
ಬೆಂಗಳೂರು, ಜೂನ್ 22: ಬೆಂಗಳೂರು (Bengaluru) ಅಂದ್ರೆ ದುಬಾರಿ, ಜೇಬಲ್ಲಿ ದುಡ್ಡಿದ್ರೆ ಮಾತ್ರ ಇಲ್ಲಿ ಆರಾಮಾಗಿ ಜೀವನ ನಡೆಸಬಹುದು. ಗಂಡ ಹೆಂಡತಿ ಇಬ್ಬರೂ ದುಡಿದ್ರೂ ಜೀವನ ನಿರ್ವಹಣೆಗೆ ದುಡ್ಡೇ ಸಾಕಾಗಲ್ಲ. ಇನ್ನು ಒಬ್ಬರು ದುಡಿದು ಇಡೀ ಕುಟುಂಬವನ್ನು ನಡೆಸಿಕೊಂಡು ಹೋಗುತ್ತೇವೆ ಅಂದ್ರೆ ಅಷ್ಟು ಸುಲಭವಲ್ಲ. ಇದೀಗ ಬೆಂಗಳೂರಿನ ಇಂಜಿನಿಯರ್ ಒಬ್ಬರು ತಿಂಗಳಿಗೆ 3.5 ಲಕ್ಷ ರೂ ದುಡಿಯುತ್ತಿದ್ದಾರೆ. ಆದರೆ ತಿಂಗಳಿಗೆ 50,000 ರೂ ಉಳಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಆದಾಯವಿದ್ದರೂ ಹೆಚ್ಚಿನ ಖರ್ಚು ಉಳಿತಾಯವನ್ನೇ ಕಸಿದುಕೊಂಡಿದೆ. ಈ ಬಗ್ಗೆ ಹಂಚಿಕೊಂಡ ಪೋಸ್ಟ್ ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ.
ಇಂಡಿಯಾ ಫೈನಾನ್ಸ್ (IndiaFinance) ಹೆಸರಿನ ರೆಡ್ಡಿಟ್ ನಲ್ಲಿ ಹಂಚಿಕೊಂಡ ಪೋಸ್ಟ್ ಗೆ ನಾನು ತಿಂಗಳಿಗೆ 3.5 ಲಕ್ಷ ರೂ ಗಳಿಸುತ್ತೇನೆ, ಆದರೆ ಇನ್ನೂ 50,000 ರೂ ಮಾತ್ರ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನಲ್ಲಿ, ನನಗೆ 34 ವರ್ಷ ವಯಸ್ಸು. ನಾಲ್ಕು ವರ್ಷದ ಅವಳಿ ಹೆಣ್ಣುಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಸಿಟಿಸಿ 96 ಲಕ್ಷ ರೂ ತೆರಿಗೆ ಹೊರತು ಪಡಿಸಿ 3.5 ಲಕ್ಷ ರೂ ಕೈಗೆ ಸಿಗುತ್ತದೆ. ಉಳಿದ 35 ಲಕ್ಷ ರೂ ಇಎಸ್ ಒಪಿಗಳು, ಇದು ಸ್ಟಾರ್ಟ್ಅಪ್ ಆಗಿರುವುದರಿಂದ ನಾನು ಅದರ ಬಗ್ಗೆ ಯೋಚನೆ ಮಾಡಲ್ಲ. ನನ್ನ ಮಾಸಿಕ ವೇತನ ಉಳಿತಾಯ ಸುಮಾರು 45,000 ರೂಯಿಂದ 50,000 ರೂ. ಅಗಾಧವಾದ ಖರ್ಚುಗಳಿಂದಾಗಿ ನಾನು ಒತ್ತಡಕ್ಕೊಳಗಾಗಿದ್ದೇನೆ. ಈ ಬಗ್ಗೆ ನನಗೆ ಕೆಲವು ಸಲಹೆಗಳು ಬೇಕಾಗಿದೆ ಎಂದು ಹೇಳಿದ್ದಾರೆ.
Posts from the indiafinance
community on Reddit
ತಿಂಗಳ ಖರ್ಚು ವೆಚ್ಚಗಳ ಬಗ್ಗೆ ವಿವರ ಮಾಹಿತಿ ಹಂಚಿಕೊಂಡಿದ್ದು, ಗೃಹ ಸಾಲದ ಇಎಂಐ 80,000 ರೂ ಆಗಿದ್ದು, ಈಗಾಗಲೇ ಆರು ವರ್ಷಗಳಿಂದ ಪಾವತಿಸುತ್ತಿದ್ದೇನೆ. ಸರಿಸುಮಾರು 10 ವರ್ಷಗಳು ಬಾಕಿ ಉಳಿದಿವೆ. ಕಾರು ಇಎಂಐ 30,000 ರೂ ಆಗಿದ್ದು, ಬಾಕಿ ಸಾಲದ ಮೊತ್ತ 10 ಲಕ್ಷ ರೂ. ತನ್ನ ಅವಳಿ ಮಕ್ಕಳನ್ನು ನೋಡಿಕೊಳ್ಳುವ ದಾದಿಯೊಬ್ಬರಿಗೆ 40,000 ರೂ ನೀಡುತ್ತೇನೆ. ಪ್ರಿಸ್ಕೂಲ್ ಮತ್ತು ಡೇಕೇರ್ಗೆ 50,000 ರೂ ಖರ್ಚು ಮಾಡುತ್ತೇನೆ. ಮನೆ ಸಹಾಯಕಿ ಹಾಗೂ ಅಡುಗೆಯವಳಿಗೆ 6,000 ರೂ ದಿನಸಿಗಾಗಿ 20,000 ರೂ, ಜಿಮ್ ಮತ್ತು ಪ್ರೋಟೀನ್ಗೆ 8,000 ರೂ, ಚಂದಾದಾರಿಕೆಗಳು ಮತ್ತು ಮನೆಯ ಅಗತ್ಯಗಳಿಗಾಗಿ 15,000 ರೂ, ಕುಟುಂಬ, ಪ್ರಯಾಣ ಹಾಗೂ ಹೊರಾಂಗಣ ಚಟುವಟಿಕೆಗಳಿಗಾಗಿ 40,000 ರೂ ಖರ್ಚಾಗುತ್ತವೆ ಎಂದು ವಿವರಿಸಿದ್ದಾರೆ.
ನಿವ್ವಳ ಮೌಲ್ಯ ಸುಮಾರು 3 ಕೋಟಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಅದು ಬಹುತೇಕ ನಿಶ್ಚಲವಾಗಿದೆ. ನನಗೆ ಏನನ್ನೂ ಉಳಿಸಲು ಸಾಧ್ಯವಾಗುತ್ತಿಲ್ಲ, ಇದು ನನ್ನ ಭವಿಷ್ಯದ ಬಗ್ಗೆ ತುಂಬಾ ಚಿಂತೆಗೀಡು ಮಾಡುತ್ತಿದೆ. ನನ್ನ ಕೆಲಸದಿಂದ ವಜಾಗೊಳಿಸಿದರೆ ನಾನು ಏನನ್ನೂ ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಲ್ಲಿ ನಾನು ಬದುಕುತ್ತಿದ್ದೇನೆ. ಅದಕ್ಕಿಂತ ಹೆಚ್ಚಾಗಿ, ನಾನು ಎಲ್ಲವನ್ನು ಸಹಿಸಿಕೊಂಡು ಸಾಕಾಗಿದೆ. ನನಗೆ ಒಳ್ಳೆಯ ವಿರಾಮ ಬೇಕು, ಆದರೆ ಖರ್ಚುಗಳ ರಾಶಿಯಿಂದಾಗಿ ನಾನು ವಿರಾಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಬಂದ ಇಂಜಿನಿಯರ್, ಕಾರಣ ಇದೇ ನೋಡಿ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರಿಸ್ಕೂಲ್ ಮತ್ತು ಡೇ ಕೇರ್ನ ವೆಚ್ಚವು ನಿಮ್ಮ ಉಳಿತಾಯಕ್ಕೆ ಅಡ್ಡಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಹೆಂಡತಿಯೂ ಉದ್ಯೋಗದಲ್ಲಿದ್ದಾರಾ. ಇಲ್ಲದಿದ್ದರೆ, ಮಕ್ಕಳಿಗೆ ಡೇ ಕೇರ್ನ ಅವಶ್ಯಕತೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಖರ್ಚು ಇತಿ ಮಿತಿಯಲ್ಲಿದ್ದರೆ ಉಳಿತಾಯ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ