‘ಕೈ’ ಪ್ರಣಾಳಿಕೆ ಪರಿಣಾಮವೇ? ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು!

ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಮಹಿಳೆಯರು ಅಂಚೆ ಕಚೇರಿಯತ್ತ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿಯಿಂದ ಟೋಕ‌ನ್ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ 4 ಗಂಟೆಗೇ ಟೋಕನ್ ವಿತರಣೆ ಆರಂಭವಾಗುತ್ತಿದೆ. ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಟೋಕನ್ ಪಡೆಯುತ್ತಿದ್ದಾರೆ.

‘ಕೈ’ ಪ್ರಣಾಳಿಕೆ ಪರಿಣಾಮವೇ? ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದ ಮಹಿಳೆಯರು!
| Updated By: ಗಣಪತಿ ಶರ್ಮ

Updated on:May 29, 2024 | 2:53 PM

ಬೆಂಗಳೂರು, ಮೇ 29: ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ (Bengaluru Post Office) ಖಾತೆ ತೆರೆಯುವುದಕ್ಕಾಗಿ ಕಳೆದ ಎರಡು ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ. ನೀಡುವ ‘ಮಹಾಲಕ್ಷ್ಮಿ’ ಯೋಜನೆ ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress Manifesto) ಉಲ್ಲೇಖಿಸಿದ ಮತ್ತು ಆ ಬಗ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿಕೆ ನೀಡಿದ್ದರ ಪರಿಣಾಮ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಪ್ರಣಾಳಿಕೆ ಬಿಡುಗಡೆಯಾಗಿ ಹಲವಾರು ದಿನ ಕಳೆದ ನಂತರ ಈ ಬೆಳವಣಿಗೆಯಾಗಿರುವುದು ಕುತೂಹಲ ಮೂಡಿಸಿದೆ.

‘ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಡಿಜಿಟಲ್ ಖಾತೆ’ ತೆರೆಯಲು ಮಹಿಳೆಯರು ಮುಗಿಬಿದ್ದಿದ್ದಾರೆ. ಕಳೆದ 15 ದಿನದಿಂದ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾತೆ ತೆರೆಯುವುದಕ್ಕಾಗಿ ಮಹಿಳೆಯರು ಅಂಚೆ ಕಚೇರಿಗೆ ಬರುತ್ತಿದ್ದಾರೆ. ಮಹಿಳೆಯರ ನಿಯಂತ್ರಣಕ್ಕೆ ಬೆಂಗಳೂರಿನ ಅಂಚೆ ಕೇಂದ್ರ ಕಚೇರಿ ಸಿಬ್ಬಂದಿ ಹೈರಾಣಾಗಿದ್ದಾರೆ.

ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಮಹಿಳೆಯರು ಅಂಚೆ ಕಚೇರಿಯತ್ತ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ನಿಯಂತ್ರಣ ಸಾಧ್ಯವಾಗದೆ ಅಂಚೆ ಸಿಬ್ಬಂದಿಯಿಂದ ಟೋಕ‌ನ್ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ 4 ಗಂಟೆಗೇ ಟೋಕನ್ ವಿತರಣೆ ಆರಂಭವಾಗುತ್ತಿದೆ. ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಕ್ಯೂ ನಿಂತು ಟೋಕನ್ ಪಡೆಯುತ್ತಿದ್ದಾರೆ.

ಬುಧವಾರ ಕೂಡ ಮಧ್ಯಾಹ್ನವಾದರೂ ಅಂಚೆ ಕಚೇರಿಗೆ ಮಹಿಳೆಯರ ದಂಡೇ ಹರಿದುಬರುತ್ತಿದೆ. ಎಲ್ಲಿ ಬೇಕಿದ್ದರೂ ಖಾತೆ ಮಾಡಿಸಬಹುದು ಅಂದರೂ ಕೇಳದೆ ಪ್ರಧಾನ ಕಚೇರಿಗೇ ತಂಡೋಪತಂಡವಾಗಿ ಬರುತ್ತಿದ್ದಾರೆ. ಹೀಗಾಗಿ ಅಂಚೆಕಚೇರಿಯ ಮುಖ್ಯದ್ವಾರ ಸದ್ಯ ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ಅಕೌಂಟ್​​ಗೆ ಹಣ ಬರಲ್ಲವೆಂದು ಬೋರ್ಡ್

ಸದ್ಯ ಖಾತೆ ಮಾತ್ರ ತೆರೆಯಲಾಗುತ್ತಿದೆ. ಈ ಖಾತೆ ಮೂಲಕ ವಿವಿಧ ಪ್ರಾಧಿಕಾರಗಳಿಗೆ ಹಣ ಪಾವತಿಸಬಹುದು. ಆದರೆ, ಖಾತೆಗೆ ಹಣ ಬರುತ್ತದೆ ಎಂಬುದು ವದಂತಿ ಎಂದು ಬೋರ್ಡ್ ಹಾಕಲಾಗಿದೆ. ಇಲ್ಲಿ ಕೇವಲ ಖಾತೆ ಮಾಡಿಕೊಡಲಾಗುತ್ತಿದೆ . ಖಾತೆಗೆ ಹಣ ಹಾಕುತ್ತಿಲ್ಲ ಎಂದು ಬೋರ್ಡ್​ನಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Wed, 29 May 24

Follow us