Viral News: ಮದುವೆಯಾದ ಕೂಡಲೆ ಗಂಡನ ಬಿಟ್ಟು ಪ್ರಿಯಕರನ ಜೊತೆ ವಧು ಪರಾರಿ; ಲವ್ ಸ್ಟೋರಿಗೆ ಹೊಸ ಟ್ವಿಸ್ಟ್​!

| Updated By: ಸುಷ್ಮಾ ಚಕ್ರೆ

Updated on: Feb 12, 2022 | 5:20 PM

ನಡೆದಿದ್ದನ್ನೆಲ್ಲ ಮರೆತು ಗಂಡನ ಮನೆಗೆ ಹೋಗು ಎಂದು ಪೊಲೀಸರು ಯುವತಿಗೆ ಹೇಳಿದಾಗ, ಅವಳು ತನ್ನ ಪ್ರಿಯಕರನೊಂದಿಗೆ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಅಲ್ಲದೆ, ತನ್ನ ಮಾಂಗಲ್ಯವನ್ನು ಪೊಲೀಸರೆದುರೇ ಬಿಚ್ಚಿ ಗಂಡನಿಗೆ ವಾಪಾಸ್ ಕೊಟ್ಟಿದ್ದಾಳೆ.

Viral News: ಮದುವೆಯಾದ ಕೂಡಲೆ ಗಂಡನ ಬಿಟ್ಟು ಪ್ರಿಯಕರನ ಜೊತೆ ವಧು ಪರಾರಿ; ಲವ್ ಸ್ಟೋರಿಗೆ ಹೊಸ ಟ್ವಿಸ್ಟ್​!
ಸಾಂದರ್ಭಿಕ ಚಿತ್ರ
Follow us on

ಮದುವೆಯೆಂದ ಮೇಲೆ ಸಂಭ್ರಮ, ಸಡಗರಗಳು ಸಾಮಾನ್ಯ. ಆದರೆ, ಕೆಲವೊಮ್ಮೆ ಸಂಭ್ರಮದ ಜೊತೆಗೆ ಫಜೀತಿ, ಅವಾಂತರಗಳು ಕೂಡ ನಡೆಯುತ್ತವೆ. ಛತ್ತೀಸ್​​ಗಢದ ಯುವತಿಯೊಬ್ಬಳು ಮದುವೆಯಾಗಿ ಗಂಡನ ಮನೆಗೆ ತೆರಳುವಾಗ ದಾರಿಯ ಮಧ್ಯೆ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿದ್ದಾಳೆ. ಅವಳಿಗಾಗಿ ಮಾರ್ಗಮಧ್ಯೆ ದಿಬ್ಬಣವನ್ನು ನಿಲ್ಲಿಸಲಾಯಿತು. ಆದರೆ, ಶೌಚಾಲಯಕ್ಕೆ ಹೋದವಳು ಎಷ್ಟು ಹೊತ್ತಾದರೂ ವಾಪಾಸ್ ಬರಲೇ ಇಲ್ಲ. ಇದರಿಂದ ವರನ ಮನೆಯವರಿಗೆ ಆತಂಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿದಾಗ ಆ ಯುವತಿ ತನ್ನ ಮದುವೆಯಾದ ನಂತರ ಗಂಡನ ಮನೆಗೆ ಹೋಗುವ ಬದಲು ತನ್ನ ಪ್ರಿಯಕರ ಜೊತೆ ಓಡಿ ಹೋಗಿದ್ದಾಳೆ ಎಂಬ ವಿಷಯ ಬಯಲಾಯಿತು!

ಛತ್ತೀಸ್‌ಗಢದ ಕಂಕೇರ್‌ನಲ್ಲಿ ವಧುವಿನ ಕುಟುಂಬದವರು ಆಕೆಯ ಪ್ರೀತಿಗೆ ಒಪ್ಪಿರಲಿಲ್ಲ. ತಾವು ನೋಡಿದ ಹುಡುಗನ ಜೊತೆ ಆಕೆಯ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ, ಅನಿವಾರ್ಯವಾಗಿ ಮದುವೆಗೆ ಒಪ್ಪಿದ ಆಕೆ ತನ್ನ ಸಮಯಕ್ಕಾಗಿ ಕಾಯುತ್ತಿದ್ದಳು. ತವರು ಮನೆಯಿಂದ ಬೀಳ್ಕೊಟ್ಟು ಗಂಡನ ಮನೆಗೆ ಹೋಗುವಾಗ ಮೊದಲೇ ಪ್ಲಾನ್ ಮಾಡಿದಂತೆ ಆಕೆ ಶೌಚಾಲಯಕ್ಕೆ ಹೋಗಬೇಕೆಂದು ನಾಟಕವಾಡಿದ್ದಳು. ಅದರಂತೆ ವಾಹನವನ್ನು ನಿಲ್ಲಿಸಿದಾಗ ಅಲ್ಲಿಂದ ತನ್ನ ಬಾಯ್​ಫ್ರೆಂಡ್ ಜೊತೆ ಆಕೆ ಓಡಿಹೋಗಿದ್ದಾಳೆ.

ಹೀಗೆ ಯಾರನ್ನೋ ಮದುವೆಯಾಗಿ ಇನ್ಯಾರದೋ ಜೊತೆ ಪರಾರಿಯಾದ ಯುವತಿಯ ಹೆಸರು ಆರತಿ ಸಹಾರೆ. ಆರತಿ ದಾಂತೇವಾಡ ನಿವಾಸಿಯಾಗಿದ್ದು, ಬಸ್ತಾರ್‌ನ ಬಕ್ವಾಂಡ್ ನಿವಾಸಿ ವಿಕಾಸ್ ಗುಪ್ತಾ ಎಂಬಾತನ ಜೊತೆ ಬಹಳ ದಿನಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ, ಆಕೆಯ ಪ್ರೀತಿಗೆ ಮನೆಯವರು ಒಪ್ಪಿರಲಿಲ್ಲ. ಆಕೆಯ ಮೇಲೆ ಕುಟುಂಬಸ್ಥರು ಒತ್ತಡ ಹೇರಿ ಮಹಾರಾಷ್ಟ್ರದ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಫೆಬ್ರವರಿ 6ರಂದು ಮನೆಯವರು ನೋಡಿದ ಹುಡುಗನೊಂದಿಗೆ ಆಕೆ ಮದುವೆಯಾಗಿದ್ದಳು.

ಮದುವೆಯಾದ ನಂತರ ಮಗಳು ತನ್ನ ಪ್ರೇಮಿಯನ್ನು ಮರೆತು, ಚೆನ್ನಾಗಿ ಸಂಸಾರ ಮಅಡಿಕೊಂಡಿರುತ್ತಾಳೆ ಎಂದುಕೊಂಡಿದ್ದ ಪೋಷಕರಿಗೆ ಶಾಕ್ ನೀಡಿರುವ ವಧು ತನ್ನ ಲವರ್ ಜೊತೆ ಪರಾರಿಯಾಗಿದ್ದಾಳೆ. ಆರತಿ ತನ್ನ ಪತಿಯೊಂದಿಗೆ ತನ್ನ ಅತ್ತೆಯ ಮನೆಗೆ ಹೊರಟುಹೋದಾಗ ಮಾರ್ಗಮಧ್ಯೆ ರಾಜನಂದಗಾಂವ್‌ನ ಮನ್‌ಪುರದಿಂದ ತನ್ನ ಪ್ರೇಮಿ ವಿಕಾಸ್‌ನೊಂದಿಗೆ ಪರಾರಿಯಾಗಿದ್ದಾಳೆ. ಈ ಕುರಿತು ಆಕೆಯ ಕುಟುಂಬದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಫೆಬ್ರವರಿ 7ರಂದು ಕಂಕೇರ್ ಪೊಲೀಸರು ಅವರಿಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಫೆ.8ರಂದು ಪೊಲೀಸ್ ಸ್ಟೇಷನ್​ನಲ್ಲಿ ಕೂಡ ಫ್ಯಾಮಿಲಿ ಹೈಡ್ರಾಮಾ ಮುಂದುವರೆದಿದ್ದು, ಪೊಲೀಸರು ಆ ಯುವತಿಯನ್ನು ಆಕೆಯ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಆಗ ಆರತಿಯ ಗಂಡ, ತಮ್ಮ, ಅಪ್ಪ-ಅಮ್ಮ ಕೂಡ ಪೊಲೀಸ್ ಠಾಣೆಗೆ ಬಂದಿದ್ದಾರೆ. ಪೊಲೀಸರ ಎದುರೇ ಹೈಡ್ರಾಮಾ ಮುಂದುವರೆದಿದ್ದು, ಇದೇ ವೇಳೆ ಪೊಲೀಸರು ಆಕೆಯ ಪ್ರೇಮಿ ವಿಕಾಸ್ ಪ್ರಕರಣವನ್ನು ಇತ್ಯರ್ಥಪಡಿಸಿ ಠಾಣೆಯಿಂದ ಹೊರಗೆ ಕಳುಹಿಸಿದ್ದಾರೆ.

ನಡೆದಿದ್ದನ್ನೆಲ್ಲ ಮರೆತು ಗಂಡನ ಮನೆಗೆ ಹೋಗು ಎಂದು ಪೊಲೀಸರು ಯುವತಿಗೆ ಹೇಳಿದಾಗ, ಅವಳು ತನ್ನ ಪ್ರಿಯಕರನೊಂದಿಗೆ ಮಾತ್ರ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಅಲ್ಲದೆ, ತನ್ನ ಗಂಡ ಕಟ್ಟಿದ್ದ ಮಾಂಗಲ್ಯವನ್ನು ಪೊಲೀಸ್ ಠಾಣೆಯಲ್ಲೇ ಬಿಚ್ಚಿ ಆತನಿಗೆ ವಾಪಾಸ್ ಕೊಟ್ಟಿದ್ದಾಳೆ. ಇದರಿಂದ ಕೋಪಗೊಂಡ ವರನ ಸಂಬಂಧಿಕರು ಆ ಯುವತಿಯ ಪ್ರಿಯಕರ ವಿಕಾಸ್‌ನನ್ನು ಸುತ್ತುವರೆದಿದ್ದಾರೆ. ಆತನಿಗೆ ತನ್ನ ಗಂಡನ ಮನೆಯವರು ಏನಾದರೂ ಅಪಾಯ ಮಾಡಬಹುದು ಎಂದು ಹೆದರಿದ ಆಕೆ ಪ್ರಿಯಕರನ ಮುಂದೆ ನಿಂತು, ಆತನ ಹತ್ತಿರ ಯಾರೂ ಬರಬಾರದು, ಆತನಿಗೆ ಏನಾದರೂ ಆದರೆ ಒಬ್ಬರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಕಿರುಚಾಡಿ, ಗಲಾಟೆ ಮಾಡಿದ್ದಾಳೆ. ಆಕೆಯ ರೌದ್ರಾವತಾರವನ್ನು ನೋಡಿದ ವರನ ಕಡೆಯವರು ವಾಪಾಸ್ ಹೋಗಿದ್ದಾರೆ.

ಇದನ್ನೂ ಓದಿ: Viral News: 6 ವರ್ಷಗಳಿಂದ ಗಂಡನ ಊಟಕ್ಕೆ ಡ್ರಗ್ಸ್​ ಬೆರೆಸುತ್ತಿದ್ದ ಹೆಂಡತಿ; ಕಾರಣವೇನು ಗೊತ್ತಾ?

Shocking News: ಹೆಂಡತಿಯನ್ನು ಕೊಂದು, ಆಕೆಯ ರುಂಡ ಹಿಡಿದು ರಸ್ತೆ ತುಂಬ ಓಡಾಡಿದ ಗಂಡ!

Published On - 5:19 pm, Sat, 12 February 22