Viral Video: ‘ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ’ 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ

|

Updated on: Jul 31, 2023 | 3:53 PM

M Venkateshkumar : ಶ್ರಾವಣದ ತುಂತುರು ಮುಂಜಾವುಗಳಲ್ಲೀಗ ನಿಮ್ಮೂರಿನ ಗುಡಿಗಳ ಸ್ಪೀಕರುಗಳನ್ನು ಆವಾಹಿಸುವ ನಿಮ್ಮವರೇ ಆದ ಪಂ. ವೆಂಕಟೇಶಕುಮಾರರು ಹಾಡಿದ ಈ ಹಾಡು ನಿಮ್ಮ ಎದೆಯೊಳಗೆ ಇರುವಂಥದ್ದೆ.

Viral Video: ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಪಂ. ಎಂ. ವೆಂಕಟೇಶಕುಮಾರ
Follow us on

Classical Vocalist : ಶಾಸ್ತ್ರೀಯ ಸಂಗೀತವು ಅರಮನೆಯಿಂದ ಗುರುಮನೆಗೆ, ಗುರುಮನೆಯಿಂದ ಮನೆಮನೆಗೆ, ಮನೆಮನೆಯಿಂದ ಮನುಷ್ಯನ ಅಂತರಂಗವನ್ನು ಸ್ಪರ್ಶಿಸುವಲ್ಲಿ ಸಾಕಷ್ಟು ಕಲಾವಿದರ ಕೊಡುಗೆ ಇದೆ. ಕೋಟ್ಯಂತರ ಕಲಾವಿದರು ನಮ್ಮ ನಡುವೆಯೇನೋ ಇದ್ದಾರೆ. ಆದರೆ ಹೃದಯ ತಲುಪಿದವರು ತಲುಪುತ್ತಿರುವವರು ಕೆಲವೇ ಕೆಲವರು. ಕಲ್ಲನ್ನೂ ಕರಗಿಸುವ ಶಕ್ತಿ ಕಲೆಗೆ ಮಾತ್ರ ಎನ್ನುವಂತೆ ಅವರ ಗಾಯನ. ಧಾರವಾಡದಲ್ಲಿ ವಾಸಿಸುತ್ತಿರುವ ಬಳ್ಳಾರಿ ಮೂಲದ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಎಂ. ವೆಂಕಟೇಶಕುಮಾರ (M. Venkateshkumar) ಪದ್ಮಶ್ರೀ ಪುರಸ್ಕೃತರು. ಇವರ ದೇಹಕ್ಕೆ 70 ಆಗಿರಬಹುದು. ಆದರೆ ಅವರ ಕಂಠಕ್ಕೆ ಅಂದಿನಿಂದ ಇಂದಿನವರೆಗೂ ಅದೇ ತ್ರಾಣ, ಅದೇ ಆರ್ದ್ರತೆ, ಅದೇ ಮಾಂತ್ರಿಕತೆ. ಅವರ ರಾಗಧಾರಿಯೋ, ವಚನ, ದಾಸರಪದದ ಒಂದೆರಡು ಶಬ್ದಗಳೋ ಹಾದು ಹೋಗಲಿ, ಮನಸ್ಸು ಅರಿವಿಲ್ಲದೆಯೇ ಇವರು ಅವರೇ ಎಂದು ಗುರುತಿಸಿ, ಶರಣಾಗಿಬಿಡುತ್ತದೆ.

ಕನಕದಾಸರ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ಈ ಗೀತೆಯನ್ನು ವೆಂಕಟೇಶಕುಮಾರರ ‘ಸ್ಮರಣೆ ಸಾಲದೆ’ ಕ್ಯಾಸೆಟ್​ನಿಂದ ಆಯ್ದುಕೊಳ್ಳಲಾಗಿದೆ. ಮೂರು ವರ್ಷಗಳ ಹಿಂದೆ ಈ ದಾಸರಪದವನ್ನು ಮೇಲಿನ ಯೂಟ್ಯೂಬ್ ಚಾನೆಲ್​ ಅಪ್​ಲೋಡ್ ಮಾಡಿದ್ದು, ಇದೀಗ ಈ ಹಾಡು 5.1 ಮಿಲಿಯನ್ ಕೇಳುಗರನ್ನು ತಲುಪಿದೆ. ಸಂಗೀತಪ್ರಿಯರಿಗೆ ಮತ್ತು ಕಲಾವಿದರಿಗೆ ಇದಕ್ಕಿಂತ ದೊಡ್ಡ ಖುಷಿ ಏನಿದೆ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಥ್ರಿಲ್ಲಿಂಗ್​ ವೆಡ್ಡಿಂಗ್​; ಗುಂಡಿಗೆ ಗಟ್ಟಿ ಇದ್ದವರಷ್ಟೇ ಈ ಮದುವೆಗೆ ಬಂದಿದ್ದರು

ಎಲ್ಲರನ್ನೂ ಎಲ್ಲವನ್ನೂ ನಿರಾಯಾಸವಾಗಿ ಒಳಗೊಳ್ಳುವಂಥ ಶಕ್ತಿ ಇರುವುದು ಕಲೆಗೆ ಮಾತ್ರ. ಎಂಥ ದುಗುಡವನ್ನೂ ಕ್ಷಣಾರ್ಧದಲ್ಲಿ ಕರಗಿಸುವಂಥ ಮಾಂತ್ರಿಕತೆ ಇರುವುದು ಸಂಗೀತಕ್ಕಷ್ಟೇ. ಕಿರಾಣಾ ಮತ್ತು ಅತ್ರೌಲಿ ಘರಾಣಾದಲ್ಲಿ ಅಪಾರ ಸಾಧನೆಯನ್ನು ಮಾಡಿರುವ ವೆಂಕಟೇಶಕುಮಾರರ ಶಾಸ್ತ್ರೀಯ ಸಂಗೀತ ಸಭೆಗಳು ಇಂದಿಗೂ ‘ಒಂದು ಬಾರಿ ಸ್ಮರಣೆ ಸಾಲದೆ’, ‘ತೊರೆದು ಜೀವಿಸಬಹುದೇ’, ‘ಪ್ರಣತೆ ಇದೆ ಭಕ್ತಿ ಇದೆ’, ‘ಅಕ್ಕ ಕೇಳವ್ವ’ ದಾಸರಪದ , ವಚನಗಳ ಗುಂಜಾರವವಿಲ್ಲದೆ ಸಂಪನ್ನವಾಗಲಾರವು. ‘ನನ್ನ ಗುರು ಪಂ. ಬಸವರಾಜ ರಾಜಗುರುಗಳನ್ನು ಕಳೆದುಕೊಂಡ ಮೇಲೆ ವೆಂಕಟೇಶಕುಮಾರ ಅವರೇ ನನಗೆ ಗುರುಗಳು’ ಎಂದಿರುವ ಗಾಯಕಿ ಸಂಗೀತಾ ಕಟ್ಟಿ ಅವರ ಮಾತುಗಳನ್ನೊಮ್ಮೆ ಕೇಳಿ. (ಜು.1ರಂದು ವೆಂಕಟೇಶಕುಮಾರರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಪೋಸ್ಟ್ ಮಾಡಲಾಗಿದೆ)

ಇದು ಇಂಥ ಘರಾಣೆ ಎಂದಾಗ ಆಯಾ ಘರಾಣಾದ ಕುಟುಂಬ, ತಲೆಮಾರು, ಶಿಷ್ಯರುಗಳು ಮತ್ತವರ ಶೈಲಿ ಥಟ್ಟನೆ ನೆನಪಿಗೆ ಬರುತ್ತದೆ. ಆದರೆ ವೆಂಕಟೇಶಕುಮಾರ ಎಂಬ ಘರಾಣೆಯೊಂದಿದ್ದು ಅದರ ಶೈಲಿ ಮತ್ತು ವೈಶಿಷ್ಟ್ಯದ ಬಗ್ಗೆ ನಿಮಗೆ ಗೊತ್ತಿದೆಯೆ? ಯಾವ ಇತಿಹಾಸದ ಪಠ್ಯವನ್ನು ಹುಡುಕಾಡಿದರೂ ಅದು ಸಿಗುವುದಿಲ್ಲ. ಏಕೆಂದರೆ ಅದೊಂದು ಅನುಭಾವ. ಈ ಅನುಭಾವದ ತೊರೆಯಲ್ಲಿ ಮೀಯುತ್ತ ಅಷ್ಟಷ್ಟೇ ತ್ರಾಣ ಪಡೆದುಕೊಳ್ಳುತ್ತಿರುವ  ನಾವುನೀವುಗಳೆಲ್ಲ ಈ ಘರಾಣಾದ ಆತ್ಮದೊಂದಿಗೆ ಬೆಸೆದುಕೊಂಡ ಜೀವಗಳು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:16 pm, Mon, 31 July 23