AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka Protest Live Updates: ಶ್ರೀಲಂಕಾ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವವರ ಮೇಲೆ ಪೊಲೀಸ್ ಫೈರಿಂಗ್; ಓರ್ವ ಸಾವು

ತೀವ್ರ ಇಂಧನ ಕೊರತೆಯು ಇಂದು ಮುಂಜಾನೆ ಶ್ರೀಲಂಕಾದಾದ್ಯಂತ ಸ್ವಯಂಪ್ರೇರಿತ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹತ್ತಾರು ವಾಹನ ಚಾಲಕರು ಟೈರ್‌ಗಳನ್ನು ಸುಟ್ಟು ರಾಜಧಾನಿಗೆ ಹೋಗುವ ಪ್ರಮುಖ ರಸ್ತೆಯನ್ನು ನಿರ್ಬಂಧಿಸಿದರು.

Sri Lanka Protest Live Updates: ಶ್ರೀಲಂಕಾ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವವರ ಮೇಲೆ ಪೊಲೀಸ್ ಫೈರಿಂಗ್; ಓರ್ವ ಸಾವು
ಶ್ರೀಲಂಕಾದಲ್ಲಿ ಪ್ರತಿಭಟನೆಕಾರರ ಮೇಲೆ ಪೊಲೀಸರ ಗುಂಡು ಹಾರಾಟ
TV9 Web
| Edited By: |

Updated on:Apr 19, 2022 | 8:15 PM

Share

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಪ್ರಶ್ನಿಸಿ ಶ್ರೀಲಂಕಾದಲ್ಲಿ(Srilanka) ಸರ್ಕಾರವನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು,  ಮೊದಲ ಬಾರಿಗೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಈ ಗುಂಡು ಹಾರಾಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಗುಂಪು ಹಿಂಸಾಚಾರಕ್ಕೆ ತಿರುಗಿ ನಮ್ಮ ಮೇಲೆ ಕಲ್ಲು ಎಸೆದ ನಂತರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸ್ ವಕ್ತಾರರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ರಾಜಧಾನಿ ಕೊಲಂಬೊದಿಂದ 95 ಕಿ.ಮೀ ದೂರದಲ್ಲಿರುವ ಮಧ್ಯ ಶ್ರೀಲಂಕಾದ ರಂಬುಕ್ಕನಾದಲ್ಲಿ(Rambukkana) ತೀವ್ರ ತೈಲ ಕೊರತೆ (oil shortages) ಮತ್ತು ಹೆಚ್ಚಿನ ಬೆಲೆಗಳನ್ನು ಪ್ರತಿಭಟಿಸಿ ಜನರು ಹೆದ್ದಾರಿ ತಡೆದಿದ್ದರು. ತೀವ್ರ ಇಂಧನ ಕೊರತೆಯು ಇಂದು ಮುಂಜಾನೆ ಶ್ರೀಲಂಕಾದಾದ್ಯಂತ ಸ್ವಯಂಪ್ರೇರಿತ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹತ್ತಾರು ವಾಹನ ಚಾಲಕರು ಟೈರ್‌ಗಳನ್ನು ಸುಟ್ಟು ರಾಜಧಾನಿಗೆ ಹೋಗುವ ಪ್ರಮುಖ ರಸ್ತೆಯನ್ನು ನಿರ್ಬಂಧಿಸಿದರು .ಪ್ರತಿಭಟನಾಕಾರರು ರಂಬುಕ್ಕನಾದಲ್ಲಿ ರೈಲು ಹಳಿ ತಡೆದು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ನಿಹಾಲ್ ತಲ್ದುವಾ ತಿಳಿಸಿದ್ದಾರೆ. ಕನಿಷ್ಠ 12 ಜನರನ್ನು ಕೆಗಲ್ಲೆ ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಹಾರ, ಔಷಧ ಮತ್ತು ಇಂಧನ ಸೇರಿದಂತೆ ಪ್ರಮುಖ ಆಮದುಗಳಿಗೆ ಹಣಕಾಸು ಒದಗಿಸಲು ಶ್ರೀಲಂಕಾವು ಡಾಲರ್‌ಗಳ ಕೊರತೆಯನ್ನು ಎದುರಿಸುತ್ತಿದೆ. 1948 ರಲ್ಲಿ ಸ್ವಾತಂತ್ರ್ಯದ ನಂತರ ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಲ್ಲಿ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಹಲವು ವಾರಗಳಿಂದ ಇಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ನಡೆದ ಹೆದ್ದಾರಿಯು ಕೇಂದ್ರ ನಗರವಾದ ಕ್ಯಾಂಡಿಯನ್ನು ರಾಜಧಾನಿ ಕೊಲಂಬೊಗೆ ಸಂಪರ್ಕಿಸುತ್ತದೆ. ಶ್ರೀಲಂಕಾದಾದ್ಯಂತದ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖಾಲಿಯಾಗಿತ್ತು. ಪ್ರಮುಖ ತೈಲ ಚಿಲ್ಲರೆ ವ್ಯಾಪಾರಿ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಇಂದು 64.2 ಶೇಕಡಾವರೆಗೆ ಬೆಲೆಗಳನ್ನು ಹೆಚ್ಚಿಸಿತು. ಇಲ್ಲಿ ಪಡಿತರ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ.

ಸ್ಥಳೀಯ ಮಾರುಕಟ್ಟೆಯ ಮೂರನೇ ಒಂದು ಭಾಗವನ್ನು ಹೊಂದಿರುವ ಪೆಟ್ರೋಲ್ ಚಿಲ್ಲರೆ ವ್ಯಾಪಾರಿ ಲಂಕಾ ಐಒಸಿ ನಿನ್ನೆ ಬೆಲೆಗಳನ್ನು ಶೇಕಡಾ 35 ರಷ್ಟು ಹೆಚ್ಚಿಸಿದೆ. ರಾಜಪಕ್ಸೆ ಅವರು ಅಧಿಕಾರದಿಂದ ಕೆಳಗಿಳಯಬೇಕು ಎಂದು 11 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಇದಕ್ಕೆ ಕೊಲಂಬೊದಲ್ಲಿ ವಾಹನ ಚಾಲಕರು ಸೇರಿಕೊಂಡಿದ್ದಾರೆ. ಔಷಧಗಳು ಮತ್ತು ಸಲಕರಣೆಗಳ ಗಂಭೀರ ಕೊರತೆಯಿಂದಾಗಿ ದೇಶದ ಪ್ರಮುಖ ಮಕ್ಕಳ ಆಸ್ಪತ್ರೆಯ ವೈದ್ಯರು ಇಂದು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಥವಾ IMF ನಿಂದ $4 ಶತಕೋಟಿ ವರೆಗೆ ಸಹಾಯ ಬಯಸುತ್ತಿದೆ.

ಇದನ್ನೂ ಓದಿ:Nepal Economic Crisis: ಶ್ರೀಲಂಕಾದ ಬೆನ್ನಲ್ಲೇ ನೇಪಾಳದಲ್ಲೂ ತೀವ್ರ ಆರ್ಥಿಕ ಬಿಕ್ಕಟ್ಟು; ತಜ್ಞರು ಏನಂತಾರೆ?

Published On - 7:36 pm, Tue, 19 April 22