Turkey Earthquake: ಟರ್ಕಿ ಭೂಕಂಪ; ಭಾರತೀಯರು ಅವಶೇಷಗಳಡಿ ಸಿಲುಕಿದ್ದಾರೆಯೇ? ರಾಯಭಾರಿ ನೀಡಿದ ಮಾಹಿತಿ ಇಲ್ಲಿದೆ

ಪರಿಸ್ಥಿತಿ ಬಿಕ್ಕಟ್ಟಿನಿಂದ ಕೂಡಿದೆ. ಪ್ರತಿ ದಿನ ಹೊಸ ಅವಶ್ಯಕತೆಗಳು ಎದುರಾಗುತ್ತವೆ. ನಾವು ಇಲ್ಲಿನ ಜನರ ಅಗತ್ಯಗಳಿಗೆ ಸ್ಪಂದಿಸುತ್ತಲೇ ಇದ್ದೇವೆ ಎಂದು ರಾಯಭಾರಿ ತಿಳಿಸಿರುವುದಾಗಿ ‘ಎಎನ್​​ಐ’ ಸುದ್ದಿಸಂಸ್ಥೆ ತಿಳಿಸಿದೆ.

Turkey Earthquake: ಟರ್ಕಿ ಭೂಕಂಪ; ಭಾರತೀಯರು ಅವಶೇಷಗಳಡಿ ಸಿಲುಕಿದ್ದಾರೆಯೇ? ರಾಯಭಾರಿ ನೀಡಿದ ಮಾಹಿತಿ ಇಲ್ಲಿದೆ
ಟರ್ಕಿಯಲ್ಲಿರುವ ಭಾರತೀಯರ ರಾಯಭಾರಿ ವೀರೇಂದ್ರ ಪಾಲ್ (ಎಎನ್​ಐ ಚಿತ್ರ)
Image Credit source: ANI

Updated on: Feb 11, 2023 | 5:14 PM

ನವದೆಹಲಿ: ಭೂಕಂಪ ಪೀಡಿತ ಟರ್ಕಿಯಲ್ಲಿ ಸುಮಾರು 3,000 ಭಾರತೀಯರು ಇದ್ದಾರೆ. ಆದರೆ ಹೆಚ್ಚಿನವರು ಭೂಕಂಪ ಪೀಡಿತ ಪ್ರದೇಶಗಳಲ್ಲಿ (Turkey Earthquake) ಇಲ್ಲ. ಅನೇಕರು ಪೀಡಿತ ಪ್ರದೇಶಗಳಿಂದ ಬೇರೆಡೆಗಳಿಗೆ ತೆರಳಿದ್ದಾರೆ ಎಂದು ಟರ್ಕಿಯಲ್ಲಿರುವ ಭಾರತೀಯರ ರಾಯಭಾರಿ ವೀರೇಂದ್ರ ಪಾಲ್ ಶನಿವಾರ ತಿಳಿಸಿದ್ದಾರೆ. ಅವಶೇಷಗಳಡಿ ಭಾರತೀಯರು ಸಿಲುಕಿರುವ ಬಗ್ಗೆ ಈವರೆಗೆ ಮಾಹಿತಿ ದೊರೆತಿಲ್ಲ ಎಂದು ಅವರು ಹೇಳಿದ್ದಾರೆ. ಜತೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ.

ಪರಿಸ್ಥಿತಿ ಬಿಕ್ಕಟ್ಟಿನಿಂದ ಕೂಡಿದೆ. ಪ್ರತಿ ದಿನ ಹೊಸ ಅವಶ್ಯಕತೆಗಳು ಎದುರಾಗುತ್ತವೆ. ನಾವು ಇಲ್ಲಿನ ಜನರ ಅಗತ್ಯಗಳಿಗೆ ಸ್ಪಂದಿಸುತ್ತಲೇ ಇದ್ದೇವೆ ಎಂದು ರಾಯಭಾರಿ ತಿಳಿಸಿರುವುದಾಗಿ ‘ಎಎನ್​​ಐ’ ಸುದ್ದಿಸಂಸ್ಥೆ ತಿಳಿಸಿದೆ. ಇದಕ್ಕೂ ಮುನ್ನ ಪಾಲ್ ಅವರು ಹಟೇ ಪ್ರಾಂತ್ಯದಲ್ಲಿ ಸೇನೆ ನಿರ್ಮಿಸಿರುವ ತಾತ್ಕಾಲಿಕ ಅಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

ಹಟೇ ಪ್ರಾಂತ್ಯದ ಇಸ್ಕೆಂಡರುನ್​ನಲ್ಲಿ ಸೇನೆ ನಿರ್ಮಿಸಿರುವ ಆಸ್ಪತ್ರೆಗೆ ಭಾರತೀಯ ಸೇನೆಯ ತಂಡದ ಜತೆಗೆ ಡಾ. ವೀರೇಂದರ್ ಪಾಲ್ ಭೇಟಿ ನೀಡಿದರು. ಟರ್ಕಿಯ ನೂರಾರು ಮಂದಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭೂಕಂಪ ನಡೆದ ಕೆಲವೇ ಕ್ಷಣಗಳಲ್ಲಿ ಇಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಇದು ವಸುಧೈವ ಕುಟುಂಬಕಂ ಸಂಕೇತವಾಗಿದೆ ಎಂದು ಟರ್ಕಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.


ಇದನ್ನೂ:  Earthquake: ಗ್ರಹ ರಚನೆ ಆಧಾರದಲ್ಲಿ 3 ದಿನಗಳ ಹಿಂದೆಯೇ ಭೂಕಂಪದ ಭವಿಷ್ಯ ನುಡಿದಿದ್ದ ಡಚ್ ವ್ಯಕ್ತಿ; ಇದು ಸಾಧ್ಯವಾ?

ಪ್ರಬಲ ಭೂಕಂಪದಿಂದ ತತ್ತರಿಸಿರುವ ಟರ್ಕಿ ನೆರವಿಗೆ ಭಾರತವು ಧಾವಿಸಿರುವ ಬೆನ್ನಲ್ಲೇ ಆ ದೇಶದ ರಾಯಭಾರಿ ಧನ್ಯವಾದ ಸಮರ್ಪಿಸಿದ್ದರು. 24 ಗಂಟೆಗಳಲ್ಲಿ ಟರ್ಕಿಯಲ್ಲಿ ಮೂರು ವಿನಾಶಕಾರಿ ಭೂಕಂಪಗಳು ಸಂಭವಿಸಿದ ನಂತರ ದೇಶಕ್ಕೆ ನೆರವು ನೀಡಿದ ಉದಾರತೆಗಾಗಿ ಭಾರತವನ್ನು ಸ್ನೇಹಿತ ಎಂದು ಕರೆದಿದ್ದಲ್ಲದೆ, ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದರು. ಅಗತ್ಯಕಾಲದಲ್ಲಿ ನೆರವಿಗೆ ಬಂದವನೇ ನಿಜವಾಗಿಯೂ ಸ್ನೇಹಿತ ಎಂದು ಹೇಳಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Sat, 11 February 23