Viral: ಮನೆಯನ್ನೇ ಕಾಶ್ಮೀರವನ್ನಾಗಿ ಪರಿವರ್ತಿಸಿದ ದಂಪತಿ; ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದನೆ

ಜಗತ್ತಿನಲ್ಲಿ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿರುವ ಕೇಸರಿಯನ್ನು ಸಾಮಾನ್ಯವಾಗಿ ತಂಪು ವಾತಾವರಣವಿರುವ ಕಾಶ್ಮೀರದಲ್ಲಿ ಬೆಳೆಯಲಾಗುತ್ತದೆ. ಆದರೆ ಇಲ್ಲೊಂದು ದಂಪತಿ ತೀವ್ರ ಶಾಖಕ್ಕೆ ಹೆಸರುವಾಸಿಯಾಗಿರುವ ನಾಗ್ಪುರದ ತಮ್ಮ ಮನೆಯಲ್ಲಿ ಕಾಶ್ಮೀರದಲ್ಲಿನ ಅದೇ ವಾತಾವರಣವನ್ನು ಸೃಷ್ಟಿಸಿ ಕೇಸರಿ ಬೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಏರೋಪೋನಿಕ್‌ ತಂತ್ರವನ್ನು ಬಳಸಿಕೊಂಡು ಕೇಸರಿಯನ್ನು ಬೆಳೆದು ವರ್ಷಕ್ಕೆ 50 ಲಕ್ಷ ಸಂಪಾದನೆ ಮಾಡುತ್ತಿದ್ದು, ದಂಪತಿಯ ಈ ಯಶಸ್ಸಿನ ಕಥೆ ಇದೀಗ ಫುಲ್‌ ವೈರಲ್‌ ಆಗ್ತಿದೆ.

Viral: ಮನೆಯನ್ನೇ ಕಾಶ್ಮೀರವನ್ನಾಗಿ ಪರಿವರ್ತಿಸಿದ ದಂಪತಿ; ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದನೆ
ವೈರಲ್​ ಫೋಟೋ
Edited By:

Updated on: Feb 20, 2025 | 11:58 AM

ಉತ್ಸಾಹ ಮತ್ತು ಸಾಧಿಸುವ ಛಲವೊಂದಿದ್ದರೆ ಮಾಡಲು ಸಾಧ್ಯವಾಗದ ಕೆಲಸ ಯಾವುದೂ ಇಲ್ಲ ಎಂದು ಹೇಳ್ತಾರೆ. ಈ ಮಾತು ಅಕ್ಷರಶಃ ನಿಜವೆಂದು ಇಲ್ಲೊಂದು ದಂಪತಿ ಸಾಬೀತುಪಡಿಸಿದ್ದಾರೆ. ಹೌದು ತೀವ್ರ ಶಾಖಕ್ಕೆ ಹೆಸರುವಾಸಿಯಾದ ನಾಗ್ಪುರದಲ್ಲಿ ಕಾಶ್ಮೀರದ ಕೇಸರಿಯನ್ನು ಬೆಳೆಯುವ ಮೂಲಕ ಇವರು ಲಕ್ಷಗಟ್ಟಲೆ ಆದಾಯವನ್ನು ಗಳಿಸುತ್ತಿದ್ದಾರೆ. ನಾಗ್ಪುರದ ತಮ್ಮ ಫ್ಲ್ಯಾಟ್‌ನ 400 ಚದರ ಅಡಿ ವಿಸ್ತೀರ್ಣದ ಸಾಧಾರಣ ಕೋಣೆಯಲ್ಲಿ ಮಣ್ಣು ಮತ್ತು ನೀರು ಬಳಸದೆ ಅತ್ಯಾಧುನಿಕ ಏರೋಪೋನಿಕ್‌ ತಂತ್ರವನ್ನು ಬಳಸಿಕೊಂಡು ಕೇಸರಿಯನ್ನು ಬೆಳೆದು ವರ್ಷಕ್ಕೆ 50 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ದಂಪತಿಯ ಈ ಯಶಸ್ಸಿನ ಕಥೆ ಇದೀಗ ಫುಲ್‌ ವೈರಲ್‌ ಆಗ್ತಿದೆ.

ನಾಗ್ಪುರ ತೀವ್ರ ಶಾಖಕ್ಕೆ ಹೆಸರುವಾಸಿಯಾಗಿದೆ. ಅಂತಹ ಸ್ಥಳದಲ್ಲಿ ಕೇಸರಿ ಬೆಳೆಯುವುದು ಅಸಾಧ್ಯವೆಂದು ತೋರುತ್ತದೆ. ಆದರೆ ನಾಗ್ಪುರದ ದಂಪತಿಗಳಿಬ್ಬರು ಇದನ್ನು ಸಾಧ್ಯವಾಗಿಸಿದ್ದು ಮಾತ್ರವಲ್ಲದೆ, ಈ ಕೃಷಿಯಿಂದ ಸಾಕಷ್ಟು ಲಾಭವನ್ನು ಕೂಡಾ ಗಳಿಸುತ್ತಿದ್ದಾರೆ. ಅಕ್ಷಯ್ ಹೋಲ್ ಮತ್ತು ದಿವ್ಯಾ ಲೋಹ್ಕರೆ ಹೋಲ್ ದಂಪತಿ ತಮ್ಮ ಫ್ಲ್ಯಾಟ್‌ನ 400 ಚದರ ಅಡಿ ವಿಸ್ತೀರ್ಣದ ಒಂದು ಸಣ್ಣ ಕೋಣೆಯಲ್ಲಿ ಮಣ್ಣು ಮತ್ತು ನೀರಿಲ್ಲದೆ ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿಯನ್ನು ಬೆಳೆಯುತ್ತಿದ್ದಾರೆ. ವಿಶಿಷ್ಟವಾದ ಏರೋಪೋನಿಕ್ ತಂತ್ರವನ್ನು ಬಳಸಿಕೊಂಡು, ಅವರು ಕಾಶ್ಮೀರದ ತಂಪಾದ ವಾತಾವರಣವನ್ನು ಮನೆಯಲ್ಲಿಯೇ ಮರುಸೃಷ್ಟಿಸಿ ಕೇಸರಿಯನ್ನು ಬೆಳೆಯುವ ಮೂಲಕ ವಾರ್ಷಿಕವಾಗಿ 50 ಲಕ್ಷ ರೂ. ಗಳಿಸುತ್ತಾರೆ.

Kashmir Saffron

ಕೇಸರಿ ಬೆಳೆಯುವ ವಿಧಾನವನ್ನು ಕಾಶ್ಮೀರದಿಂದ ಕಲಿತರು:

ಬಿಬಿಎ ಪದವೀಧರರಾದ ಅಕ್ಷಯ್ ಮತ್ತು ಬ್ಯಾಂಕರ್ ದಿವ್ಯಾ 2020 ರಲ್ಲಿ ಕೇಸರಿ ಬೆಳೆಯುವ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. “ಕೇಸರಿ ದುಬಾರಿಯಾಗಿರುವುದರಿಂದ, ಬೇಡಿಕೆ ಹೆಚ್ಚಿರುವುದರಿಂದ ಮತ್ತು ದೇಶದಲ್ಲಿ ಇದರ ಉತ್ಪಾದನೆ ಕಡಿಮೆ ಇರುವುದರಿಂದ ನಾವು ಕೇಸರಿ ಬೆಳೆ ಬೆಳೆಯಲು ನಿರ್ಧರಿಸಿದ್ದೇವೆ” ಎಂದು ಅಕ್ಷಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರು ಕಾಶ್ಮೀರದಲ್ಲಿ ಎರಡು ವರ್ಷಗಳ ಕಾಲ ಇದ್ದು, ಅಲ್ಲಿನ ಅನುಭವಿ ಬೆಳೆಗಾರರಿಂದ ಕೇಸರಿ ಕೃಷಿಯ ಬಗ್ಗೆ ಕಲಿತು ನಂತರ ತಮ್ಮ ಮನೆಯಲ್ಲಿಯೇ ಈ ಬೆಳೆ ಬೆಳೆದರು.

ಇದನ್ನೂ ಓದಿ: ಜನ ಹೀಗೂ ಇರ್ತಾರಾ; ಟ್ರೈನ್‌ನಲ್ಲಿ ಬಡ ವ್ಯಾಪಾರಿಯ ಬುಟ್ಟಿಯಲ್ಲಿದ್ದ ಕಾಳುಗಳನ್ನೇ ಕದ್ದು ತಿಂದ ಪ್ರಯಾಣಿಕರು

ಅವರು ತಮ್ಮ ಬೆಳೆಯನ್ನು ಸುಮಾರು 1 ಕೆಜಿ ತೂಕದ ಕೇವಲ 100 ಕೇಸರಿ ಕಾಂಡಗಳೊಂದಿಗೆ ಪ್ರಾರಂಭಿಸಿದರು ಮತ್ತು ಮೊದಲ ಬಾರಿಗೆ ಅವರಿಗೆ ಕೆಲವೇ ಗ್ರಾಂಗಳಷ್ಟು ಕೇಸರಿ ಉತ್ಪಾದಿಸಲು ಸಾಧ್ಯವಾಯಿತು. ಆದರೆ ನಿರುತ್ಸಾಹಗೊಳ್ಳದ ಈ ದಂಪತಿ 350 ಕೆಜಿ ಬೀಜಗಳಿಂದ ಸುಮಾರು 1,600 ಗ್ರಾಂ ಇಳುವರಿಯನ್ನು ಪಡೆದರು. ಅವನ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿ ಕಳೆದ ಎರಡು ವರ್ಷಗಳಲ್ಲಿ, ಅವರು ಸ್ಥಿರವಾಗಿ 40 ರಿಂದ 50 ಲಕ್ಷ ರೂ.ಗಳಷ್ಟು ವಾರ್ಷಿಕ ಆದಾಯವನ್ನು ಗಳಿಸಿದ್ದಾರೆ. “ಇಲ್ಲಿಯವರೆಗೆ ನಾವು 150 ಜನರಿಗೆ ಕೇಸರಿ ಬೆಳೆಯ ಬಗ್ಗೆ ತರಬೇತಿ ನೀಡಿದ್ದೇವೆ, ಅವರಲ್ಲಿ 29 ಜನರು ರಾಜ್ಯಾದ್ಯಂತ ತಮ್ಮ ಘಟಕಗಳನ್ನು ಯಶಸ್ವಿಯಾಗಿ ಸ್ಥಾಪಿಸಿದ್ದಾರೆ” ಎಂದು ಅಕ್ಷಯ್ ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us