Russia-Ukraine War: ರಷ್ಯಾದ 3500ಕ್ಕೂ ಹೆಚ್ಚು ಸೈನಿಕರನ್ನು ಕೊಂದಿದ್ದಾಗಿ ಹೇಳಿದ ಉಕ್ರೇನ್; ಇಲ್ಲಿದೆ ಪ್ರಮುಖ ಬೆಳವಣಿಗೆಗಳ ವಿವರ
ಇಂದು ಮುಂಜಾನೆಯ ಹೊತ್ತಲ್ಲಿ ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ರೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ. ಮುಂದಿನ 24ಗಂಟೆ ಉಕ್ರೇನ್ ಪಾಲಿಗೆ ಅತ್ಯಂತ ನಿರ್ಣಾಯಕ ಅವಧಿ ಎಂದು ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿ (Russia-Ukraine War) ಐದು ದಿನಗಳು ಕಳೆದಿದ್ದು, ಹೋರಾಟ ತೀವ್ರಗೊಂಡಿದೆ. ಮಾಸ್ಕೋ ಉಕ್ರೇನ್ಗೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೆ ಆ ದೇಶದ 3500 ಸೈನಿಕರನ್ನು ಕೊಂದಿದ್ದೇವೆ ಮತ್ತು 200ಕ್ಕೂ ಹೆಚ್ಚು ಯೋಧರನ್ನು ಸೆರೆ ಹಿಡಿದಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. ಆದರೆ ಉಕ್ರೇನ್ನ ಈ ಹೇಳಿಕೆಯನ್ನು ರಷ್ಯಾ ಸರ್ಕಾರ ಒಪ್ಪಿಕೊಂಡಿಲ್ಲ. ಇದೆಲ್ಲದರ ಮಧ್ಯೆ ನಿನ್ನೆ ಒಂದು ಮಹತ್ವದ ಬೆಳವಣಿಗೆ ಆಗಿದೆ. ಅದೇನೆಂದರೆ ಬೆಲಾರಸ್ ಗಡಿಯಲ್ಲಿ ಉಕ್ರೇನ್ ಮತ್ತು ರಷ್ಯಾಗಳು ಶಾಂತಿ ಮಾತುಕತೆ ನಡೆಸಲಿವೆ. ಆದರೆ ಗಡಿಯಲ್ಲಿ ಎಲ್ಲಿ? ಯಾವ ಸಮಯದಲ್ಲಿ ಈ ಮಾತುಕತೆ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇಲ್ಲಿದೆ ನೋಡಿ ಪ್ರಮುಖ ಬೆಳವಣಿಗೆಗಳ ಮಾಹಿತಿ
- ರಷ್ಯಾದ 3500 ಸೈನಿಕರನ್ನು ಕೊಂದಿದ್ದಾಗಿ ಹೇಳಿಕೊಂಡಿರುವ ಉಕ್ರೇನ್ ತನ್ನ ದೇಶದಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆಯನ್ನು ನಿಖರ ಪಡಿಸಿಲ್ಲ. ರಷ್ಯಾ ದಾಳಿಗೆ 14 ಮಕ್ಕಳು ಸೇರಿ 352 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. 116 ಮಕ್ಕಳು ಸೇರಿ 1684 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
- ಈ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶದ ನ್ಯೂಕ್ಲಿಯರ್ ಫೋರ್ಸ್ನ್ನು ಹೈ ಅಲರ್ಟ್ನಲ್ಲಿ ಇಡುವಂತೆ ಸಶಸ್ತ್ರ ಪಡೆಗಳ ಮುಖ್ಯಸ್ಥನಿಗೆ ಸೂಚಿಸಿದ್ದಾರೆ. ಇದೀಗ ನಮ್ಮ ದೇಶದ ಮೇಲೆ ಹೇರಿರುವ ನಿರ್ಬಂಧಗಳು ಕಾನೂನು ಬಾಹಿರ ಎಂದು ಹೇಳಿರುವ ಪುಟಿನ್, ಆ ದೇಶಗಳು ಯಾವವೂ ನಮ್ಮ ಆರ್ಥಿಕತೆಗೆ ಸಹಾಯ ಮಾಡುವ ಸ್ನೇಹಿತರಲ್ಲ ಎಂದಿದ್ದಾರೆ. ಇನ್ನು ಪರಮಾಣು ನಿರೋಧಕ ಪಡೆಗಳಿಗೆ ಯುದ್ಧಸನ್ನದ್ಧರಾಗುವಂತೆ ಸೂಚಿಸಿದ ಪುಟಿನ್ ನಡೆಯನ್ನು ನ್ಯಾಟೋ ಖಂಡಿಸಿದೆ.
- ಇಂದು ಮುಂಜಾನೆಯ ಹೊತ್ತಲ್ಲಿ ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ರೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ. ಮುಂದಿನ 24ಗಂಟೆ ಉಕ್ರೇನ್ ಪಾಲಿಗೆ ಅತ್ಯಂತ ನಿರ್ಣಾಯಕ ಅವಧಿ ಎಂದು ಝೆಲೆನ್ಸ್ಕಿ ಹೇಳಿಕೊಂಡಿದ್ದಾಗಿ ವರದಿಯಾಗಿದೆ. ಇನ್ನು ಇಂಗ್ಲೆಂಡ್ ಮತ್ತು ಅದರ ಮಿತ್ರರಾಷ್ಟ್ರಗಳು ಉಕ್ರೇನ್ ಭದ್ರತೆಗೆ ಅಗತ್ಯವಿರುವ ಸಹಾಯವನ್ನು ಮಾಡಲು ಸಿದ್ಧ ಇರುವುದಾಗಿ ಬೋರಿಸ್ ಜಾನ್ಸನ್ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
- ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡ ಬೆನ್ನಲ್ಲೇ ಇಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಒಂದು ಅಪರೂಪದ ತುರ್ತು ಅಧಿವೇಶನ ಕರೆದಿದೆ. ಆದರೆ ಈ ಅಧಿವೇಶನ ಕರೆಯಲು ನಿರ್ಣಯ ತೆಗೆದುಕೊಂಡಿದ್ದನ್ನು ರಷ್ಯಾದ ರಾಯಭಾರಿ ಟೀಕಿಸಿದ್ದಾರೆ. ಅಂತಾರಾಷ್ಟ್ರೀಯ ಭದ್ರತೆ ಮತ್ತು ಶಾಂತಿಯನ್ನು ನಿಭಾಯಿಸುವಲ್ಲಿ, ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ ವರ್ಷ ಭೀಕರ ಅಪಘಾತ ಕಂಡಿದ್ದ ರಸ್ತೆಯ ಅಗಲೀಕರಣಕ್ಕೆ ಇಂದು ಶಂಕುಸ್ಥಾಪನೆ: ಬೆಳಗಾವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮನ
Published On - 9:25 am, Mon, 28 February 22