ಗುಟ್ಕಾ ನಿಷೇಧ ಮತ್ತು ಭದ್ರಾ ನೀರು ವಿವಾದ: ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನೆ
ದಾವಣಗೆರೆಯಲ್ಲಿ ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡುವ ಸರ್ಕಾರದ ಆದೇಶಗಳನ್ನು ವಿರೋಧಿಸಿ ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ಈ ನಿರ್ಧಾರಗಳು ಲಕ್ಷಾಂತರ ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಆರೋಪಿಸಿ, ಪ್ರತಿಭಟನಾಕಾರರು ಆದೇಶಗಳನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ. ಸೋಮವಾರ ದಾವಣಗೆರೆ ಬಂದ್ಗೆ ಕರೆ ನೀಡಲಾಗಿದೆ.
ದಾವಣಗೆರೆ, ಆಗಸ್ಟ್ 29: ಗುಟ್ಕಾ ನಿಷೇಧದ ಸರ್ಕಾರದ ಆದೇಶ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡುವ ನಿರ್ಧಾರವನ್ನು ವಿರೋಧಿಸಿ ದಾವಣಗೆರೆ ಜಿಲ್ಲೆಯ ಅಡಿಕೆ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು-ನಾಲ್ಕು ದಿನಗಳಿಂದ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಮತ್ತು ಹರಿಹರ ಸೇರಿದಂತೆ ವಿವಿಧ ಪ್ರದೇಶಗಳಿಂದ ಆರಂಭವಾದ ಪಾದಯಾತ್ರೆ ದಾವಣಗೆರೆಯನ್ನು ತಲುಪಿದೆ. ಬಿಜೆಪಿ ಮುಖಂಡರಾದ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯು 65-70 ಕಿಲೋಮೀಟರ್ ದೂರ ಕ್ರಮಿಸಿದೆ.
ಆರೋಗ್ಯ ಸಚಿವರು ಘೋಷಿಸಿರುವ ಗುಟ್ಕಾ ನಿಷೇಧವು ಅಡಿಕೆ ಬೆಳೆಗಾರರ ಜೀವನೋಪಾಯಕ್ಕೆ ಭಾರಿ ಪೆಟ್ಟು ನೀಡುತ್ತದೆ ಎಂದು ರೈತರು ಆರೋಪಿಸಿದ್ದಾರೆ. ಇದಲ್ಲದೆ, ಭದ್ರಾ ಅಣೆಕಟ್ಟಿನಿಂದ ಚಿತ್ರದುರ್ಗ ಮತ್ತು ಕಡೂರು ಕೆರೆಗಳಿಗೆ ನೀರು ಹರಿಸುವ ಸರ್ಕಾರದ ನಿರ್ಧಾರವನ್ನು ದಾವಣಗೆರೆ ಮತ್ತು ಶಿವಮೊಗ್ಗ ರೈತರು ವಿರೋಧಿಸಿದ್ದಾರೆ.
ಈ ಎರಡೂ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತರು ಮತ್ತು ಬಿಜೆಪಿ ನಾಯಕರು ಸೋಮವಾರ ದಾವಣಗೆರೆ ಬಂದ್ಗೆ ಕರೆ ನೀಡಿದ್ದಾರೆ. ಆದೇಶಗಳನ್ನು ಹಿಂಪಡೆಯದಿದ್ದರೆ, ರಾಜ್ಯಾದ್ಯಂತ ದೊಡ್ಡ ಹೋರಾಟ ಮತ್ತು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

