AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ

ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‌ನಲ್ಲಿ ಅವರ ವಸತಿಗೃಹದ ಹೊರಗಿನಿಂದ ಉಡಾವಣೆಯಾದ "ಅಲ್ಪ-ಶ್ರೇಣಿಯ ಪ್ರಕ್ಷೇಪಕ" ಬಳಸಿ ಕೊಲ್ಲಲಾಯಿತು ಎಂದು ಇರಾನ್ ಶನಿವಾರ ಹೇಳಿದೆ.  ಹೇಳಿಕೆಯೊಂದರಲ್ಲಿ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಆರೋಪಿಸಿದ್ದು ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದೂ ಅದು ಆರೋಪಿಸಿದೆ

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ
ಇಸ್ಮಾಯಿಲ್ ಹನಿಯೆ ಅಂತಿಮ ಯಾತ್ರೆ
ರಶ್ಮಿ ಕಲ್ಲಕಟ್ಟ
|

Updated on: Aug 03, 2024 | 8:46 PM

Share

ಟೆಹರಾನ್‌ ಆಗಸ್ಟ್  03:  ಟೆಹರಾನ್‌ನಲ್ಲಿ ಹಮಾಸ್ (Hamas)ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಬೈರುತ್‌ನಲ್ಲಿ ಲೆಬನಾನಿನ ಉಗ್ರಗಾಮಿ ಗುಂಪು ಹಿಜ್ಬುಲ್ಲಾದ ಪ್ರಮುಖ ಕಮಾಂಡರ್ ಹತ್ಯೆಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದೆ.  ಇರಾನ್ ಮತ್ತು ಲೆಬನಾನ್‌ನ ಹಿಜ್ಬೊಲ್ಲಾ ಈಗಾಗಲೇ ಇಸ್ರೇಲ್‌ನ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.  ಜುಲೈ 31 ರಂದು ಟೆಹರಾನ್‌ನಲ್ಲಿ ನಡೆದ ಇರಾನ್‌ನ ನೂತನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಇಸ್ಮಾಯಿಲ್ ಹನಿಯೆಹ್ ಅವರನ್ನು ಹತ್ಯೆ ಮಾಡಲಾಗಿತ್ತು. ಕತಾರ್‌ನಲ್ಲಿ ವಾಸಿಸುತ್ತಿದ್ದ 62 ವರ್ಷ ವಯಸ್ಸಿನ ಹನಿಯೆಹ್, 2007 ರಿಂದ ಗಾಜಾ ಪಟ್ಟಿಯನ್ನು ಆಳುತ್ತಿರುವ ಹಮಾಸ್‌ನ ರಾಜಕೀಯ ಬ್ಯೂರೋದ ಮುಖ್ಯಸ್ಥರಾಗಿದ್ದರು.

ಹನಿಯೆಹ್‌ನ ಹತ್ಯೆಗೂ ಮುನ್ನ, ಜುಲೈ 30ರಂದು ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಫುವಾಡ್ ಶುಕ್ರ್ ಕೊಲ್ಲಲ್ಪಟ್ಟರು. ಈ ವೈಮಾನಿಕ ದಾಳಿಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಜುಲೈ 27 ರಂದು ಸ್ವಾಧೀನಪಡಿಸಿಕೊಂಡ ಗೋಲನ್ ಹೈಟ್ಸ್‌ನಲ್ಲಿ 12 ಯುವಕರನ್ನು ಕೊಂದ ರಾಕೆಟ್  ಉಡಾವಣೆಗೆ ಶುಕ್ರ್ ಕಾರಣ ಎಂದು ಇಸ್ರೇಲ್ ಹೇಳಿಕೊಂಡಿದೆ.

ಇಸ್ರೇಲ್‌ನ ಮೇಲೆ ಹಮಾಸ್‌ನ  ದಾಳಿಯು  ಇತ್ತೀಚಿನ ಯುದ್ಧವನ್ನು ಪ್ರಚೋದಿಸಿದ ನಂತರ ಸುಮಾರು 10 ತಿಂಗಳುಗಳಲ್ಲಿ ಗಾಜಾದಲ್ಲಿ ಕನಿಷ್ಠ 39,550 ಪ್ಯಾಲೆಸ್ಟೀನಿಯಾದವರು ಕೊಲ್ಲಲ್ಪಟ್ಟಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಏನಾಗುತ್ತಿದೆ?

ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‌ನಲ್ಲಿ ಅವರ ವಸತಿಗೃಹದ ಹೊರಗಿನಿಂದ ಉಡಾವಣೆಯಾದ “ಅಲ್ಪ-ಶ್ರೇಣಿಯ ಪ್ರಕ್ಷೇಪಕ” ಬಳಸಿ ಕೊಲ್ಲಲಾಯಿತು ಎಂದು ಇರಾನ್ ಶನಿವಾರ ಹೇಳಿದೆ.  ಹೇಳಿಕೆಯೊಂದರಲ್ಲಿ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಆರೋಪಿಸಿದ್ದು ಇಸ್ರೇಲ್‌ಗೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದೂ ಅದು ಆರೋಪಿಸಿದೆ. ಇಸ್ರೇಲ್ “ಸೂಕ್ತ ಸಮಯ, ಸ್ಥಳ ಮತ್ತು ರೀತಿಯಲ್ಲಿ ಕಠಿಣ ಶಿಕ್ಷೆಯನ್ನು” ಪಡೆಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಲೆಬನಾನ್‌ನ ಟೆಹ್ರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು ಇಸ್ರೇಲ್‌ನೊಳಗೆ ದಾಳಿ ನಡೆಸಲಿದೆ. ಇನ್ನು ಮುಂದೆ ಮಿಲಿಟರಿ ಗುರಿಗಳಿಗೆ ಸೀಮಿತವಾಗಿರುವುದಿಲ್ಲ ಎಂದು ವಿಶ್ವಸಂಸ್ಥೆಗೆ ಇರಾನ್‌ನ ಮಿಷನ್ ಹೇಳಿದೆ.

ಉತ್ತರ ಪಶ್ಚಿಮ ದಂಡೆಯ ತುಲ್ಕರೆಮ್ ನಗರದಲ್ಲಿ ಎರಡು ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ ಒಂಬತ್ತು ಪ್ಯಾಲೆಸ್ತೀನ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ. ಹತ್ಯೆಯಾದವರಲ್ಲಿ ಸ್ಥಳೀಯ ಕಮಾಂಡರ್ ಕೂಡ ಸೇರಿದ್ದಾರೆ.  ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳಾದ ಹಮಾಸ್ ಮತ್ತು ಹಿಜ್ಬೊಲ್ಲಾದಿಂದ ಬೆದರಿಕೆಯ ನಂತರ ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಯುದ್ಧ ವಿಮಾನಗಳು ಮತ್ತು ನೌಕಾಪಡೆಯ ಯುದ್ಧನೌಕೆಗಳನ್ನು ನಿಯೋಜಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಎಎಫ್‌ಪಿ ಪ್ರಕಾರ, ಲೆಬನಾನ್‌ನಲ್ಲಿರುವ ತನ್ನ ನಾಗರಿಕರನ್ನು ‘ಲಭ್ಯವಿರುವ ಯಾವುದೇ ಟಿಕೆಟ್‌’ನಲ್ಲಿ ಹೊರಡುವಂತೆ ಅಮೆರಿಕ ಹೇಳಿದೆ.

ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಹೆಚ್ಚುವರಿ ನೌಕಾಪಡೆಯ ಕ್ರೂಸರ್‌ಗಳು ಮತ್ತು ವಿಧ್ವಂಸಕಗಳನ್ನು ಕಳುಹಿಸಲು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅನುಮೋದಿಸಿದ್ದಾರೆ ಎಂದು ಪೆಂಟಗನ್ ಹೇಳಿದೆ.

ಪೆಂಟಗನ್ ವಕ್ತಾರ ಸಬ್ರಿನಾ ಸಿಂಗ್, ಉಲ್ಬಣವು ಅನಿವಾರ್ಯ ಎಂದು ಯುಎಸ್ ನಂಬುವುದಿಲ್ಲ ಎಂದು ಹೇಳಿದರು. “ನಮ್ಮ ಸಂದೇಶದಲ್ಲಿ ನಾವು ತುಂಬಾ ನೇರವಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ, ಖಂಡಿತವಾಗಿಯೂ ನಾವು ಉದ್ವಿಗ್ನತೆಯನ್ನು ನೋಡಲು ಬಯಸುವುದಿಲ್ಲ. ಇಲ್ಲಿ ಆಫ್ ರಾಂಪ್ ಇದೆ ಎಂದು ನಾವು ನಂಬುತ್ತೇವೆ. ಅದು ಕದನ ವಿರಾಮ ಒಪ್ಪಂದವಾಗಿದೆ” ಎಂದು ಸಿಂಗ್ ಹೇಳಿರುವುದಾಗಿ ರಾಯಿಟರ್ಸ್ ಉಲ್ಲೇಖಿಸಿದೆ.

ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರ; ಇಸ್ರೇಲ್ ಮೇಲೆ ಯುದ್ಧಕ್ಕೆ ಇರಾನ್​ನ ಖಮೇನಿ ಆದೇಶ

ಗುರುವಾರ ರಾತ್ರಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಅವರು ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರವು ಉಲ್ಬಣಗೊಳ್ಳಬಹುದೆಂದು “ತುಂಬಾ ಕಳವಳ ವ್ಯಕ್ತಪಡಿಸಿದ್ದಾರೆ”. ಇರಾನ್‌ನಲ್ಲಿ ಹಮಾಸ್ ಉನ್ನತ ನಾಯಕನ ಹತ್ಯೆಯು ಕದನ ವಿರಾಮದ ಮಾತುಕತೆಯ ಪ್ರಯತ್ನಗಳಿಗೆ “ಸಹಾಯ ಮಾಡಿಲ್ಲ” ಎಂದಿದ್ದಾರೆ ಅವರು.

ಹೆಚ್ಚಿದ ಉದ್ವಿಗ್ನತೆಯ ನಡುವೆ ಜಾಗರೂಕರಾಗಿರಲು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿರಲು ಭಾರತವು ಇಸ್ರೇಲ್‌ನಲ್ಲಿರುವ ತನ್ನ ಪ್ರಜೆಗಳಿಗೆ ಕೇಳಿಕೊಂಡಿದೆ. ಇಸ್ರೇಲ್‌ನಲ್ಲಿರುವ ಭಾರತೀಯ ಮಿಷನ್ ಹೊರಡಿಸಿದ ಸಲಹೆಯು ಭಾರತೀಯರಿಗೆ ಸುರಕ್ಷತಾ ಆಶ್ರಯಗಳ ಹತ್ತಿರ ಇರುವಂತೆ ನಿರ್ದೇಶಿಸಿದೆ. ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರಿಗೆ ಭರವಸೆ ನೀಡಿದೆ.

ಗುರುವಾರ, ಲೆಬನಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶವನ್ನು ತೊರೆಯುವಂತೆ ಭಾರತೀಯರನ್ನು “ಬಲವಾಗಿ ಒತ್ತಾಯಿಸಿದೆ”. ಏರ್ ಇಂಡಿಯಾ ಕೂಡ ಶುಕ್ರವಾರ ಟೆಲ್ ಅವೀವ್‌ಗೆ ಆಗಸ್ಟ್ 8 ರವರೆಗೆ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ