ನವದೆಹಲಿ, ಜುಲೈ 14: ಕೇಂದ್ರ ಬಜೆಟ್ ಮಂಡನೆ ಆಗಲು ಕೆಲವೇ ದಿನ ಬಾಕಿ ಇದೆ. ವಿವಿಧ ವಲಯಗಳ ನಿರೀಕ್ಷೆ ಹಲವಿವೆ. ಸರ್ಕಾರ ಆದ್ಯತೆ ಕೊಡಲಿರುವ ನಾಲ್ಕು ವರ್ಗಗಳೆಂದರೆ ಯುವಜನ, ಮಹಿಳೆ, ಕೃಷಿಕರು ಮತ್ತು ಶ್ರಮಿಕರು. ಅನ್ನದಾತ ಎನಿಸಿರುವ ಕೃಷಿಕರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಗುರಿ ಇನ್ನೂ ಈಡೇರಿಲ್ಲ. 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸುಮಾರು 10 ಕೋಟಿ ರೈತರನ್ನು ತಲುಪಿದೆ. ಇದು ಇನ್ನೂ ಬಹಳಷ್ಟು ಸಣ್ಣ ರೈತರನ್ನು ತಲುಪಬೇಕಿದೆ. ಯೋಜನೆ ಅಡಿ ಒಂದು ವರ್ಷದಲ್ಲಿ ನೀಡಲಾಗುತ್ತಿರುವ 6,000 ರೂ ಧನಸಹಾಯ ಸಾಲುವುದಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಮೊತ್ತವನ್ನು 8,000 ರೂಗೆ ಹೆಚ್ಚಿಸಬೇಕೆಂದು ಕೃಷಿ ತಜ್ಞರನೇಕರು ಸಲಹೆ ನೀಡಿದ್ದಾರೆ. ಸರ್ಕಾರ ಕೂಡ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿದೆ. ಆದರೆ, ಈ ಬಜೆಟ್ನಲ್ಲಿ ಪಿಎಂ ಕಿಸಾನ್ ಮೊತ್ತ ಹೆಚ್ಚಳ ಆಗುತ್ತದಾ ಖಚಿತತೆ ಇಲ್ಲ.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಜಮೀನು ಮಾಲಕತ್ವ ಹೊಂದಿರುವ ಕೃಷಿಕರಿಗೆ ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ತಲಾ ಎರಡು ಸಾವಿರ ರೂಗಳ ಮೂರು ಕಂತುಗಳಲ್ಲಿ ಒಟ್ಟು ಆರು ಸಾವಿರ ರೂ ಹಣವನ್ನು ಕೊಡುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಈ ಹಣ ಬಂದು ಬೀಳುತ್ತದೆ. ಸರ್ಕಾರ ಈವರೆಗೆ 17 ಕಂತುಗಳ ಹಣ ನೀಡಿದೆ. 3 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹಣವನ್ನು ಈ ಸ್ಕೀಮ್ನಲ್ಲಿ ಫಲಾನುಭವಿಗಳಿಗೆ ಈವರೆಗೆ ನೀಡಲಾಗಿದೆ. ಜೂನ್ ತಿಂಗಳಲ್ಲಿ 17ನೇ ಕಂತಿಗೆ ಸರ್ಕಾರ 20,000 ಕೋಟಿ ರೂಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿತ್ತು. ಒಂದು ವರ್ಷದಲ್ಲಿ ಸರ್ಕಾರ ಈ ಯೋಜನೆಗೆ 55,000 ಕೋಟಿ ರೂನಿಂದ 65,000 ಕೋಟಿ ರೂ ವ್ಯಯಿಸುತ್ತದೆ. ಯೋಜನೆ ಹಣವನ್ನು 8,000 ರೂಗೆ ಹೆಚ್ಚಿಸಿದಲ್ಲಿ ಇದು ವರ್ಷಕ್ಕೆ ಸುಮಾರು 20,000 ಕೋಟಿ ರೂ ಹೆಚ್ಚುವರಿ ಹೊರೆಯಾಗುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್ ಎಐ ಚಾಟ್ಬೋಟ್ ಬಳಸಿದ್ದೀರಾ? ಕಿಸಾನ್ ಇಮಿತ್ರಾ ಬಗ್ಗೆ ಇಲ್ಲಿದೆ ಡೀಟೇಲ್ಸ್
ನೀವು ಸ್ವಂತ ಕೃಷಿ ಭೂಮಿ ಹೊಂದಿದ್ದರೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೊಂದಾಯಿಸಬಹುದು. ಆದರೆ, ನೀವು ಜನಪ್ರತಿನಿಧಿಯಾಗಿರಬಾರದು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ವೃತ್ತಿಪರ ಕೆಲಸದಲ್ಲಿ ಇರಬಾರದು. ಈ ಯೋಜನೆಗೆ ನೊಂದಾಯಿಸುವುದು ಬಹಳ ಸುಲಭ. ಆನ್ಲೈನ್ನಲ್ಲೇ ಮಾಡಬಹುದು ಅಥವಾ ನಿಮ್ಮ ಊರಿನ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿಯೂ ನೊಂದಾಯಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ