ಫುಡ್ ಸ್ಯಾಂಪಲ್ ತಗೊಳ್ಳಿ, ಹೋಟೆಲ್ ಹೆಸರು ಹೇಳ್ಬೇಡಿ! FSSAI ದಾಳಿ ವೇಳೆ ಬೆಂಗಳೂರಿನ ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಬೆಂಗಳೂರಿನ ಸ್ಟಾರ್ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ದಾಳಿ ನಡೆಸಿದೆ. ನೈರ್ಮಲ್ಯ ಲೋಪಗಳು, ಕಳಪೆ ಆಹಾರ ಪದಾರ್ಥಗಳು ಬಯಲಾದ ಹಿನ್ನೆಲೆಯಲ್ಲಿ ಹೋಟೆಲ್ಗಳು ಮುಜುಗರಕ್ಕೊಳಗಾಗಿವೆ. ಹೆಸರು ಬಹಿರಂಗಪಡಿಸದಂತೆ ಹೋಟೆಲ್ ಸಂಘಟನೆ ಮನವಿ ಮಾಡಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಮುಂದುವರಿಸಲು ಅಧಿಕಾರಿಗಳು ದೃಢಸಂಕಲ್ಪ ಮಾಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 2: ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು (FSSAI) ಸ್ಟಾರ್ ಹೋಟೆಲ್ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ದಾಳಿಗಳಿಂದ ಮುಜುಗರಕ್ಕೊಳಗಾದ ಹೋಟೆಲ್ ಮಾಲೀಕರು, ‘ಫುಡ್ ಸ್ಯಾಂಪಲ್ಗಳನ್ನು ತೆಗೆದುಕೊಳ್ಳಿ, ಆದರೆ ತಮ್ಮ ಹೋಟೆಲ್ ಹೆಸರುಗಳನ್ನು ಬಹಿರಂಗಪಡಿಸಬೇಡಿ’ ಎಂದು ಇಲಾಖೆಗೆ ಮನವಿ ಮಾಡಿದ್ದಾರೆ. ಹೆಸರು ಬಹಿರಂಗವಾದರೆ ಜನ ಬರಲ್ಲ, ಬ್ರ್ಯಾಂಡ್ ಇಮೇಜ್ಗೆ ಧಕ್ಕೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
FSSAI ದಾಳಿ ವೇಳೆ, ಪನ್ನೀರ್ನಲ್ಲಿ ಜಿರಳೆ, ವಾರಗಟ್ಟಲೆ ಇರಿಸಿದ ಮಾಂಸ ಮತ್ತು ಸಾಸ್ನಲ್ಲಿ ಜಿರಳೆ ಓಡಾಡುತ್ತಿದ್ದಂತಹ ಅನಿರೀಕ್ಷಿತ ಅಸಹ್ಯಕರ ಅಂಶಗಳು ಹಲವು ಹೋಟೆಲ್ಗಳಲ್ಲಿ ಪತ್ತೆಯಾಗಿವೆ. ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ದೊರೆಯಬೇಕು ಎಂಬುದು ಅಧಿಕಾರಿಗಳ ನಿಲುವಾಗಿದೆ. ಇದೇ ರೀತಿ ಶಿವಮೊಗ್ಗದಲ್ಲೂ ಫುಡ್ ಕೋರ್ಟ್ಗಳ ಮೇಲೆ ದಾಳಿಯಾಗಿದ್ದು, ಅಧಿಕಾರಿಗಳು ನೈರ್ಮಲ್ಯ ಪಾಲನೆ ಕುರಿತು ಕಟ್ಟೆಚ್ಚರ ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡುವವರಿಗೆ 15 ದಿನಗಳ ಗಡುವು ನೀಡಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

