ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಐತಿಹಾಸಿಕ ಪಾಲುದಾರಿಕೆಗೆ ಪಾಕಿಸ್ತಾನ ಸಿದ್ಧ; ವರಸೆ ಬದಲಿಸಿದ ಬಿಲಾವಲ್ ಭುಟ್ಟೋ

ಆಪರೇಷನ್ ಸಿಂಧೂರ್ ಮತ್ತು ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಪಾಕಿಸ್ತಾನದ ಮಾಜಿ ಸಚಿವ ಬಿಲಾವಲ್ ಭುಟ್ಟೋ ಸಿಂಧೂ ಜಲ ಒಪ್ಪಂದದ ರದ್ದು ವಾಪಾಸ್ ಪಡೆಯದಿದ್ದರೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಅದಕ್ಕೆ ಭಾರತ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಇದೀಗ ಯೂಟರ್ನ್ ಹೊಡೆದಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಜೊತೆ ಜಂಟಿ ಹೋರಾಟಕ್ಕೆ ಪಾಕಿಸ್ತಾನ ಸಿದ್ಧವಿದೆ ಎಂದು ವರಸೆ ಬದಲಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಐತಿಹಾಸಿಕ ಪಾಲುದಾರಿಕೆಗೆ ಪಾಕಿಸ್ತಾನ ಸಿದ್ಧ; ವರಸೆ ಬದಲಿಸಿದ ಬಿಲಾವಲ್ ಭುಟ್ಟೋ
Bilawal Bhutto

Updated on: Jul 02, 2025 | 7:05 PM

ಇಸ್ಲಾಮಾಬಾದ್, ಜುಲೈ 2: ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಕುರಿತು ಭಾರತದ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಇದೀಗ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ (Bilawal Bhutto) ಇಂದು ಭಾರತದ ಜೊತೆ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ರೂಪಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ. ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪ್ರಾದೇಶಿಕ ಶಾಂತಿಯನ್ನು ಬೆಳೆಸಲು ಐತಿಹಾಸಿಕ, ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಪಾಕಿಸ್ತಾನದ (Pakistan) ಜೊತೆ ಕೈಜೋಡಿಸಲು ಭಾರತಕ್ಕೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಕರೆ ನೀಡಿದ್ದಾರೆ. ಇಸ್ಲಾಮಾಬಾದ್ ನೀತಿ ಸಂಶೋಧನಾ ಸಂಸ್ಥೆಯಲ್ಲಿ “ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನದ ಯುದ್ಧ” ಎಂಬ ವಿಷಯದ ಕುರಿತು ಮಾತನಾಡಿದ ಭುಟ್ಟೋ, ಭಾರತವು ದ್ವೇಷವನ್ನು ಮೀರಿ ಪಾಕಿಸ್ತಾನದ ಜೊತೆ ಕೈ ಜೋಡಿಸಲು ಒತ್ತಾಯಿಸಿದರು.

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರು 26 ನಾಗರಿಕರನ್ನು ಕೊಂದ ಪಹಲ್ಗಾಮ್ ಹತ್ಯಾಕಾಂಡದ ನಂತರ ಭಾರತ ಸ್ಥಗಿತಗೊಳಿಸಿರುವ ಕಾಶ್ಮೀರ ಸಮಸ್ಯೆ ಮತ್ತು ಐಡಬ್ಲ್ಯೂಟಿ ಸೇರಿದಂತೆ ಎಲ್ಲಾ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ಪಾಕಿಸ್ತಾನಿ ನಾಯಕ ಭಾರತಕ್ಕೆ ಕರೆ ನೀಡಿದರು. “ಭಯೋತ್ಪಾದನೆಯನ್ನು ಜಂಟಿಯಾಗಿ ಎದುರಿಸಲು ಪಾಕಿಸ್ತಾನವು ಭಾರತದೊಂದಿಗೆ ಐತಿಹಾಸಿಕ, ಅದ್ಭುತ ಪಾಲುದಾರಿಕೆಯನ್ನು ರೂಪಿಸಲು ಸಿದ್ಧವಾಗಿದೆ” ಎಂದು ಭುಟ್ಟೋ ಹೇಳಿದರು.

ಇದನ್ನೂ ಓದಿ: ಭಾರತ- ಪಾಕಿಸ್ತಾನದ ನಡುವೆ ಕೈದಿಗಳು, ಮೀನುಗಾರರ ಪಟ್ಟಿಗಳ ವಿನಿಮಯ; ಭಾರತೀಯರ ಶೀಘ್ರ ಬಿಡುಗಡೆಗೆ ಆಗ್ರಹ

ಪಾಕಿಸ್ತಾನಕ್ಕೆ ಸಂಬಂಧಿಸಿದ ಭಯೋತ್ಪಾದಕರಿಂದ 26 ನಾಗರಿಕರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಸ್ಥಗಿತಗೊಳಿಸಿದ ಕಾಶ್ಮೀರ ಮತ್ತು ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ) ಸೇರಿದಂತೆ ದೀರ್ಘಕಾಲದ ವಿವಾದಗಳನ್ನು ಬಗೆಹರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ‘ಜನರ ಆಕಾಂಕ್ಷೆಗಳಿಗೆ’ ಅನುಗುಣವಾಗಿ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಬಿಲಾವಲ್ ಭುಟ್ಟೋ ಎರಡೂ ದೇಶಗಳನ್ನು ಒತ್ತಾಯಿಸಿದರು.

ಈ ಹಿಂದೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ, ಸಿಂಧೂ ಜಲ ಒಪ್ಪಂದದ ಕುರಿತು ಭಾರತಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿ ನಮಗೆ ಬೇಕಾದ ನೀರು ನದಿಯ ಮೂಲಕ ಹರಿಯಬೇಕು ಅಥವಾ ಅವರ ರಕ್ತ ಹರಿಯುತ್ತದೆ ಎಂದು ಘೋಷಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ