ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ: ಕಣ್ಣಿಗೆ ಗಂಭೀರ ಗಾಯ
ಮೈಸೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿ ರೆಹಾನ್ ಶರೀಫ್ ಮೇಲೆ ವಿಜ್ಞಾನ ಆ್ಯಕ್ಟಿವಿಟಿ ಮಾಡಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಾಲೆಯ ಶಿಕ್ಷಕ ಸುರೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಣ್ಣಿಗೆ ಗಂಭೀರ ಗಾಯವಾಗಿ ಚಿಕಿತ್ಸೆ ಪಡೆದಿರುವ ವಿದ್ಯಾರ್ಥಿ, ಶಿಕ್ಷಕನ ಬೆದರಿಕೆಯಿಂದ ಸತ್ಯ ಮುಚ್ಚಿಟ್ಟಿದ್ದ. ತಂದೆ ವಾಸೀಮ್ ಶರೀಫ್ ದೂರಿನನ್ವಯ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮೈಸೂರು, ಸೆಪ್ಟೆಂಬರ್ 08: ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಅಮಾನವೀಯವಾಗಿ ಹಲ್ಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ವಿಜ್ಞಾನದ ಆ್ಯಕ್ಟಿವಿಟಿಯೊಂದನ್ನು ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕ ಸುರೇಶ್, ವಿದ್ಯಾರ್ಥಿ ರೆಹಾನ್ ಶರೀಫ್ ಕಣ್ಣಿಗೆ ಮುಷ್ಟಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯಿಂದ ವಿದ್ಯಾರ್ಥಿಯ ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತೆರೆಯಲು ಸಾಧ್ಯವಾಗದಷ್ಟು ಗಂಭೀರ ಗಾಯವಾಗಿದೆ. ಘಟನೆ ನಡೆದ ನಂತರ, ಯಾರಿಗಾದರೂ ಹೇಳಿದರೆ ಶಾಲೆಯಿಂದ ಟಿಸಿ ನೀಡಿ ಹೊರಹಾಕುವುದಾಗಿ ಶಿಕ್ಷಕ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದರಂತೆ. ಇದರಿಂದ ಹೆದರಿದ ರೆಹಾನ್, ತನಗೆ ಟೇಬಲ್ಗೆ ತಾಗಿ ಗಾಯವಾಗಿದೆ ಎಂದು ಕುಟುಂಬಸ್ಥರಿಗೆ ಸುಳ್ಳು ಹೇಳಿದ್ದ. ಆರಂಭದಲ್ಲಿ ಅದನ್ನು ನಂಬಿದ ಕುಟುಂಬಸ್ಥರು ಚಿಕಿತ್ಸೆ ಕೊಡಿಸಿದ್ದರು. ಆದರೆ, ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ವಿದ್ಯಾರ್ಥಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ವಿದ್ಯಾರ್ಥಿಯ ತಂದೆ ಶಿಕ್ಷಕ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

