
ಬೀಜಿಂಗ್, ಆಗಸ್ಟ್ 28: ನೇಪಾಳ(Nepal) ಮತ್ತು ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 469 ಕ್ಕೆ ಏರಿಕೆಯಾಗಿರುವ ಬೆನ್ನಲ್ಲೇ, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶುಕ್ರವಾರ ಮಧ್ಯಾಹ್ನ 5.1 ತೀವ್ರತೆಯ ಭೂಕಂಪ ಸಂಭವಿಸಿದೆ.
ಇನ್ನೊಂದೆಡೆ, ಮಣ್ಣು ಕುಸಿತದಿಂದ ನದಿಗೆ ಅಡ್ಡಲಾಗಿ ಸೃಷ್ಟಿಯಾಗಿದ್ದ ಕೃತಕ ಸರೋವರವು ಒಡೆದು ಮತ್ತೆ ಪ್ರವಾಹ ನುಗ್ಗುವ ಅಪಾಯವಿರುವುದರಿಂದ ಟಿಬೆಟ್ ಭಾಗದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಚೀನಾ ಭೂಕಂಪ ಜಾಲ ಕೇಂದ್ರದ (CENC) ಪ್ರಕಾರ, ಸಿಚುವಾನ್ನ ಲಾಂಗ್ಚಾಂಗ್ ಸಮೀಪ ಭೂಮಿಯ ಮೇಲ್ಮೈಯಿಂದ ಕೇವಲ 13 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಟಿಬೆಟ್ನಲ್ಲಿ ಮತ್ತೊಂದು ಪ್ರವಾಹದ ಸಾಧ್ಯತೆ ಇರುವುದರಿಂದ, ಸ್ಥಳದಲ್ಲಿದ್ದ ತುರ್ತು ರಕ್ಷಣಾ ಪಡೆಗಳನ್ನು ಕನಿಷ್ಠ 1 ಕಿಲೋಮೀಟರ್ ಹಿಂದಕ್ಕೆ ಸರಿಯುವಂತೆ ಚೀನಾ ಸರ್ಕಾರ ಆದೇಶಿಸಿದೆ.ಮುನ್ನೆಚ್ಚರಿಕಾ ಕ್ರಮವಾಗಿ ಪೀಡಿತ ಕಣಿವೆ ಪ್ರದೇಶಗಳಿಂದ 499 ಸ್ಥಳೀಯ ನಿವಾಸಿಗಳು ಹಾಗೂ 555 ಪ್ರವಾಸಿಗರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಮತ್ತಷ್ಟು ಓದಿ: ಟಿಬೆಟ್ನಲ್ಲಿ ಮತ್ತೆ ಒಡೆದ ಅಣೆಕಟ್ಟು: ನೇಪಾಳದಲ್ಲಿ 2ನೇ ಜಲಪ್ರಳಯದ ಭೀತಿ, ರಕ್ಷಣಾ ಪಡೆಗಳಿಗೆ ತುರ್ತು ಸ್ಥಳಾಂತರ ಅಲರ್ಟ್
ಅಂತಾರಾಷ್ಟ್ರೀಯ ಪರಿಹಾರ ಸಹಕಾರ: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರೊಂದಿಗೆ ಸಭೆ ನಡೆಸಿ, ಗಡಿಯಾಚೆ ಸಿಲುಕಿರುವವರ ರಕ್ಷಣೆ ಹಾಗೂ ನೇಪಾಳಕ್ಕೆ ತುರ್ತು ಪರಿಹಾರ ನೆರವು ರವಾನಿಸುವ ಬಗ್ಗೆ ಚರ್ಚಿಸಿದರು.
ಮಾಹಿತಿ ಹಂಚಿಕೆಯ ವಿವಾದ: ಟಿಬೆಟ್ ಕಡೆಯಿಂದ ಅಣೆಕಟ್ಟು ಒಡೆದ ಅಥವಾ ಹಿಮ ಸರೋವರ ಉಕ್ಕಿದ ಬಗ್ಗೆ ಬೀಜಿಂಗ್ ಸಕಾಲಕ್ಕೆ ಮುನ್ಸೂಚನೆ ನೀಡಿಲ್ಲ ಎಂದು ನೇಪಾಳ ಆರೋಪಿಸಿದೆ. ಆದಾಗ್ಯೂ, ವಿಪತ್ತು ನಿರ್ವಹಣೆಯಲ್ಲಿ ಎರಡೂ ದೇಶಗಳು ಸಮನ್ವಯದಿಂದ ಕೆಲಸ ಮಾಡಬೇಕೆಂದು ಚೀನಾ ಹೇಳಿದೆ.
ಹಿಮ ಸರೋವರಗಳ ಅಸ್ಥಿರತೆ: ಹಿಮಾಲಯ ಮತ್ತು ಟಿಬೆಟಿಯನ್ ಪ್ರಸ್ಥಭೂಮಿ ವಲಯದಲ್ಲಿ ಇತ್ತೀಚಿನ ಪ್ರವಾಹದ ಬಳಿಕ ಬಂಡೆ-ಮಣ್ಣುಗಳ ಅವಶೇಷಗಳು ನದಿಗಳಿಗೆ ಅಡ್ಡಲಾಗಿ ನೈಸರ್ಗಿಕ ಕಟ್ಟೆಗಳನ್ನು ನಿರ್ಮಿಸಿವೆ. ಇಂತಹ ಸಂದರ್ಭದಲ್ಲಿ ಸಂಭವಿಸುವ ಸಣ್ಣ ಭೂಕಂಪಗಳೂ ಆ ಕೃತಕ ಕಟ್ಟೆಗಳು ಒಡೆದು ಕೆಳಭಾಗಕ್ಕೆ ದಿಢೀರ್ ಜಲಪ್ರಳಯ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ