದ ಕುಖ್ಯಾತಿ ಪಡೆದಿರುವ ಅಶ್ನೀರ್​ ಗ್ರೋವರ್ (Ashneer Grover) ನಾರಾಯಣಮೂರ್ತಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ ಇದೀಗ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ : Viral: ಫ್ಲಿಪ್​ಕಾರ್ಟ್​ನಿಂದ ನಕಲಿ ಪಾರ್ಸೆಲ್​​; ರೂ 1 ಲಕ್ಷ ಕೊಟ್ಟು ಆರ್ಡರ್ ಮಾಡಿದ್ದು ಸೋನಿ ಟಿವಿ, ತಲುಪಿದ್ದು ಏನು?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಮಾಡಿದ ಕೆಲಸದ ಫಲಿತಾಂಶವನ್ನು ಗಮನಿಸುವ ಬದಲು ಎಷ್ಟು ಗಂಟೆ ಕೆಲಸ ಮಾಡಲಾಯಿತು ಎಂದು ಈ ಕಾಲದಲ್ಲೂ ಅಳೆಯುತ್ತಿರುವುದು ಜನರಿಗೆ ಕೋಪ ತರಿಸಿದೆ ಎಂದು ನನಗನ್ನಿಸುತ್ತಿದೆ. ಅಲ್ಲದೇ, ಯುವಕರ ಮೈಗಳ್ಳತನವೇ ಭಾರತದ ಬೆಳವಣಿಗೆಗೆ ತಡೆಯಾಗಿದೆ ಎಂಬ ಅನಿಸಿಕೆ ಜನರದ್ದೂ ಆಗಿದೆ ಎಂದೆನ್ನಿಸುತ್ತಿದೆ. ಕ್ರಿಕೆಟ್, ಧರ್ಮ, ಜಾತಿ, ಭಾಷೆ ಇವೆಲ್ಲಕ್ಕಿಂತ ಈ ರೀತಿಯ ಕೆರಳುವಿಕೆಯೇ ನಮ್ಮನ್ನೆಲ್ಲ ಒಗ್ಗೂಡಿಸುತ್ತದೆನ್ನುವುದು ಮೋಜಿನ ಸಂಗತಿಯಲ್ಲವೇ?’ ಎಂದು ಟ್ವೀಟ್ ಮಾಡಿದ್ದಕ್ಕೆ ಸಾವಿರಾರು ಪ್ರತಿಕ್ರಿಯೆಗಳು ಹರಿದು ಬಂದಿವೆ.

ಅಶ್ನೀರ್​ ಗ್ರೋವರ್ ಟ್ವೀಟ್​

‘ಕೇವಲ 9-5 ಕೆಲಸ ಮಾಡಿ ಯಾರೂ ಹಣೆಬರೆಹವನ್ನು ಬದಲಾಯಿಸಿಕೊಂಡಿಲ್ಲ’ ಎಂದೊಬ್ಬರು ಸಂಕ್ಷಿಪ್ತವಾಗಿ ಶ್ರಮದ ಮಹತ್ತನ್ನು ಸಾರಿದ್ದಾರೆ. ‘ಈಗಿನ ಯುವಕರು ಸೋಂಬೇರಿಗಳು. ವಾರಕ್ಕೆ 70 ಗಂಟೆಗಳೆಂದರೆ ನಿಜಕ್ಕೂ ದೊಡ್ಡವಿಷಯವಲ್ಲ. ದಿನಕ್ಕೆ 14 ಗಂಟೆಗಳ ಕೆಲಸವಷ್ಟೆ. ನಮ್ಮ ಪ್ರಧಾನಿ ಮೋದಿಯವರನ್ನು ಇವರು ನೋಡಿ ಕಲಿತರೆ ಭಾರತವು ಶೀಘ್ರವೇ 70 ಟ್ರಿಲಿಯನ್ ಜಿಡಿಪಿಯ ವಿಶ್ವದ ಪ್ರಬಲ ದೇಶವಾಗುವುದು’ ಎಂದೊಬ್ಬ ರಾಷ್ಟ್ರಭಕ್ತರು ಫರ್ಮಾನು ಹೊರಡಿಸಿದ್ದಾರೆ.

ಇದನ್ನೂ ಓದಿ : Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್

‘ಇದೇ ಮೂರ್ತಿಯೇ ಅಲ್ಲವೇ ಒಮ್ಮೆ ಹೇಳಿದ್ದು, ”ನಿಮ್ಮ ಕಂಪನಿಯ ಪ್ರೇಮಪಾಶಕ್ಕೆ ಸಿಲುಕಬೇಡಿ, ಅದು ಯಾವಾಗ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೆಂದು ಹೇಳಲಾಗದು” ಎಂದಿದ್ದು? ಎಂದೊಬ್ಬರು ಕೇಳಿದ್ದಾರೆ. ‘ನನ್ನ ಪ್ರಶ್ನೆಯೆಂದರೆ ನಾನು ಹೆಚ್ಚು ದುಡಿದರೆ ಹೆಚ್ಚು ಸಂಬಳ ಕೊಡುತ್ತಾರೋ ಅಥವಾ ಇದು ಬಿಟ್ಟಿ ಕೆಲಸವೋ?’ ಎಂದು ಇನ್ನೊಬ್ಬರು ಕೇಳಿದ್ದಾರೆ. ‘ಅತಿಯಾದ ಕೆಲಸದಿಂದಾಗಿ ಒತ್ತಡ, ಖಿನ್ನತೆ ಉಂಟಾಗಿ ಆರೋಗ್ಯ ಹಾಳಾಗುತ್ತದೆ. ಮೂರ್ತಿಯವರಿಗೆ ಇದು ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ’ ಎಂಬಿತ್ಯಾದಿ ಪ್ರತಿಕ್ರಿಯೆಗಳೂ ಹೇರಳವಾಗಿ ಕಾಣಸಿಗುತ್ತವೆ. ಕೆಲವರು ಇನ್ನೂ ಮುಂದುವರೆದು, ‘ಈ AI ಯುಗದಲ್ಲಿ ಅನಗತ್ಯ ದುಡಿಮೆಯನ್ನು ಕಡಿಮೆ ಮಾಡುವತ್ತ ಎಲ್ಲರೂ ಸಾಗುತ್ತಿರುವಾಗ ಇಂಥ ಹೇಳಿಕೆಗಳು ಅಸಂಗತ ಎಂದಿದ್ದಾರೆ.

ಒಟ್ಟಿನಲ್ಲಿ ನಾರಾಯಣಮೂರ್ತಿ ಯಾವ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಏನು ಹೇಳಿದ್ದರೋ, ಆ ಹೇಳಿಕೆಗೆ ರೆಕ್ಕೆಪುಕ್ಕಗಳು ಮೂಡಿ ಅದು ಕಂಡಕಂಡಲ್ಲಿ ಹಾರಾಡಿ ಎಲ್ಲರೂ ಆ ಹಕ್ಕಿಯ ಬೆನ್ನು ಹತ್ತಿದ್ದಾರೆ. ನಿಮಗೂ ಇದರ ಬಗ್ಗೆ ಇನ್ನೇನಾದರೂ ಹೇಳುವುದಿದ್ದರೆ ಹೇಳಿಯೇ ಬಿಡಿ ಮತ್ತೆ!

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:00 pm, Sat, 28 October 23