ಹೇಯ್, ಏನು ಯಾವಾಗ್ಲೂ ನೀನೇ ಕೇಳ್ತಿರ್ತೀಯಾ?: ಸುದ್ದಿಗಾರರೊಬ್ಬರನ್ನು ಗದರಿದ ಸಿದ್ದರಾಮಯ್ಯ

Updated on: May 10, 2024 | 4:13 PM

Siddaramaiah at Mysore: ಮೈಸೂರಿಗೆ ಹೋಗಿದ್ದ ಸಿದ್ದರಾಮಯ್ಯಗೆ ಅಲ್ಲಿ ಸುದ್ದಿಗಾರರಿಂದ ಪ್ರಶ್ನೆಗಳ ಸುರಿಮಳೆಯೇ ಆಯಿತು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಳಲಾದ ಸಾಲು ಸಾಲು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಂಯಮದಿಂದಲೇ ಉತ್ತರ ನೀಡಿದರು. ಕೆಲವೊಮ್ಮೆ ಮಾಧ್ಯಮದವರ ಪ್ರಶ್ನೆ ಅತಿರೇಕಕ್ಕೆ ಹೋದಾಗ ಗದರಿದ ಘಟನೆಯೂ ಆಯಿತು. ಸಾಲು ಸಾಲಾಗಿ ಪ್ರಶ್ನೆ ಕೇಳಲು ಹೋದ ಮಾಧ್ಯಮದವರೊಬ್ಬರಿಗೆ ಸಿದ್ದರಾಮಯ್ಯ ಗದರಿದರು.

ಮೈಸೂರು, ಮೇ 10: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇರಾ ನೇರ ಮಾತುಗಳಿಗೆ ಹೆಸರುವಾಸಿ. ಇದ್ದ ವಿಷಯವನ್ನು ಇದ್ದಂತೆ ಹೇಳುತ್ತಾರೆ. ಬೈಟ್ ಪಡೆಯಲು ಬರುವ ಮಾಧ್ಯಮದವರ ಮೇಲೆ ಸಿದ್ದರಾಮಯ್ಯ ಗದರಿದ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. ಕೆಲವೊಮ್ಮೆ ಪ್ರೀತಿಯಿಂದ ಗದರುತ್ತಾರೆ, ಕೆಲವೊಮ್ಮೆ ಕೋಪದಿಂದಲೇ ಬಯ್ಯುವುದುಂಟು. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ಗದರಿದ ಘಟನೆ ನಡೆಯಿತು. ‘ಏಯ್, ಯಾವಾಗ್ಲೂ ನೀನೇ ಕೇಳ್ತಿರ್ತೀಯಾ, ಅವ್ರಿಗೂ ಕೇಳೋಕೆ ಬಿಡು. ಅವರಾದ್ಮೇಲೆ ನಿಂದು…’ ಎಂದು ಸುದ್ದಿಗಾರರೊಬ್ಬರನ್ನು ಸಿದ್ದರಾಮಯ್ಯ ಗದರಿದರು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂಬ ವಿಚಾರದ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು.

ಸಿದ್ದರಾಮಯ್ಯ ಮಾತನಾಡುತ್ತಾ, ಈ ಹಿಂದೆ ಸಿಬಿಐ ತನಿಖೆಗೆ ಕೊಡಲಾಗಿದ್ದ ಕೇಸ್​ಗಳ ನಿದರ್ಶನವನ್ನು ತೆರೆದಿಟ್ಟರು. ಜಾರ್ಜ್ ಕೇಸ್, ಪರೇಶ್ ಮೆಹ್ತಾ ಕೇಸ್, ಡಿಕೆ ರವಿ ಕೇಸ್ ಅನ್ನು ಈ ಹಿಂದೆ ಸಿಬಿಐ ತನಿಖೆಗೆ ಕೊಡಲಾಗಿತ್ತು. ಏನಾಯಿತು ಆ ಕೇಸ್​​ಗಳು? ಯಾರಿಗಾದರೂ ಶಿಕ್ಷೆ ಆಯಿತಾ? ಹಾಗಂತ ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲವೆಂದಲ್ಲ. ಆದರೆ, ನಮ್ಮ ಪೊಲೀಸರ ಬಗ್ಗೆಯೂ ನಂಬಿಕೆ ಇಡಬೇಕಲ್ಲವಾ? ಎಂದು ಸಿದ್ದರಾಮಯ್ಯ ಕೇಳಿದರು.

ಇದನ್ನೂ ಓದಿ: ಸಿಬಿಐಯನ್ನು ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಅಂದಿದ್ದರು: ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೆನ್ ಡ್ರೈವ್ ಅನ್ನು ಮಲೇಷ್ಯಾ ಆಸ್ಟ್ರೇಲಿಯಾದಲ್ಲಿ ಸಿದ್ಧಪಡಿಸಲಾಗಿದೆ ಎನ್ನುವ ವದಂತಿಗಳನ್ನು ಸಿದ್ದರಾಮಯ್ಯ ತಳ್ಳಿಹಾಕಿದರು. ಇದು ಕೇಸ್ ತನಿಖೆಯನ್ನು ಸಿಬಿಐಗೆ ಕೊಡಿಸಲು ಬಿಜೆಪಿಯವರು ಮಾಡಿರುವ ತಂತ್ರ ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More