ಹಬ್ಬದಂದು ಮಾಂಸಕ್ಕಾಗಿ 19 ಕಾಗೆಗಳನ್ನು ಕೊಂದ ದಂಪತಿ
ತಮಿಳುನಾಡಿನ ತಿರುವಳ್ಳೂರಿನಲ್ಲಿ ಹಬ್ಬದಂದು ಮಾಂಸಕ್ಕಾಗಿ 19 ಕಾಗೆಗಳನ್ನು ಕೊಂದ ದಂಪತಿಯನ್ನು ಬಂಧಿಸಲಾಗಿದೆ. ಅರಣ್ಯ ಇಲಾಖೆಗೆ ಸುಳಿವು ಸಿಕ್ಕಿದ ನಂತರ ದಂಪತಿಯ ಮನೆಯಲ್ಲಿ ಶೋಧ ನಡೆಸಿದಾಗ 19 ಸತ್ತ ಕಾಗೆಗಳು ಪತ್ತೆಯಾಗಿವೆ. ದಂಪತಿ ಬಡತನದಿಂದಾಗಿ ಈ ಕೃತ್ಯ ಎಸಗಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![ಹಬ್ಬದಂದು ಮಾಂಸಕ್ಕಾಗಿ 19 ಕಾಗೆಗಳನ್ನು ಕೊಂದ ದಂಪತಿ](https://images.tv9kannada.com/wp-content/uploads/2024/12/tamil-nadu-couple-kills-19-crows-for-festival-meat_-shocking-details.jpg?w=1280)
ತಮಿಳುನಾಡು: ಹಬ್ಬದಂದು ಮಾಂಸಕ್ಕಾಗಿ ದಂಪತಿಯೊಂದು ಸುಮಾರು 19 ಕಾಗೆಗಳನ್ನು ಕೊಂದಿರುವ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ. ತಿರುವಳ್ಳೂರು ಜಿಲ್ಲೆಯ ನಾಯಪ್ಪಕ್ಕಂ ಮೀಸಲು ಪ್ರದೇಶದ ಬಳಿಯ ತಿರುಪಕ್ಕಂ ಎಂಬ ಗ್ರಾಮದಲ್ಲಿ ವಾಸವಿದ್ದ ರಮೇಶ್ ಮತ್ತು ಭೂಚಮ್ಮ ದಂಪತಿ ಕಾಗೆಗಳನ್ನು ಸಾಯಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ಅವರ ಮನೆಯಲ್ಲಿ ಶೋಧ ನಡೆಸಿದಾಗ 19 ಸತ್ತ ಕಾಗೆಗಳು ಪತ್ತೆಯಾಗಿವೆ. ಇದನ್ನು ನೋಡಿದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಈ ನಡುವೆ ರಮೇಶ್ ಮತ್ತು ಭೂಚಮ್ಮನನ್ನು ವಿಚಾರಣೆಗೊಳಪಡಿಸಿದಾಗ ಹಬ್ಬದಂದು ಮಾಂಸಕ್ಕಾಗಿ ಕಾಗೆಗಳನ್ನು ಕೊಂದಿರುವುದು ಬೆಳಕಿಗೆ ಬಂದಿದೆ.
ಈ ಜೋಡಿ ಈಗಾಗಲೇ ಬೆಕ್ಕು, ಕಾಗೆ, ನಾಯಿ ಮುಂತಾದ ಪ್ರಾಣಿಗಳನ್ನು ಕೊಂದು ಮಾಂಸಕ್ಕಾಗಿ ಮಾರಾಟ ಮಾಡುತ್ತಿರುವ ದಂಧೆಯಲ್ಲಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸ್ಥಳೀಯ ಅಂಗಡಿಗಳಲ್ಲಿ ಕೀಟನಾಶಕಗಳನ್ನು ಖರೀದಿಸಿ ಆಹಾರಕ್ಕೆ ಸೇರಿಸಿ ಈ ಕಾಗೆಗಳನ್ನು ಕೊಂದು ಹಾಕಿರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ಆ ಭಾಗದ ಎಲ್ಲ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಸೆಲ್ಫಿ ಕ್ರೇಜ್: ಕೂದಲೆಳೆ ಅಂತರದಲ್ಲಿ ಭಾರೀ ಅಪಘಾತದಿಂದ ಪಾರಾದ ಮಹಿಳೆ
ಈ ದಂಪತಿಗೆ 4 ಹೆಣ್ಣು ಮಕ್ಕಳು ಮತ್ತು 1 ಮಗ ಇದ್ದು, ಒಂದು ಮನೆಯಲ್ಲಿ 7 ಜನರು ವಾಸಿಸುತ್ತಿದ್ದು, ಕುಟುಂಬವು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಬಡತನದಿಂದ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ವೇಳೆ ಕಾಗೆಗಳನ್ನು ಕೊಂದಿರುವ ಘಟನೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ