Airports: ನಾಗರಿಕ ವಿಮಾನ ಸೇವೆಗೆ ನಿಲ್ಲಿಸಲಾಗಿದ್ದ 32 ಏರ್​​ಪೋರ್ಟ್​​ಗಳು ಈಗ ಪುನಾರಂಭ: ಎಎಐ ಘೋಷಣೆ

India's 32 civil airports open for restart: ಮೇ 9ರಿಂದ ನಾಗರಿಕ ವಿಮಾನ ಸೇವೆಗಳಿಗೆ ಸ್ಥಗಿತಗೊಳಿಸಲಾಗಿದ್ದ 32 ಏರ್​​ಪೋರ್ಟ್​​​ಗಳನ್ನು ಇವತ್ತು (ಮೇ 12, ಸೋಮವಾರ) ಪುನಾರಂಭಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಇವತ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಈ ವಿಚಾರ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನದ ಗಡಿಭಾಗದ ಪ್ರದೇಶಗಳಲ್ಲಿ ಈ 32 ವಿಮಾನ ನಿಲ್ದಾಣಗಳಿವೆ.

Airports: ನಾಗರಿಕ ವಿಮಾನ ಸೇವೆಗೆ ನಿಲ್ಲಿಸಲಾಗಿದ್ದ 32 ಏರ್​​ಪೋರ್ಟ್​​ಗಳು ಈಗ ಪುನಾರಂಭ: ಎಎಐ ಘೋಷಣೆ
ಚಂಡೀಗಡ ವಿಮಾನ ನಿಲ್ದಾಣದ ಚಿತ್ರ

Updated on: May 12, 2025 | 12:56 PM

ನವದೆಹಲಿ, ಮೇ 12: ಕಳೆದ ವಾರ ಭಾರತ ಮತ್ತು ಪಾಕಿಸ್ತಾನ (India Pakistan conflict) ನಡುವೆ ಯುದ್ದ ರೀತಿಯ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಮುಚ್ಚಲಾಗಿದ್ದ 32 ಏರ್​​ಪೋರ್ಟ್​​​ಗಳನ್ನು ಈಗ ಪುನಾರಂಭಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (AAI- Airports authority of India) ಇಂದು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ತತ್​​ಕ್ಷಣದಿಂದಲೇ ಈ 32 ಏರ್​​ಪೋರ್ಟ್​​ಗಳು ವಿಮಾನ ಸೇವೆಗೆ ಲಭ್ಯ ಇರುತ್ತವೆ ಎಂದು ತಿಳಿಸಿದೆ.

‘2025ರ ಮೇ 15ರ ಬೆಳಗ್ಗೆ 5:29ರವರೆಗೂ ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ (civil aircraft operations) 32 ಏರ್​​ಪೋರ್ಟ್​​​ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈಗ ಈ ಏರ್​ಪೋರ್ಟ್​​ಗಳು ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ತತ್​​ಕ್ಷಣದಿಂದ ಲಭ್ಯ ಇರುತ್ತದೆ. ಪ್ರಯಾಣಿಕರು ತಮ್ಮ ಫ್ಲೈಟ್ ಸ್ಥಿತಿಗತಿಯನ್ನು ನೇರವಾಗಿ ಏರ್​ಲೈನ್ಸ್ ಸಂಸ್ಥೆಯೊಂದಿಗೆ ಪರಿಶೀಲಿಸುವಂತೆ ಶಿಫಾರಸು ಮಾಡುತ್ತೇವೆ’ ಎಂದು ಏರ್ಪೋರ್ಟ್ಸ್ ಅಥಾರಿಟಿ ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲೇ ತಯಾರಿಸಿದ ಹೈಡ್ರೋಜನ್​ಶಕ್ತ ಮಿಲಿಟರಿ ಡ್ರೋನ್​​ಗಳು ನಿಯೋಜನೆಗೆ ಸಿದ್ಧ; ಭಾರತದ ವಾಯುಸೇನೆಗೆ ಮತ್ತಷ್ಟು ಬಲ

ಮೇ 9ರಂದು ವಿಮಾನ ನಿಲ್ದಾಣಗಳ ಪ್ರಾಧಿಕಾರವು 32 ಏರ್​​ಪೋರ್ಟ್​​ಗಳಲ್ಲಿ ನಾಗರಿಕ ವಿಮಾನ ಹಾರಾಟವನ್ನು ನಿಲ್ಲಿಸಲು ಆದೇಶಿಸಿತ್ತು. ಬೆಂಗಳೂರು, ಚೆನ್ನೈ, ಮುಂಬೈ ಇತ್ಯಾದಿ ನಗರಗಳ ಏರ್​​ಪೋರ್ಟ್​​​ಗಳು ಸ್ಥಗಿತಗೊಂಡಿರಲಿಲ್ಲ. ಅಮೃತಸರ, ಚಂಡೀಗಡ, ಜೈಸಲ್ಮೇರ್, ಲೇಹ್, ಪಠಾಣಕೋಟ್, ಪೋರಬಂದರ್, ಶ್ರೀನಗರ, ಶಿಮ್ಲಾ ಮೊದಲಾದ ಭಾರತ-ಪಾಕ್ ಗಡಿಭಾಗದ ಪ್ರದೇಶಗಳಲ್ಲಿರುವ ಸ್ಥಳಗಳಲ್ಲಿನ ಏರ್​​ಪೋರ್ಟ್​​​ಗಳನ್ನು ಮಾತ್ರವೇ ನಾಗರಿಕ ವಿಮಾನ ಸೇವೆಗೆ ನಿರ್ಬಂಧಿಸಲಾಗಿತ್ತು.

ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯ ಆಪರೇಷನ್ ಸಿಂದೂರ ನಡೆಸಿತು. ಇದಾದ ಬಳಿಕ ಮೇ 7ರಿಂದ 10ರವರೆಗೆ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ತೀವ್ರ ಸಂಘರ್ಷ ಏರ್ಪಟ್ಟಿತು. ಈ ಸಂಘರ್ಷವು ಯುದ್ಧಕ್ಕೆ ತಿರುಗಿ, ಪರಮಾಣ ಅಸ್ತ್ರ ಬಳಕೆಗೆ ಪಾಕಿಸ್ತಾನ ಅಣಿಗೊಳ್ಳುವ ಮಟ್ಟಕ್ಕೆ ಹೋಗಿತ್ತು. ನಂತರ, ಮೇ 10ರಂದು ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.

ಇದನ್ನೂ ಓದಿ: ಭಾರತಕ್ಕೆ ಪ್ರವಾಹೋಪಾದಿಯಲ್ಲಿ ವಾಪಸ್ ಬರುತ್ತಿರುವ ವಿದೇಶೀ ಬಂಡವಾಳ; ಏನು ಕಾರಣ?

ಭಾರತವು ಕದನ ವಿರಾಮಕ್ಕೆ ಒಪ್ಪಿಕೊಂಡಿದೆಯಾದರೂ ಕೆಲ ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ. ಭಾರತದಲ್ಲಿ ಯಾವುದೇ ಉಗ್ರ ದಾಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದರೆ ಅದನ್ನು ಯುದ್ಧ ಎಂದು ಪರಿಗಣಿಸಲಾಗುವುದು ಎನ್ನುವ ಎಚ್ಚರಿಕೆಯ ಸಂದೇಶವನ್ನು ಭಾರತ ಮುಂದಿಟ್ಟಿದೆ. ಮುಂದಿನ ಬಾರಿ ಆಪರೇಷನ್ ಸಿಂದೂರಕ್ಕಿಂತ ಇನ್ನೂ ದೊಡ್ಡ ಕ್ರಮವನ್ನು ಭಾರತ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ