ಬಾಂಗ್ಲಾದೇಶದಲ್ಲಿ ನದಿ ಮಧ್ಯೆ ಹೊತ್ತಿ ಉರಿದ ಹಡಗು; 40 ಜನ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಾಗ ಅನೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು. ಕೆಲವರು ಹೊಗೆಯನ್ನು ಸೇವಿಸಿ ಸತ್ತರು, ಕೆಲವರು ಸುಟ್ಟು ಸಾವನ್ನಪ್ಪಿದರು ಮತ್ತು ಕೆಲವರು ಮುಳುಗಿ ಸಾವನ್ನಪ್ಪಿದರು. ಬೆಂಕಿ ಅನಾಹುತದ ಕಾರಣದ ಕುರಿತು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನದಿ ಮಧ್ಯೆ ಹೊತ್ತಿ ಉರಿದ ಹಡಗು; 40 ಜನ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ಬಾಂಗ್ಲಾದೇಶದಲ್ಲಿ ಬೆಂಕಿ ಅವಘಡ
Edited By:

Updated on: Feb 24, 2022 | 6:12 PM

ಢಾಕಾ: ದಕ್ಷಿಣ ಬಾಂಗ್ಲಾದೇಶದ  (Bangladesh) ಸುಗಂಧಾ ನದಿಯಲ್ಲಿ ಸುಮಾರು 800 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೂರು ಅಂತಸ್ತಿನ ಬೋಟ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಂದು ಮುಂಜಾನೆ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಢಾಕಾದಿಂದ ಪ್ರಯಾಣ ಆರಂಭಿಸಿದ ಬರ್ಗುನಾ-ಬೌಂಡ್ ಎಂವಿ ಅಭಿಜನ್-10 ಉಡಾವಣೆಯ ಇಂಜಿನ್ ಕೋಣೆಯಲ್ಲಿ ಇಂದು ಬೆಳಗಿನ ಜಾವ 3 ಗಂಟೆಗೆ (ಸ್ಥಳೀಯ ಕಾಲಮಾನ) ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಹಲವಾರು ಪ್ರಯಾಣಿಕರು ಇದ್ದರು. ಅವರಲ್ಲಿ ಅನೇಕರು ನಾಪತ್ತೆಯಾಗಿದ್ದಾರೆ.

ಬೆಂಕಿ ಹೊತ್ತಿಕೊಂಡಿದ್ದರಿಂದ ಸುಟ್ಟು ಹೋಗಿರುವ ಬೋಟ್​​ನಲ್ಲಿದ್ದ 9 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. 72 ಪ್ರಯಾಣಿಕರು ಬರಿಶಾಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಸ್ಥಳೀಯ ದೂರದರ್ಶನ ಚಾನೆಲ್‌ಗೆ ತಿಳಿಸಿದ್ದಾರೆ. ಈ ಬೆಂಕಿ ದುರಂತದಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಜನರು ಬೆಂಕಿಯಿಂದ ಸಾವನ್ನಪ್ಪಿದ್ದಾರೆ ಮತ್ತು ಕೆಲವರು ನದಿಗೆ ಹಾರಿದ ಕಾರಣ ನೀರಿನಲ್ಲಿ ಮುಳುಗಿ ಸತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡಾಗ ಅನೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು. ಕೆಲವರು ಹೊಗೆಯನ್ನು ಸೇವಿಸಿ ಸತ್ತರು, ಕೆಲವರು ಸುಟ್ಟು ಸಾವನ್ನಪ್ಪಿದರು ಮತ್ತು ಕೆಲವರು ಮುಳುಗಿ ಸಾವನ್ನಪ್ಪಿದರು. ಬೆಂಕಿ ಅನಾಹುತಕ್ಕೆ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಇದಕ್ಕಾಗಿ 7 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂದು ಮುಂಜಾನೆ ಬೆಂಕಿಯಲ್ಲಿ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಕ್ಷಣಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ಬೆಂಕಿ ಹೊತ್ತಿಕೊಂಡಿದ್ದರಿಂದ ಅನೇಕ ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿದರು. ಈ ಬೋಟ್ ಪ್ರಯಾಣಿಕರಿಂದ ತುಂಬಿತ್ತು. ಇಂದು ಬೆಳಿಗ್ಗೆ 3ರ ಸುಮಾರಿಗೆ ಉಡಾವಣೆಯ ಇಂಜಿನ್ ಕೋಣೆಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು ಮತ್ತು ಹಡಗು ಗಬ್ಖಾನ್ ಸೇತುವೆಯ ಬಳಿ ಇದ್ದಾಗ ಬೆಂಕಿ ವೇಗವಾಗಿ ಹರಡಿತು ಎಂದು ಬದುಕುಳಿದವರಲ್ಲಿ ಒಬ್ಬರಾದ ಸೈದುರ್ ರೆಹಮಾನ್ ಹೇಳಿದ್ದಾರೆಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನದಿ ಮಧ್ಯೆ ದೋಣಿ ಬೆಂಕಿಗಾಹುತಿ, 32 ಮಂದಿ ಸಾವು

Crime News: ತನ್ನ ಮಾಜಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಯುವತಿ; ಕಾರಣವೇನು ಗೊತ್ತಾ?

Published On - 6:11 pm, Thu, 24 February 22

Follow Us