ಅದಾನಿ ಕಂಪನಿಗೆ ದಂಡ ವಿಧಿಸಿದ ಸ್ಟಾಕ್ ವಿನಿಮಯ ಕೇಂದ್ರಗಳು; ಕ್ರಮ ಒಪ್ಪದ ಅದಾನಿ ಎಂಟರ್ಪ್ರೈಸಸ್; ಏನು ಕಾರಣ?

Fine Against Adani Enterprises: ಸೆಬಿ ಲಿಸ್ಟಿಂಗ್ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಅದಾನಿ ಎಂಟರ್ಪ್ರೈಸಸ್​ಗೆ 28,000 ರೂ ದಂಡ ವಿಧಿಸಿವೆ. 75 ವರ್ಷದ ವ್ಯಕ್ತಿಯನ್ನು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕ ಮಾಡಿರುವುದು ಸೆಬಿ ನಿಯಮದ ಉಲ್ಲಂಘನೆ ಎಂಬುದು ಈ ಸ್ಟಾಕ್ ವಿನಿಮಯ ಕೇಂದ್ರಗಳ ಆರೋಪವಾಗಿದೆ.

ಅದಾನಿ ಕಂಪನಿಗೆ ದಂಡ ವಿಧಿಸಿದ ಸ್ಟಾಕ್ ವಿನಿಮಯ ಕೇಂದ್ರಗಳು; ಕ್ರಮ ಒಪ್ಪದ ಅದಾನಿ ಎಂಟರ್ಪ್ರೈಸಸ್; ಏನು ಕಾರಣ?
ಅದಾನಿ ಎಂಟರ್​ಪ್ರೈಸಸ್

Updated on: Aug 23, 2023 | 1:15 PM

ನವದೆಹಲಿ, ಆಗಸ್ಟ್ 23: ನಿರ್ದೇಶಕರ ನೇಮಕದಲ್ಲಿ ಸೆಬಿ ನಿಯಮ ಉಲ್ಲಂಘನೆ (SEBI Regulations) ಮಾಡಲಾಗಿದೆ ಎಂಬ ಕಾರಣವೊಡ್ಡಿ ಅದಾನಿ ಎಂಟರ್​ಪ್ರೈಸಸ್ (Adani Enterprises) ಸಂಸ್ಥೆಯ ಮೇಲೆ ಷೇರು ವಿನಿಯಮ ಕೇಂದ್ರಗಳು ದಂಡ ಹೇರಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎರಡೂ ಕೂಡ ಅದಾನಿ ಗ್ರೂಪ್​ನ ಈ ಕಂಪನಿಗೆ ತಲಾ 28,000 ರೂ ನಷ್ಟು ದಂಡ ವಿಧಿಸಿವೆ. ಆದರೆ, ಅದಾನಿ ಎಂಟರ್ಪ್ರೈಸಸ್ ಸಂಸ್ಥೆ ಬಿಎಸ್​ಇ ಮತ್ತು ಎನ್​ಎಸ್​ಇ ಕ್ರಮ ತಪ್ಪು ನಿರ್ಧಾರ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಕಂಪನಿ ನಿರ್ದೇಶಕರ ನೇಮಕಾತಿಯಲ್ಲಿ ಸೆಬಿ ನಿಯಮ ಏನು ಹೇಳುತ್ತದೆ?

ಸೆಬಿ ಎಂಬುದು ಷೇರು ಮಾರುಕಟ್ಟೆಯ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾಗಿದೆ. ಷೇರು ವಿನಿಯಮ ಕೇಂದ್ರಗಳಲ್ಲಿ ವಹಿವಾಟು ಹೇಗೆ ನಡೆಯಬೇಕು, ಕೇಂದ್ರಗಳಲ್ಲಿ ಲಿಸ್ಟ್ ಆದ ಕಂಪನಿಗಳ ಆಡಳಿತ ವ್ಯವಹಾರ ಹೇಗಿರಬೇಕು ಇತ್ಯಾದಿ ಹಲವು ನಿಯಮಗಳನ್ನು ಸೆಬಿ ಒಳಗೊಂಡಿದೆ.

ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಒಂದು ಕಂಪನಿಯು ವಿಶೇಷ ನಿರ್ಣಯದ ಮೂಲಕ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನ್ನು ನೇಮಕ ಮಾಡಬಹುದು. ಅದು ಬಿಟ್ಟರೆ 75 ವರ್ಷ ದಾಟಿದವರನ್ನು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕ ಮಾಡಿಕೊಳ್ಳುವಂತಿಲ್ಲ. ಅಥವಾ ಅಂಥವರನ್ನು ಆ ಸ್ಥಾನದಲ್ಲಿ ಮುಂದುವರಿಸುವಂತಿಲ್ಲ ಎಂದು ಸೆಬಿ ಲಿಸ್ಟಿಂಗ್ ನಿಯಮವೊಂದು ಹೇಳುತ್ತದೆ.

ಇದನ್ನೂ ಓದಿ: eRupee App: ಒಂದೇ ಆ್ಯಪ್​ನಲ್ಲಿ ಇ-ರುಪೀ ಮತ್ತು ಯುಪಿಐ; ಕೆನರಾ ಬ್ಯಾಂಕ್​ನಿಂದ ಡಿಜಿಟಲ್ ರುಪೀ ಅಪ್ಲಿಕೇಶನ್

ಅದಾನಿ ಎಂಟರ್​ಪ್ರೈಸಸ್ ವಾದ ಏನು?

ತಮ್ಮ ಕಂಪನಿ ಮೇಲೆ ಬಿಎಸ್​ಇ ಮತ್ತು ಎನ್​ಎಸ್​ಇ 28,000 ರೂ ದಂಡ ವಿಧಿಸಿದ ಕ್ರಮ ಸರಿಯಲ್ಲ. ನಿರ್ದೇಶಕರ ನೇಮಕಾತಿಯಲ್ಲಿ ಷೇರುದಾರರ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿರುವ ಅದಾನಿ ಎಂಟರ್ಪ್ರೈಸಸ್ ಸಂಸ್ಥೆ, ನೆಕ್ಟರ್ ಲೈಫ್ ಸೈನ್ಸಸ್ ಪ್ರಕರಣವನ್ನು ಉಲ್ಲೇಖಿಸಿದೆ.

ನೆಕ್ಟರ್ ಲೈಫ್ ಸೈನ್ಸಸ್ ಮತ್ತು ಸೆಬಿ ನಡುವಿನ ವ್ಯಾಜ್ಯದಲ್ಲಿ ಎಸ್​ಎಟಿ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ಅದಾನಿ ಕಂಪನಿ ಪ್ರಸ್ತಾಪಿಸಿದೆ. ಆ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಕಂಪನಿಯ ನಿರ್ದೇಶಕರನ್ನಾಗಿ ನೇಮಕ ಮಾಡಲು ವಿಶೇಷ ನಿರ್ಣಯ ಜಾರಿಗೊಳಿಸುವ ಅವಶ್ಯಕತೆಯಾಗಲೀ, ಮುಂಚಿತವಾಗಿ ಒಪ್ಪಿಗೆ ಪಡೆಯಬೇಕಾಗಲೀ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು ಎಂದು ಅದಾನಿ ಎಂಟರ್​ಪ್ರೈಸಸ್ ವಾದ ಮುಂದಿಟ್ಟಿದೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೋಗಬೇಕೆಂದು ರೈಲು ಟಿಕೆಟ್ ಬುಕಿಂಗ್ ವೇಳೆ ಯಡವಟ್ಟು ಬೇಡ; ದಳ್ಳಾಳಿಗಳ ಬಗ್ಗೆ ಹುಷಾರ್

ಸೆಬಿ ಲಿಸ್ಟಿಂಗ್ ನಿಯಮಗಳನ್ನು ತಾನು ಮುರಿದಿಲ್ಲ. ದಂಡ ವಿಧಿಸಿದ ಕ್ರಮ ಹಿಂಪಡೆದುಕೊಳ್ಳಿ ಎಂದು ಎನ್​ಎಸ್​ಇ ಮತ್ತು ಬಿಎಸ್ಇ ಸಂಸ್ಥೆಗಳಿಗೆ ಅದಾನಿ ಎಂಟರ್ಪ್ರೈಸಸ್ ಅರ್ಜಿ ಸಲ್ಲಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us