ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧ ಖಂಡಿಸಿ ಪ್ರತಿಭಟನೆ; ಹಿಂಸಾಚಾರದಲ್ಲಿ 14 ಜನ ಸಾವು
ನೇಪಾಳದ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಜನರಲ್ ಝಡ್ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದ ಬಳಿಕ ಕಂಡಲ್ಲಿ ಗುಂಡು ಹಾರಿಸುವ ಆದೇಶ ಹೊರಡಿಸಲಾಗಿದೆ. ನೇಪಾಳದ ಯುವ ಪ್ರಜೆಗಳು ಸರ್ಕಾರ ಸಾಮಾಜಿಕ ಮಾಧ್ಯಮ ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿದ್ದಂತೆ ಕಠ್ಮಂಡುವಿನಲ್ಲಿ ಸಾಮೂಹಿಕ ಪ್ರತಿಭಟನೆಗಳು ಭುಗಿಲೆದ್ದವು. ಪ್ರಧಾನಿ ಓಲಿ ಈ ಕ್ರಮವನ್ನು ಸಮರ್ಥಿಸಿಕೊಂಡರು, ಇದನ್ನು ರಾಷ್ಟ್ರೀಯ ಘನತೆಯ ವಿಷಯ ಎಂದು ಕರೆದರು.

ಕಠ್ಮಂಡು, ಸೆಪ್ಟೆಂಬರ್ 8: ನೇಪಾಳ (Nepal) ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು ಮತ್ತು ದೇಶವನ್ನು ವ್ಯಾಪಿಸಿರುವ ಭ್ರಷ್ಟಾಚಾರ ಸಂಸ್ಕೃತಿಯನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಯುವಕರು ಇಂದು ಕಠ್ಮಂಡುವಿನಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ಈ ವೇಳೆ ಉಂಟಾದ ಹಿಂಸಾಚಾರದಲ್ಲಿ 14 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಮತ್ತು 87 ಜನರು ಗಾಯಗೊಂಡಿದ್ದಾರೆ.
ಡಮಾಕ್ನಲ್ಲಿ, ಪ್ರತಿಭಟನಾಕಾರರು ಡಮಾಕ್ ಚೌಕ್ನಿಂದ ಪುರಸಭೆ ಕಚೇರಿಯ ಕಡೆಗೆ ಮೆರವಣಿಗೆ ನಡೆಸಿದರು. ಅಲ್ಲಿ ಅವರು ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಪ್ರತಿಕೃತಿಯನ್ನು ಸುಟ್ಟು ಕಚೇರಿಯ ಬಾಗಿಲುಗಳನ್ನು ಮುರಿಯಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು. ಇದರಲ್ಲಿ ಒಬ್ಬ ಪ್ರತಿಭಟನಾಕಾರ ತೀವ್ರವಾಗಿ ಗಾಯಗೊಂಡರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಲವಾರು ಬೈಕ್ಗಳಿಗೂ ಬೆಂಕಿ ಹಚ್ಚಲಾಯಿತು. ಇದು ಆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿತು.
ಇದನ್ನೂ ಓದಿ: ಮದ್ದೂರು ಉದ್ವಿಗ್ನ: ಕಲ್ಲು ತೂರಿದವರ ವಿರುದ್ಧ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ ವೇಳೆ ಮತ್ತೆ ಕಲ್ಲು ತೂರಾಟ, ಲಾಠಿಚಾರ್ಜ್
ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್ ಮತ್ತು ಸ್ನ್ಯಾಪ್ಚಾಟ್ ಸೇರಿದಂತೆ ಹಲವಾರು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ಇತ್ತೀಚಿನ ನಿಷೇಧದ ವಿರುದ್ಧ ಇಂದು ಕಠ್ಮಂಡುವಿನಲ್ಲಿ ಜನರೇಷನ್ ಝಡ್ ಪ್ರತಿಭಟನಾಕಾರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ಸಾವಿರಾರು ಪ್ರತಿಭಟನಾಕಾರರು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಕಠ್ಮಂಡುವಿನ ಮೈಟಿಘರ್ನಲ್ಲಿ ಜಮಾಯಿಸಿದರು. ಪ್ರತಿಭಟನಾಕಾರರು ನಿರ್ಬಂಧಿತ ವಲಯವನ್ನು ಉಲ್ಲಂಘಿಸಿ ಸಂಸತ್ತಿನ ಆವರಣವನ್ನು ಪ್ರವೇಶಿಸಿದ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಜೀವಂತ ಮದ್ದುಗುಂಡುಗಳೊಂದಿಗೆ ಪ್ರತಿಕ್ರಿಯಿಸಿದರು. ನೇಪಾಳದಲ್ಲಿನ ಅಶಾಂತಿ ಭಾರತವನ್ನು ಭದ್ರತೆಯನ್ನು ಹೆಚ್ಚಿಸಲು ಪ್ರೇರೇಪಿಸಿದೆ. ಸಶಸ್ತ್ರ ಸೀಮಾ ಬಲ (SSB) ಭಾರತ-ನೇಪಾಳ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದೆ. ಭದ್ರತೆಯನ್ನು ಹೆಚ್ಚಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ.
ಕಳೆದ ವಾರ ನೇಪಾಳವು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಂತಹ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿರ್ದಿಷ್ಟ ಗಡುವಿನೊಳಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ನೋಂದಾಯಿಸಲು ವಿಫಲವಾದ ಕಾರಣದಿಂದಾಗಿ ನಿಷೇಧಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: Operation Sindhu: ನೇಪಾಳ, ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೆ ಭಾರತ ಸಿದ್ಧತೆ, 517 ಭಾರತೀಯರ ಸ್ಥಳಾಂತರ
ಇಂದು ಸಾರ್ವಜನಿಕ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ನೇಪಾಳದ ಪ್ರಧಾನಿ ಓಲಿ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ಕ್ರಮವು ಉದ್ಯೋಗ ನಷ್ಟಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಘನತೆಯನ್ನು ಎತ್ತಿಹಿಡಿಯಲಿದೆ ಎಂದು ಅವರು ಹೇಳಿದರು. ಕಳೆದ 1 ವರ್ಷಕ್ಕೂ ಹೆಚ್ಚು ಕಾಲದಿಂದ ಸರ್ಕಾರವು ಜಾಗತಿಕ ವೇದಿಕೆಗಳನ್ನು ನೇಪಾಳಿ ಕಾನೂನಿನಡಿಯಲ್ಲಿ ನೋಂದಾಯಿಸಲು, ತೆರಿಗೆ ಪಾವತಿಸಲು ಮತ್ತು ಜವಾಬ್ದಾರಿಯುತವಾಗಿರಲು ಕೇಳಿಕೊಂಡಿತ್ತು. ಆದರೆ ಕಂಪನಿಗಳು ಆ ವಿನಂತಿಯನ್ನು ತಿರಸ್ಕರಿಸಿದವು. ಹೀಗಾಗಿ, ಅವುಗಳನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Mon, 8 September 25




