ತಾಲಿಬಾನ್ ಅಗ್ರಗಣ್ಯ ನಾಯಕ ಹೈಬತುಲ್ಲಾಹ್ ಅಖುಂದ್ಜಾದಾ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾನೆಯೇ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 20, 2021 | 6:58 PM

ಅಫಘಾನಿಸ್ತಾನವನ್ನು ಮುನ್ನಡೆಸುವ ಅಥವಾ ಅದರ ಅಡಳಿತದ ಮೇಲೆ ಪ್ರಭಾವ ಬೀರುವ 7 ಪ್ರಮುಖ ತಾಲಿಬಾನಿ ನಾಯಕರಲ್ಲಿ ಅಖುಂದ್ಜಾದಾ ಒಬ್ಬನಾಗಿದ್ದಾನೆ. ತಾಲಿಬಾನ್ ಕಳೆದ ರವಿವಾರ ಅಪಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ತಾಲಿಬಾನ್ ಅಗ್ರಗಣ್ಯ ನಾಯಕ ಹೈಬತುಲ್ಲಾಹ್ ಅಖುಂದ್ಜಾದಾ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾನೆಯೇ?
ಹೈಬತುಲ್ಲಾಹ್ ಅಖುಂದ್ಜಾದಾ
Follow us on

ನವದೆಹಲಿ:  ತಾಲಿಬಾನ್ ಸುಪ್ರೀಮ್ ಲೀಡರ್ ಹೈಬತುಲ್ಲಾಹ್ ಅಖುಂದ್ಜಾದಾ ಎಲ್ಲಿದ್ದಾನೆ ಅಂತ ಯಾರಿಗೂ ಗೊತ್ತಿಲ್ಲ. ಭಾರತ ಸರ್ಕಾರವು ವಿದೇಶೀ ಗುಪ್ತಚರ ಏಜೆನ್ಸಿಗಳಿಂದ ಲಭ್ಯವಾಗುತ್ತಿರುವ ಮಾಹಿತಿಯ ಮೇಲೆ ನಿಗಾ ಇಟ್ಟಿದ್ದು ಅಖುಂದ್ಜಾದಾನನ್ನು ಪತ್ತೆಹಚ್ಚಲು ಗುಂಪಿನ ಮುಖ್ಯಸ್ಥರ ನಡುವೆ ನಡೆಯುತ್ತಿರುವ ಸಂಭಾಷಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಬ್ಬ ಹಿರಿಯ ಸರ್ಕಾರಿ ಹಿರಿಯ ಅಧಿಕಾರಿಯ ಪ್ರಕಾರ ಅಖುಂದ್ಜಾದಾ ಈಗ ಪಾಕಿಸ್ತಾನ ಸೇನೆಯ ವಶದಲ್ಲಿದ್ದು ತಾಲಿಬಾನ್ನ ಹಿರಿಯ ನಾಯಕರು ಕಳೆದ ಆರು ತಿಂಗಳುಗಳಿಂದ ಅವನನ್ನು ನೋಡಿಲ್ಲ. ರಂಜಾನ್ ಹಬ್ಬಕ್ಕಿಂತ ಒಂದು ದಿನ ಮೊದಲು ಅವನಿಂದ ಕೊನೆಯ ಬಾರಿ ಸಾರ್ವಜನಿಕ ಹೇಳಿಕೆ ಲಭ್ಯವಾಗಿತ್ತು. ಪಾಕಿಸ್ತಾನ ಈ ವಿಷಯವನ್ನು ಹೇಗೆ ಹ್ಯಾಂಡಲ್ ಮಾಡುತ್ತದೆ ಎನ್ನುವ ಬಗ್ಗೆಯೂ ಭಾರತ ತೀವ್ರ ಕುತೂಹಲ ತಳೆದಿದೆ.

ತಾಲಿಬಾನ್ ಹಿಂದಿನ ಮುಖ್ಯಸ್ಥ ಅಖ್ತರ್ ಮನ್ಸೌರ್ನನ್ನು ಅಮೇರಿಕ ಡ್ರೋಣ್ ದಾಳಿ ಮೂಲಕ ಕೊಂದ ನಂತರ ಹೈಬತುಲ್ಲಾಹ್ ಅಖುಂದ್ಜಾದಾನನ್ನು ಮೇ 2016ರಲ್ಲಿ ತಾಲಿಬಾನ್ ಸಂಘಟನೆಯ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಮನ್ಸೌರ್ ಇಬ್ಬರು ಡೆಪ್ಯೂಟಿಗಳಲ್ಲಿ ಒಬ್ಬನಾಗಿರುವ ಅಖುಂದ್ಜಾದಾನನ್ನು ಪಾಕಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ ಬಡ್ತಿ ನೀಡಲಾಗಿತ್ತು.

ಎಎಫ್‌ಪಿ ಸುದ್ದಿಸಂಸ್ಥೆಯ ವರದಿಯ ಪ್ರಕಾರ ಅಖುಂದ್ಜಾದಾ (50) ಒಬ್ಬ ಸೈನಿಕನಿಗಿಂತ ಹೆಚ್ಚು ಕಾನೂನು ವಿದ್ವಾಂಸನೆಂದು ಪರಿಗಣಿಸಲಾಗುತ್ತದೆ ಮತ್ತು ಇಸ್ಲಾಂ ಕುರಿತು ಅನೇಕ ವ್ಯಾಖ್ಯಾನಗಳನ್ನು ನೀಡಿರುವ ಹಿರಿಮೆ ಅವನದ್ದಾಗಿದೆ. ಅಖುಂದ್ಜಾದಾನನ್ನು ‘ಎಮಿರ್ ಅಲ್ ಮುಮೀಮೀನ್’ ಅಥವಾ ‘ವಿಶ್ವಾಸಿಗಳ ಕಮಾಂಡರ್’ ಎಂದೂ ಬಣ್ಣಿಸಲಾಗುತ್ತದೆ. ಅಲ್ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿಯನ್ನ ಸಹ ಹೀಗೆ ಕರೆಯಲಾಗುತ್ತಿತ್ತು.

ಅಫಘಾನಿಸ್ತಾನವನ್ನು ಮುನ್ನಡೆಸುವ ಅಥವಾ ಅದರ ಅಡಳಿತದ ಮೇಲೆ ಪ್ರಭಾವ ಬೀರುವ 7 ಪ್ರಮುಖ ತಾಲಿಬಾನಿ ನಾಯಕರಲ್ಲಿ ಅಖುಂದ್ಜಾದಾ ಒಬ್ಬನಾಗಿದ್ದಾನೆ. ತಾಲಿಬಾನ್ ಕಳೆದ ರವಿವಾರ ಅಪಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಲಷ್ಕರ್-ಎ -ತೈಬಾ ಮತ್ತು ಜೈಷ್-ಎ-ಮೊಹಮ್ಮದ್ ಸಂಘಟನೆಗಳ ನಾಯಕರು ತಾಲಿಬಾನ್ ನಾಯಕರೊಂದಿಗೆ ಸಮಾಲೋಚನೆ ನಡೆಸಲು ಆರಂಭಿಸಿರುವ ವರದಿಗಳು ಸಹ ಭಾರತಕ್ಕೆ ಲಭ್ಯವಾಗುತ್ತಿವೆ.

ಗುರುವಾರದಂದು ವಿಶ್ವಸಂಸ್ಥೆ ಭದ್ರತಾ ಕೌನ್ಸಿಲ್ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಅವರು, ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತಾಲಿಬಾನ್ ಅಫಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡ ನಂತರ ಭಾರತ ಮೊದಲ ಬಾರಿಗೆ ಅಫಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾತಾಡಿದೆ. ಭಯೋತ್ಪಾದಕ ಸಂಘಟನೆಗಳಾಗಿರುವ ಲಷ್ಕರ್-ಎ-ತೈಬಾ ಮತ್ತು ಜೈಷ್ ಮೊದಲಾದವುಗಳಿಗೆ ಭಾರತದಲ್ಲಿ ತಮ್ಮ ಚಟುವಟಿಕೆಗಳನ್ನು ಜಾರಿಯಲ್ಲಿಡಲು ನೆರೆ ರಾಷ್ಟ್ರಗಳಿಂದ ಕುಮ್ಮಕ್ಕು ಸಿಗುತ್ತದೆ ಎಂದು ಅವರು ಯಾವುದೇ ದೇಶದ ಹೆಸರನ್ನು ಉಲ್ಲೇಖಿಸಿದೆ ಹೇಳಿದರಾದರೂ ಅವರು ಪಾಕಿಸ್ತಾನವನ್ನು ಉದ್ದೇಶಿಸಿ ಹೇಳಿರುವರೆಂದು ವ್ಯಾಖ್ಯಾನಿಸಲಾಗುತ್ತಿದೆ. ಭಯೋತ್ಪಾದಕರ ಆಶ್ರಯ ತಾಣ, ರಕ್ತವನ್ನು ಕೈಗೆ ಮೆತ್ತಿಕೊಂಡಿರುವ ರಾಷ್ಟ್ರ ಮುಂತಾದ ಪದಗಳನ್ನು ಜೈ ಶಂಕರ್ ಬಳಸಿದರು.

ತಾಲಿಬಾನ್ ನಾಯಕತ್ವದೊಂದಿಗೆ ಭಾರತ ಯಾವ ಬಗೆಯ ಧೋರಣೆ ಇಟ್ಟುಕೊಳ್ಳಲಿದೆ ಎಂದು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಜೈ ಶಂಕರ್ ಅವರು ಇಷ್ಟು ಬೇಗ ಏನನ್ನೂ ಹೇಳಲಾಗದು ಎಂದರು.

ಈ ವಾರದ ಆರಂಭದಲ್ಲಿ, ಭಾರತ ತನ್ನ ರಾಯಭಾರಿ ಕಚೇರಿಯ ಅಧಿಕಾರಿಗಳನ್ನು ವಾಪಸ್ಸು ಕರೆಸಿಕೊಳ್ಳುತ್ತಿರುವ ನಿರ್ಧಾರವನ್ನು ಪುನರ್ ಪರಿಶೀಲಿಬೇಕೆಂದು ಕತಾರನಲ್ಲಿರುವ ತಾಲಿಬಾನಿನ ರಾಜಕೀಯ ಕಚೇರಿಯಿಂದ ಹೊರಬಿದ್ದ ಸಂದೇಶಗಳು ಭಾರತ ಸರ್ಕಾರವನ್ನು ಆಗ್ರಹಿಸಿವೆ ಎಂದು ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ. ತನ್ನ ರಾಯಭಾರಿ ಕಚೇರಿ ಮೇಲಾಗಲೀ ಅದರ ಅಧಿಕಾರಿಗಳ ಮೇಲಾಗಲೀ ಲಷ್ಕರ್ ಅಥವಾ ಜೈಷ್ ದಾಳಿ ನಡೆಸಬಹುದೆಂಬ ಹೆದರಿಕೆಯನ್ನು ಭಾರತ ಇಟ್ಟುಕೊಳ್ಳಬಾರದೆಂದು ಸಂದೇಶ ರವಾನೆಯಾಗಿರುವ ಬಗ್ಗೆ ಮಾಹಿತಿಯಿದೆ.

ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ತಾಲಿಬಾನಿಗಳು ಮಾಡುತ್ತಿರುವುದು ಸತ್ಯ.

ಆದರೆ, ಈ ಸಂದೇಶಗಳನ್ನು ಬದಿಗಿರಿಸಿದ ಭಾರತ ಅಫಫಾನಿಸ್ತಾನದಲ್ಲಿನ ಬಾರತದ ರಾಯಭಾರಿ ಕಚೇರಿಯಿಂದ ಸಿಬ್ಬಂದಿಯನ್ನು ವಿಶೇಷ ವಿಮಾನದ ವಾಪಸ್ಸು ಕರೆಸಿಕೊಂಡಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ