Byju’s: ಸಂಸ್ಥೆ ನಡೆಸಲು ಇವರು ಅನರ್ಹರು: ಬೈಜುಸ್ ಮಾಲೀಕರ ವಿರುದ್ಧ ಷೇರುದಾರರ ದೂರು; ಫೋರೆನ್ಸಿಕ್ ಆಡಿಟಿಂಗ್​ಗೆ ಮನವಿ

|

Updated on: Feb 23, 2024 | 5:56 PM

Byju's Founders vs Shareholders: ಬೈಜುಸ್​ನ ಮಾಲೀಕರು ಸಂಸ್ಥೆ ನಡೆಸಲು ಅನರ್ಹರಾಗಿದ್ದಾರೆ. ಅವರನ್ನು ಉಚ್ಚಾಟಿಸಲು ಅವಕಾಶ ಕೊಡಿ ಎಂದು ಷೇರುದಾರರು ಎನ್​ಸಿಎಲ್​ಟಿ ಮೊರೆ ಹೋಗಿದ್ದಾರೆ. ಷೇರುದಾರರು ನಡೆಸುತ್ತಿರುವ ಇಜಿಎಂ ಸಭೆಗೆ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬದವರು ಗೈರಾಗಿದ್ದಾರೆ. ಇದರ ನಡುವೆ ಎನ್​ಸಿಎಲ್​ಟಿಯಲ್ಲಿ ದೂರು ದಾಖಲಾಗಿದೆ. ಬೈಜುಸ್ ಕಂಪನಿಯ ಫೋರೆನ್ಸಿಕ್ ಆಡಿಟಿಂಗ್ ನಡೆಸಬೇಕು ಎಂದೂ ಷೇರುದಾರರು ಎನ್​ಸಿಎಲ್​ಟಿಗೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

Byjus: ಸಂಸ್ಥೆ ನಡೆಸಲು ಇವರು ಅನರ್ಹರು: ಬೈಜುಸ್ ಮಾಲೀಕರ ವಿರುದ್ಧ ಷೇರುದಾರರ ದೂರು; ಫೋರೆನ್ಸಿಕ್ ಆಡಿಟಿಂಗ್​ಗೆ ಮನವಿ
ಬೈಜುಸ್
Follow us on

ನವದೆಹಲಿ, ಫೆಬ್ರುವರಿ 23: ಬೈಜುಸ್​ನ ಹೂಡಿಕೆದಾರರು ಮತ್ತು ಸಂಸ್ಥಾಪಕರ ಮಧ್ಯೆ ಜಟಾಪಟಿ ಮುಂದುವರಿಯುತ್ತಿದೆ. ಬೈಜುಸ್​ನ ಆಡಳಿತ ಮಂಡಳಿಯನ್ನು (Byjus Board) ಕಿತ್ತೊಗೆಯುವ ಸಲುವಾಗಿ ನಡೆಸಲಾಗುತ್ತಿರುವ ಷೇರುದಾರರ ತುರ್ತು ಸಭೆಗೆ ಸಿಇಒ ಬೈಜು ರವೀಂದ್ರನ್ (Byju Raveendran) ಆದಿಯಾಗಿ ಆಡಳಿತ ಮಂಡಳಿ ಸದಸ್ಯರು ಗೈರಾಗಿದ್ದಾರೆ. ಬೈಜು ಕುಟುಂಬದವರು ಈ ಇಜಿಎಂ ಅಥವಾ ತುರ್ತು ಸಭೆಯನ್ನು ಅಕ್ರಮ ಎಂದು ಕರೆದಿದ್ದಾರೆ. ಇದೇ ವೇಳೆ, ಬೈಜುಸ್​ನ ಹೂಡಿಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ. ಬೈಜು ರವೀಂದ್ರನ್ ನೇತೃತ್ವದ ಆಡಳಿತ ಮಂಡಳಿಯ ನಿರ್ವಹಣೆ ಸರಿಯಿಲ್ಲ. ಇವರು ಕಂಪನಿ ನಡೆಸಲು ಅನರ್ಹರು ಎಂದು ಎನ್​ಸಿಎಲ್​ಟಿ (NCLT) ಬಳಿ ಹೂಡಿಕೆದಾರರು ದೂರು ನೀಡಿದ್ದಾರೆ.

ಫೋರೆನ್ಸಿಕ್ ಆಡಿಟ್ ಮಾಡಿಸಬೇಕೆಂದು ಮನವಿ

ಬೈಜೂಸ್ ಕಂಪನಿಯ ಫೋರೆನ್ಸಿಕ್ ಆಡಿಟಿಂಗ್ ನಡೆಸಬೇಕೆಂದು ಇದೇ ಸಂದರ್ಭದಲ್ಲಿ ಷೇರುದಾರರು (ಹೂಡಿಕೆದಾರರು) ನ್ಯಾಯಮಂಡಳಿಗೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

ಫೋರೆನ್ಸಿಕ್ ಆಡಿಟಿಂಗ್ ಎಂಬುದನ್ನು ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಳಸಲಾಗುತ್ತದೆ. ಒಂದು ಕಂಪನಿ ಅಥವಾ ವ್ಯಕ್ತಿಯ ಎಲ್ಲಾ ಹಣಕಾಸು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಯಾವುದಾದರೂ ವಂಚನೆಯ ಸುಳಿವು ಇದೆಯಾ, ಅಪರಾಧ ಚಟುವಟಿಕೆಯ ಪ್ರಯತ್ನ ನಡೆದಿದೆಯಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ಇಂಥ ಆಡಿಟಿಂಗ್​ನಲ್ಲಿ ಮಾಡಲಾಗುತ್ತದೆ. ಈ ಆಡಿಟಿಂಗ್ ಕೋರ್ಟ್ ವಿಚಾರಣೆಯಲ್ಲಿ ಪ್ರಬಲ ಸಾಕ್ಷ್ಯ ಆಗಬಹುದು.

ಇದನ್ನೂ ಓದಿ: ಬೈಜುಸ್ ಸಿಇಒಗೆ ಲುಕ್ ಔಟ್ ಸರ್ಕುಲಾರ್ ನೋಟೀಸ್ ಹೊರಡಿಸಲು ಇಡಿ ಯತ್ನ

ಇಜಿಎಂ ಸಭೆಗೆ ಬೈಜು ರವೀಂದ್ರನ್ ವಿರೋಧ

ಬೈಜುಸ್​ನ ಮಾತೃ ಸಂಸ್ಥೆ ಥಿಂಕ್ ಅಂಡ್ ಲರ್ನ್​ನ ಆಡಳಿತ ಮಂಡಳಿಯಲ್ಲಿ ಮೂವರು ಸದಸ್ಯರಿದ್ದಾರೆ. ಸಂಸ್ಥಾಪಕ ಬೈಜು ರವೀಂದ್ರನ್, ಅವರ ಪತ್ನಿ ದಿವ್ಯಾ ಗೋಕುಲನಾಥ್, ಸಹೋದರ ರಿಜು ರವೀಂದ್ರನ್ ಅವರು ಬೋರ್ಡ್ ಸದಸ್ಯರಾಗಿದ್ದಾರೆ. ಈ ಮೂವರಿರುವ ಬೋರ್ಡ್ ಅನ್ನು ಉಚ್ಚಾಟಿಸಿ ಹೊಸ ಮಂಡಳಿ ನಿರ್ಮಿಸುವ ಪ್ರಯತ್ನದಲ್ಲಿ ಹೂಡಿಕೆದಾರರು ಇದ್ದಾರೆ. ಈ ಹಿನ್ನೆಲೆಯಲ್ಲಿ ಷೇರುದಾರರ ತುರ್ತು ಸಭೆ ಆಯೋಜಿಸಿದ್ದಾರೆ.

ಈ ಸಭೆಯನ್ನು ವಿರೋಧಿಸಿ ಬೈಜು ರವೀಂದ್ರನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸಭೆಗೆ ತಡೆ ಕೊಡಲು ಕೋರ್ಟ್ ನಿರಾಕರಿಸಿತಾದರೂ, ಸಭೆಯಲ್ಲಿ ಆಗುವ ಯಾವುದೇ ನಿರ್ಣಯವನ್ನು ಮುಂದಿನ ಕೋರ್ಟ್ ವಿಚಾರಣೆವರೆಗೂ ಜಾರಿಗೊಳಿಸುವಂತಿಲ್ಲ ಎಂದೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿತ್ತು.

ಎಕ್ಸ್​ಟ್ರಾ ಆರ್ಡಿನರಿ ಜನರಲ್ ಮೀಟಿಂಗ್ ಅಥವಾ ಇಜಿಎಂ ಸಭೆಯಲ್ಲಿ ಬೋರ್ಡ್ ಕಿತ್ತೊಗೆಯುವುದು ಮುಖ್ಯ ಅಜೆಂಡಾ ಆಗಿದೆ. ಇದನ್ನು ಕೈಗೊಳ್ಳಲು ಕೋರಂ ರಚನೆ ಆಗಬೇಕು. ಅದು ಆಗಬೇಕೆಂದರೆ ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಜರಿರಬೇಕು. ಆದರೆ, ಈಗ ನಡೆಯುತ್ತಿರುವ ಇಜಿಎಂ ಸಭೆಯಲ್ಲಿ ಬೈಜು ರವೀಂದ್ರನ್ ಮತ್ತಿತರ ಬೊರ್ಡ್ ಸದಸ್ಯರು ಹಾಜರಾಗಿಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ ಶಟಲ್ ಬಸ್ ಹತ್ತಿದ ಊಬರ್ ಸಿಇಒ; ಭಾರತದಲ್ಲಿ ಈಜಿದರೆ ಎಲ್ಲಿಯಾದರೂ ಜೈಸಬಹುದು ಎಂದ ದಾರಾ ಖುಸ್ರೋವಶಾಹಿ

ಇಂಥ ಸನ್ನಿವೇಶದಲ್ಲಿ ಷೇರುದಾರರು ಮತ್ತೊಂದು ಸಭೆ ನಡೆಸಿ ತಮ್ಮವರಲ್ಲೇ ಕರಂ ರಚಿಸಬಹುದು. ಆ ಬಳಿಕ ಮತ ಚಲಾವಣೆ ಪ್ರಕ್ರಿಯೆ ಇರುತ್ತದೆ. ಇಲ್ಲಿ ಸಂಸ್ಥಾಪಕರಾಗಿರುವ ಬೈಜು ರವೀಂದ್ರನ್ ಮತ್ತವರ ಕುಟುಂಬದ ಒಟ್ಟು ಷೇರುಪಾಲು ಶೇ. 26.3 ಇದೆ. ಆದರೆ ಇಜಿಎಂ ಸಭೆ ನಡೆಸುತ್ತಿರುವ ಷೇರುದಾರರ ಒಟ್ಟು ಪಾಲು 32 ಪ್ರತಿಶತಕ್ಕಿಂತ ಹೆಚ್ಚಿದೆ. ಹೀಗಾಗಿ, ವೋಟಿಂಗ್ ನಡೆದರೆ ಬೈಜು ರವೀಂದ್ರನ್ ತಾವೇ ಕಟ್ಟಿದ ಕಂಪನಿಯಿಂದ ಹೊರಬೀಳಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ