ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ: ಪ್ರತಿ ಲೀಟರ್ಗೆ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಕರ್ನಾಟಕದಲ್ಲಿ ಹಾಲು ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಹಾಲು ಉತ್ಪಾದಕರು ಪ್ರತಿ ಲೀಟರ್ಗೆ ₹8 ಹೆಚ್ಚಳಕ್ಕೆ ಆಗ್ರಹಿಸಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಲಿದೆ. ಸರ್ಕಾರ ಈ ಬೇಡಿಕೆಗೆ ಒಪ್ಪಿಕೊಳ್ಳುತ್ತದೆಯೇ ಅಥವಾ ಕಡಿಮೆ ದರ ನಿಗದಿಪಡಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವ ಆತಂಕ ಎದುರಾಗಿದೆ. ಹಾಲು ಉತ್ಪಾದಕರು ಪ್ರತಿ ಲೀಟರ್ಗೆ 8 ರೂ. ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಗ್ರಾಹಕರಿಗೆ ಹಾಲಿನ ದರ ಏರಿಕೆಯು ನೇರವಾಗಿ ಪರಿಣಾಮ ಬೀರಲಿದೆ. ಹಾಲು ಉತ್ಪಾದಕರಾದ ಬಮುಲ್, ಚಮುಲ್, ಮಂಡ್ಯ ಮಿಲ್ಕ್ ಹಾಗೂ ತುಮಕೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳು ದರ ಏರಿಕೆಗೆ ಆಗ್ರಹಿಸಿವೆ.
ದರ ಏರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಹಾಲು ಉತ್ಪಾದಕರು ಸಿದ್ಧತೆ ನಡೆಸಿದ್ದಾರೆ. ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ರೈತರು ಒಗ್ಗಟ್ಟಾಗಿ ಒತ್ತಡ ಹೇರಲು ಕರೆ ನೀಡಲಾಗಿದೆ. ಮೂರು ದಿನಗಳ ಒಳಗೆ ಬೆಲೆ ಏರಿಕೆ ಮಾಡಿಲ್ಲ ಅಂದರೆ ಪ್ರತಿ ಜಿಲ್ಲೆಯಿಂದ ‘ವಿಧಾನ ಸೌಧ ಚಲೋ’ ಮಾಡ್ತೀವಿ ಎಂದು ಸರ್ಕಾರಕ್ಕೆ ಹಾಲು ಒಕ್ಕೂಟಗಳು ಗಡುವು ವಿಧಿಸಿರುವುದಾಗಿ ಕೆಎಂಎಫ್ ಮಾಜಿ ನಿರ್ದೇಶಕ ವೀರಭದ್ರಬಾಬು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ತೀವ್ರ ಬರಗಾಲ, ಶೇ 70 ರಷ್ಟು ಮಳೆ ಕೊರತೆ, ಹೀಗಾಗಿ ಹುಲ್ಲಿನ ಕೊರತೆ ಕೊರತೆ, ಪಶುಆಹಾರದ ಕಚ್ಚಾ ಸಾಮಾಗ್ರಿ ಮೆಕ್ಕೆ ಜೋಳ, ಇಂಡಿ ಬೂಸಾ, ಕಾಕಂಬಿ ದರ ಶೇ25 ರಷ್ಟು ಏರಿಕೆ, ರಾಸುಗಳಿಗೆ ಬಳಸುವ ನೆಲಹಾಸು ದರ ಏರಿಕೆ, ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕಚ್ಚಾತೈಲ ಪೆಟ್ರೋಲ್ ಡಿಸೇಲ್ ದರ ವೂ ಏರಿಕೆಯಾಗಿದೆ. ಈ ಕಾರಣಗಳಿಂದ ಹಾಲಿನ ದರ ಹೆಚ್ಚಿಸಬೇಕು ಎಂಬುದು ಉತ್ಪಾದಕರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
