AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ದೊಡ್ಡ ಕ್ರಿಮಿನಲ್​ನನ್ನು ಅಪ್ಪಿಕೊಂಡಿದ್ದು ನಿರಾಸೆ ತಂದಿದೆ; ಮೋದಿ ರಷ್ಯಾ ಭೇಟಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟೀಕೆ

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಅನೇಕ ದೇಶಗಳು ಪ್ರಯತ್ನ ಮಾಡಿದ್ದವು. ಆ ದೇಶಗಳಲ್ಲಿ ಭಾರತವೂ ಒಂದು. ಶಾಂತಿ ಮಾತುಕತೆಯ ಮೂಲಕ ಯುದ್ಧ ನಿಲ್ಲಿಸಲು ಭಾರತ ಮಧ್ಯಪ್ರವೇಶಿಸಲು ಪ್ರಯತ್ನಿಸಿ ವಿಫಲವಾಗಿತ್ತು. ರಷ್ಯಾ ಉಕ್ರೇನ್ ಮೇಲೆ ಮಾಡಿದ ದಾಳಿಯನ್ನು ಭಾರತ ವಿರೋಧಿಸಿತ್ತು. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸದಲ್ಲಿದ್ದಾರೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಾಗ್ದಾಳಿ ನಡೆಸಿದ್ದಾರೆ.

ವಿಶ್ವದ ದೊಡ್ಡ ಕ್ರಿಮಿನಲ್​ನನ್ನು ಅಪ್ಪಿಕೊಂಡಿದ್ದು ನಿರಾಸೆ ತಂದಿದೆ; ಮೋದಿ ರಷ್ಯಾ ಭೇಟಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟೀಕೆ
ಪ್ರಧಾನಿ ಮೋದಿ - ಝೆಲೆನ್ಸ್ಕಿ
Follow us
ಸುಷ್ಮಾ ಚಕ್ರೆ
|

Updated on: Jul 09, 2024 | 5:47 PM

ಕೈವ್: ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ಮಧ್ಯೆ ಪಾಶ್ಚಿಮಾತ್ಯ ದೇಶಗಳೊಂದಿಗೆ ದೀರ್ಘಾವಧಿಯ ಸಂಬಂಧವನ್ನು ಕಾಪಾಡಿಕೊಳ್ಳುವ ಸಲುವಾಗಿ ಎರಡು ದಿನಗಳ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಮಾಸ್ಕೋಗೆ ತೆರಳಿದ್ದಾರೆ. ಅಲ್ಲಿ ಅವರನ್ನು ಆಲಂಗಿಸಿಕೊಳ್ಳುವ ಮೂಲಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಂವಾದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೋಮವಾರ ರಷ್ಯಾದ ದಾಳಿಯನ್ನು ಉಲ್ಲೇಖಿಸಿದ್ದಾರೆ. ಈ ದಾಳಿಯಲ್ಲಿ ಕೈವ್‌ನ ಮಕ್ಕಳ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿಯ ನಂತರ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯಿಂದ ಶಾಲೆಗಳು ಮತ್ತು ಹೆರಿಗೆ ಆಸ್ಪತ್ರೆಗಳು ಸೇರಿದಂತೆ ಸುಮಾರು 100 ಕಟ್ಟಡಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ: ರಷ್ಯಾದ ಇಂಧನ ಸಹಕಾರವು ಭಾರತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡಿತು; ಪುಟಿನ್​ಗೆ ಪ್ರಧಾನಿ ಮೋದಿ ಶ್ಲಾಘನೆ

ತಮ್ಮ ಟ್ವೀಟ್‌ನಲ್ಲಿ ಬಾಂಬ್ ದಾಳಿಗೊಳಗಾದ ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್‌ನಲ್ಲಿರುವ ಶಿಶುಗಳ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿರುವ ಉಕ್ರೇನ್ ಅಧ್ಯಕ್ಷ, ಪ್ರಧಾನಿ ಮೋದಿಯವರು ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಅಪ್ಪಿಕೊಂಡಿದ್ದು ಭಾರೀ ನಿರಾಸೆ ತಂದಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಮಾಸ್ಕೋದಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿ ತಬ್ಬಿಕೊಂಡಿದ್ದನ್ನು ಉಲ್ಲೇಖಿಸಿರುವ ಅವರು, “ದಾಳಿ ನಡೆದ ಈ ದಿನದಂದು ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್​ನನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ತಬ್ಬಿಕೊಳ್ಳುವುದನ್ನು ನೋಡುವುದು ಶಾಂತಿಯ ಪ್ರಯತ್ನಗಳಿಗೆ ಭಾರೀ ನಿರಾಶೆಯಾಗುತ್ತಿದೆ” ಎಂದಿದ್ದಾರೆ.

ರಾಜಧಾನಿ ಕೈವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲಿನ ದಾಳಿಯ ಕುರಿತು ಮಾತನಾಡಿದ ಝೆಲೆನ್ಸ್ಕಿ, “ರಷ್ಯಾದ ಕ್ರೂರ ಕ್ಷಿಪಣಿ ದಾಳಿಯ ಪರಿಣಾಮವಾಗಿ ಉಕ್ರೇನ್‌ನಲ್ಲಿ ಇಂದು 37 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಮಕ್ಕಳು ಮತ್ತು 13 ಮಕ್ಕಳು ಸೇರಿದಂತೆ 170 ಜನರು ಗಾಯಗೊಂಡಿದ್ದಾರೆ. ಯುವ ಕ್ಯಾನ್ಸರ್ ರೋಗಿಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾದ ಕ್ಷಿಪಣಿಯು ಉಕ್ರೇನ್‌ನ ಅತಿದೊಡ್ಡ ಮಕ್ಕಳ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ.” ಎಂದಿದ್ದಾರೆ.

ಇದನ್ನೂ ಓದಿ: ‘ಸಮರದಿಂದ ಪರಿಹಾರ ಇಲ್ಲ’- ಉಕ್ರೇನ್ ಯುದ್ಧ ನಿಲ್ಲಿಸಲು ಪುಟಿನ್​ಗೆ ಮೋದಿ ಮನವಿ; ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆಗೆ ನಿರ್ಧಾರ

ಕಳೆದ ತಿಂಗಳು ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದ ನಂತರ ನರೇಂದ್ರ ಮೋದಿಯವರ ಮೊದಲ ಭೇಟಿ ಇದಾಗಿದೆ. ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಇದು ರಷ್ಯಾಕ್ಕೆ ಅವರ ಮೊದಲನೆಯ ಭೇಟಿಯಾಗಿದೆ.

ಕಳೆದ ತಿಂಗಳು ಇಟಲಿಯ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಭೇಟಿಯಾಗುವುದು ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ನರೇಂದ್ರ ಮೋದಿ ಅವರು ಝೆಲೆನ್ಸ್ಕಿಯವರನ್ನು ಭೇಟಿಯಾಗಿದ್ದರು. ಇಬ್ಬರೂ ಅಪ್ಪುಗೆಯನ್ನು ಹಂಚಿಕೊಳ್ಳುವ ಫೋಟೋ ಹರಿದಾಡಿತ್ತು. ಶಾಂತಿ ಮಾತುಕತೆಯ ಮೂಲಕ ಯುದ್ಧ ಕೈ ಬಿಡುವಂತೆ ಪ್ರಧಾನಿ ಮೋದಿ ಈ ಹಿಂದೆಯೂ ಪುಟಿನ್ ಹಾಗೂ ಝೆಲೆನ್ಸ್ಕಿ ಅವರಿಗೆ ಸಲಹೆ ನೀಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ