ರಷ್ಯಾ ಪರಮಾಣು ಶಸ್ತ್ರಾಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆಯಾ? -ಸರ್ಕಾರದ ವಕ್ತಾರ ಹೇಳಿದ್ದೇನು?

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿ ಒಂದು ತಿಂಗಳು ಕಳೆದಿದೆ. ಉಕ್ರೇನ್​ ಕೂಡ ರಷ್ಯಾಕ್ಕೆ ತಲೆ ಬಾಗುತ್ತಿಲ್ಲ. ರಷ್ಯಾದ ಅನೇಕ ಹಿರಿಯ ಸೇನಾಧಿಕಾರಿಗಳನ್ನೂ ಉಕ್ರೇನ್​ ಹತ್ಯೆಗೈದಿದೆ.

ರಷ್ಯಾ ಪರಮಾಣು ಶಸ್ತ್ರಾಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿದೆಯಾ? -ಸರ್ಕಾರದ ವಕ್ತಾರ ಹೇಳಿದ್ದೇನು?
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on: Mar 29, 2022 | 6:47 PM

ರಾಷ್ಟ್ರದ ಅಸ್ತಿತ್ವಕ್ಕೇ ಅಪಾಯ ಎದುರಾದಾಗ ಮಾತ್ರ ರಷ್ಯಾ (Russia) ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಾಡುತ್ತದೆ ಎಂದು ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಪಿಬಿಎಸ್​ ನ್ಯೂಸ್​ಹೋರ್​ ಎಂಬ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಈ ಮಾತುಗಳನ್ನಾಡಿದ್ದಾರೆ. ನಾವು ಭದ್ರತೆ ವಿಚಾರದಲ್ಲಿ ನಮ್ಮದೇ ಆದ ಪರಿಕಲ್ಪನೆ, ಪದ್ಧತಿಯನ್ನು ಹೊಂದಿದ್ದೇವೆ. ನಮ್ಮ ರಾಷ್ಟ್ರದ ಅಸ್ತಿತ್ವಕ್ಕೇ ಅಪಾಯ ಬಂದಾಗ ಮಾತ್ರ ನಾವು ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡುವ ಮೂಲಕ ಅದನ್ನು ತೊಡೆದು ಹಾಕುತ್ತೇವೆ ಎಂದಿದ್ದಾರೆ.

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿ ಒಂದು ತಿಂಗಳು ಕಳೆದಿದೆ. ಉಕ್ರೇನ್​ ಕೂಡ ರಷ್ಯಾಕ್ಕೆ ತಲೆ ಬಾಗುತ್ತಿಲ್ಲ. ರಷ್ಯಾದ ಅನೇಕ ಹಿರಿಯ ಸೇನಾಧಿಕಾರಿಗಳನ್ನೂ ಉಕ್ರೇನ್​ ಹತ್ಯೆಗೈದಿದೆ. ರಷ್ಯಾ ಆಕ್ರಮಣಕ್ಕೆ ತುತ್ತಾದ ಉಕ್ರೇನ್​ಗೆ ವಿಶ್ವದ ಅನೇಕ ರಾಷ್ಟ್ರಗಳು ಬೆಂಬಲ ನೀಡಿವೆ. ವಿವಿಧ ದೇಶಗಳ ಸ್ವಯಂ ಸೇವಕರು ಅಲ್ಲಿಗೆ ಹೋಗಿ ರಷ್ಯಾ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಈ ಮಧ್ಯೆ ರಷ್ಯಾ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡಬಹುದಾ ಎಂಬ ಚರ್ಚೆ ಹೊರಬೀಳುತ್ತಿದೆ. ಆದರೆ ಸದ್ಯ ಉಕ್ರೇನ್​​ನಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳೂ ಪರಮಾಣು ಶಸ್ತ್ರಾಸ್ತ್ರ ಬಳಕೆಗೆ ಕಾರಣವಾಗುವಂಥದ್ದಲ್ಲ ಎಂದು ಡಿಮಿಟ್ರಿ ಹೇಳಿದ್ದಾರೆ.

ಇವೆಲ್ಲವುಗಳ ಮಧ್ಯೆ ರಷ್ಯಾ -ಉಕ್ರೇನ್​ ಮಧ್ಯೆ ಟರ್ಕಿಯ ಇಸ್ಟಾನ್​​ಬುಲ್​ ಎಂಬಲ್ಲಿ ಮಾತುಕತೆ ನಡೆಯುತ್ತಿದೆ. ಉಕ್ರೇನ್​​ನಲ್ಲಿ ಸಿಲುಕಿರುವವರಿಗೆ ಮಾನವೀಯ ನೆರವು ನೀಡುವುದು ಈ ಮಾತುಕತೆಯ ಕನಿಷ್ಠ ಉದ್ದೇಶವಾಗಿದ್ದರೆ, ಕದನ ವಿರಾಮ ಘೋಷಣೆ ಗರಿಷ್ಠ ಉದ್ದೇಶವಾಗಿದೆ ಎಂದು ಉಕ್ರೇನ್​ ವಿದೇಶಾಂಗ ವ್ಯವಹಾರಗಳ ಸಚಿವ ಕುಲೆಬಾ ತಿಳಿಸಿದ್ದಾರೆ. ಈ ಮಧ್ಯೆ ರಷ್ಯಾ ಸೈನಿಕರು ನಿರಂತರವಾಗಿ ಇಂಧನ ಸಂಗ್ರಹ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಮೂಲಕ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಉಕ್ರೇನ್​ ಸೇನೆ ಆರೋಪಿಸಿದೆ.

ಇದನ್ನೂ ಓದಿ: Babar Murder Case: ಖುಷಿನಗರದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಮುಸ್ಲಿಂ ವ್ಯಕ್ತಿಯ ಹತ್ಯೆ; 4 ಆರೋಪಿಗಳ ಬಂಧನ