Viral: ತನ್ನ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳಿಲ್ಲ; ಉದ್ಯೋಗ ತೊರೆಯುವ ಹಿಂದಿನ ಕಾರಣ ತಿಳಿಸಿದ ಮಹಿಳೆ
ಉದ್ಯೋಗ ಕ್ಷೇತ್ರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವವಾಗುತ್ತದೆ. ಆದರೆ ಕೆಲವರು ಎಷ್ಟೇ ಕಹಿ ಅನುಭವವಾದ್ರೂ ಕೆಲಸ ಮಾಡುವುದು ಅನಿವಾರ್ಯ ಎನ್ನುವ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡು ಹೋಗ್ತಾರೆ. ಆದರೆ ದೆಹಲಿ ಮಹಿಳೆಯೊಬ್ಬರಿಗೂ ಕೆಲಸದ ಸ್ಥಳಗಳಲ್ಲಿ ಕಹಿ ಅನುಭವವಾಗಿದೆ. ಇದೇ ಕಾರಣಕ್ಕೆ ಕೆಲಸ ಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿ ತನ್ನ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ್ದು, ಈ ಕುರಿತಾದ ಪೋಸ್ಟ್ ವೈರಲ್ ಆಗಿದೆ.

ಹೆಚ್ಚಿನವರು ನಮಗೆ ಕೈತುಂಬಾ ಸಂಬಳ ಸಿಗುವ ಉತ್ತಮ ಕೆಲಸ (Job) ಸಿಕ್ಕಿದ್ರೆ ಸಾಕಪ್ಪಾ ಎಂದು ಬಯಸುತ್ತಾರೆ. ಎಷ್ಟೇ ಒತ್ತಡವಿರಲಿ, ಕೆಲಸ ಬಿಡುವ ನಿರ್ಧಾರ ಮಾಡುವುದು ತುಂಬಾ ಕಡಿಮೆಯೇ. ಆದರೆ ಇಲ್ಲೊಬ್ಬ ಮಹಿಳೆಗೆ ಕೆಲಸದ ಸ್ಥಳದಲ್ಲಿ ತನ್ನನ್ನು ಕಡೆಗಣಿಸಲಾಗಿದೆ, ಪ್ರಶಂಸಿಸಲಾಗಿಲ್ಲ ಎನ್ನುವ ಭಾವನೆ ಮೂಡಿದೆ. ಕೆಲಸ ಬಿಡುವ ನಿರ್ಧಾರದ ಬಗ್ಗೆ ದೆಹಲಿ (Delhi) ಮೂಲದ ಮಹಿಳೆಯೊಬ್ಬರು ಮಾಡಿದ ಪೋಸ್ಟ್ ಸಖತ್ ವೈರಲ್ ಆಗಿದೆ. ಈ ಪೋಸ್ಟ್ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಎಷ್ಟು ಮಾನ್ಯತೆ ನೀಡಲಾಗುತ್ತದೆ ಎನ್ನುವ ಕುರಿತು ಚರ್ಚೆ ಹುಟ್ಟು ಹಾಕಿದೆ.
ಕೆಲಸ ಬಿಡುವ ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಮಹಿಳೆ
ಸಂಸ್ಥೆಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅಡ್ವಾನ್ಸ್ಡ್ ಅಶ್ಯೂರೆನ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ ದೆಹಲಿಯ ಮಹಿಳೆ, ಕಂಪನಿಯಲ್ಲಿನ ತಮ್ಮ ಕೊನೆಯ ದಿನಗಳು ಹೇಗಿದ್ದವು ಹಾಗೂ ತಮ್ಮ ನಿರ್ಧಾರದ ಬಗ್ಗೆ ಲಿಂಕ್ಡ್ಇನ್ ನಲ್ಲಿ ಬರೆದುಕೊಂಡಿದ್ದಾರೆ. ಅತ್ಯಂತ ದುಃಖದ ದಿನಗಳಲ್ಲಿ ಒಂದು. ನಾನು ಸಂಸ್ಥೆಯನ್ನು ತೊರೆಯುತ್ತಿರುವುದರಿಂದ ಅಲ್ಲ. ಆದರೆ ನನ್ನ ಪ್ರಯತ್ನಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಲಿಲ್ಲ. ಟಾರ್ಗೆಟ್ ರೀಚ್ ಆಗಲು ಹಗಲು ರಾತ್ರಿ ಕೆಲಸ ಮಾಡುವುದು, ಅನಾರೋಗ್ಯವಿದ್ರೂ ಕೆಲಸ ಮಾಡುವುದು. ಅದು, ಒಂದೂವರೆ ವರ್ಷಗಳ ಸಮರ್ಪಣೆಯ ದಿನಗಳಾಗಿದ್ದವು. ಯಾವುದೇ ಔಪಚಾರಿಕ ಬೀಳ್ಕೊಡುಗೆ ಇರಲಿಲ್ಲ. ದೊಡ್ಡ ಕಾರ್ಪೊರೇಟ್ ರಚನೆಗಳಲ್ಲಿ ನೀವು ಎಷ್ಟು ಬದಲಾಯಿಸಬಹುದು ಎಂದು ನನಗೆ ಅರಿವಾಯಿತು. ಆದರೆ ಎಲ್ಲಾ ತಂಡಗಳು ಅಥವಾ ಕಂಪನಿಗಳಿಗೆ ಇದು ನಿಜವಲ್ಲದಿರಬಹುದು ಎಂದಿದ್ದಾರೆ.
ಸ್ವಲ್ಪ ಮೆಚ್ಚುಗೆ ನಿಜವಾಗಿಯೂ ಬಹಳ ದೂರ ಕೊಂಡ್ಯೊಯುತ್ತದೆ ಎಂದು ನಾನು ನಂಬುತ್ತೇನೆ. ನಿಮ್ಮ ಅನುಭವವನ್ನು ಸ್ಮರಣೀಯವಾಗಿಸುತ್ತದೆ. ಆ ದಿನ, ನಾನು ಸರಿಯಾದ ನಿರ್ಧಾರ ತೆಗೆದುಕೊಂಡೆ ಎಂದು ನನಗೆ ಅನಿಸಿತು. ನಾನು ಕಲಿತದ್ದೇನೆಂದರೆ – ಕೆಲಸದ ಸ್ಥಳಗಳಲ್ಲಿ ಜನರಿಗೆ ನೀವು ಎಷ್ಟು ಮುಖ್ಯವೆಂದು ಭಾವಿಸುತ್ತೀರಿ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ತಮ್ಮ ಪ್ರಯತ್ನಗಳನ್ನು ಕಡೆಗಣಿಸಲಾಗಿದೆ ಎಂದು ತಿಳಿಯುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಅವು ಗಮನಕ್ಕೆ ಬಾರದಿದ್ದರೂ ಸಹ ನಾವು ಮುಖ್ಯವೆಂದು ತಿಳಿಯಿರಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Viral: ಸರ್ ನನಗೆ ಪೈಲ್ಸ್ ಆಗಿದೆ, ರಜೆ ಬೇಕು ಅಂದ್ರೆ ಬ್ಯಾಂಕ್ ಮ್ಯಾನೇಜರ್ ಹೇಳಿದ್ದೇನು ಗೊತ್ತಾ?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ನಮ್ಮ ಗೌರವಕ್ಕೆ ಧಕ್ಕೆ ಬರುತ್ತಿದ್ದರೆ ಆ ಕೆಲಸವನ್ನು ತೊರೆಯುವುದು ಒಳ್ಳೆಯದು ಎಂದಿದ್ದಾರೆ. ಇನ್ನೊಬ್ಬರು, ಕೆಲಸದಲ್ಲಿ ಮೆಚ್ಚುಗೆಯ ಭಾವನೆ ಬಹಳ ಮುಖ್ಯ, ಕೆಲವೊಮ್ಮೆ ಸಣ್ಣ ಸನ್ನೆಗಳು ಸಹ ಎಲ್ಲಾ ವ್ಯತ್ಯಾಸವನ್ನುಂಟು ಮಾಡುತ್ತವೆ. ನಿಮಗೆ ಸರಿ ಎನಿಸುವ ಹೆಜ್ಜೆಯನ್ನು ನೀವು ತೆಗೆದುಕೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ನಿಜಕ್ಕೂ ಬೇಸರದ ವಿಷಯ. ಖುಷಿಯಿಂದ ಸಹೋದ್ಯೋಗಿಗಳು ಬೀಳ್ಕೊಟ್ಟಾಗ ಆಗುವ ಖುಷಿಯೇ ಬೇರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 17 October 25








